ಬಿಗ್‌ಬಾಸ್ ಆಂಡಿ ಅಂದ್ರೆ ಪರಮ ಕ್ರೂರಿ ಅಂದೋರ್‍ಯಾರು?

Picture of Cinibuzz

Cinibuzz

Bureau Report


ಬಿಗ್‌ಬಾಸ್ ಶೋ ಎಂಬುದೇ ಹುಚ್ಚರ ಸಂತೆ. ಹುಚ್ಚಾ ವೆಂಕಟನಂಥವರನ್ನೇ ಜುಟ್ಟು ಕೆದರಿಕೊಂಡು ಬೀದಿಗೆ ಬಿಟ್ಟ ಖ್ಯಾತಿಯೂ ಈ ಶೋಗೇ ಸಲ್ಲುತ್ತೆ. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಈ ಶೋವನ್ನು ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ!

ಇಂಥಾ ಶೋನಲ್ಲಿ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ. ಈ ಬಾರಿಯೂ ಅಂಥಾದ್ದೇ ಒಂದು ಅಸಡ್ಡಾಳ ದೈತ್ಯಾಕೃತಿಯನ್ನು ಮನೊಯೊಳಗೆ ಬಿಟ್ಟುಕೊಳ್ಳಲಾಗಿದೆ. ಆತ ಆಂಡ್ರೀವ್ ಅಲಿಯಾಸ್ ಆಂಡಿ!

ಯಾವುದೇ ಮನುಷ್ಯ ಸಹ್ಯವಾಗೋದು, ಅಸಹ್ಯ ಅನ್ನಿಸೋದು ಅಂದ, ಚೆಂದ, ಆಕೃತಿಗಳಿಂದಲ್ಲ. ಆತನ ವರ್ತನೆಗಳಿಂದ. ಇಂಥಾ ಕಾಮನ್‌ಸೆನ್ಸ್ ಕೂಡಾ ಇಲ್ಲದ ಆಂಡಿಯೆಂಬಾತ ಕೇಲವ ಬಿಗ್‌ಬಾಸ್ ಸ್ಪರ್ಧಿಗಳಿಗೆ ಮಾತ್ರವಲ್ಲದೇ ಪ್ರೇಕ್ಷಕರಿಗೂ ಕಿರಿಕಿರಿಯುಂಟು ಮಾಡುತ್ತಿದ್ದಾನೆ. ಎಂಥಾ ಸಹನೆಯಿರುವವರೂ ಕೂಡಾ ಕಪಾಳ ಚೆದುರಿ ಹೋಗುವಂತೆ ಬಾರಿಸುವಂತೆ ಕಿರಿಕಿರಿ ಉಂಟು ಮಾಡುವ ಈತ ಅದನ್ನೇ ಗೇಮ್ ಪ್ಲ್ಯಾನ್ ಅಂದುಕೊಂಡಿದ್ದಾನೆ. ಉಕ್ಕಿನಂಥಾ ದೇಹ ಹೊಂದಿದ್ದರೂ ಮಗುವಿನಂಥಾ ಮನಸು ಹೊಂದಿರುವ, ಅದನ್ನೇ ಉಳಿಸಿಕೊಂಡು ಹೊರ ಬಂದಿರುವ ಜಿಮ್ ರವಿಯಂಥಾ ರವಿಯೇ ಆಂಡಿಯೊಬ್ಬ ಪರಮ ಕ್ರೂರಿ ಎಂಬರ್ಥದಲ್ಲಿ ಮಾತಾಡುತ್ತಾರೆಂದರೆ ಈತನ ವ್ಯಕ್ತಿತ್ವ ಎಂಥಾದ್ದೆಂಬುದು ಬಿಗ್‌ಬಾಸ್ ಶೋ ನೋಡದವರಿಗೂ ಗೊತ್ತಾಗಿ ಬಿಡುತ್ತೆ!

ಕಿಚ್ಚಾ ಕೇಳಿದೊಂದು ಪ್ರಶ್ನೆಗೆ ಉತ್ತರಿಸಿದ ಜಿಮ್ ರವಿ ಆಂಡಿ ಒಬ್ಬ ಕ್ರೂರಿ, ಕಿರಿಕಿರಿಯ ಆಸಾಮಿ ಅಂತ ನೇರವಾಗಿಯೇ ಹೇಳಿದ್ದಾರೆ. ಅದು ಪ್ರತಿಯೊಬ್ಬ ಪ್ರೇಕ್ಷಕನಿಗೂ ನೂರಕ್ಕೆ ನೂರರಷ್ಟು ಸತ್ಯವೇ ಅನ್ನಿಸಿದೆ. ಆರಂಭದಲ್ಲಿ ಕವಿತಾ ಗೌಡಳನ್ನು ಪುಟ್ಟ ತಂಗಿ ಅಂತ ಪುಂಗಿದ್ದ ಆಂಡಿ ನಂತರ ಅವಳ ಮೇಲೆಯೇ ಲವ್ವಾದಂಥಾ ಡ್ರಾಮಾ ಶುರು ಮಾಡಿದ್ದ. ಈ ಹಿಂದಿನ ಸೀಜನ್ನುಗಳಲ್ಲಿ ಇಂಥಾ ಲವ್ ಸ್ಟೋರಿಗಳ ರೂವಾರಿಗಳನ್ನು ಬರಖತ್ತು ಮಾಡಲಾಗಿತ್ತಲ್ಲಾ? ಅಂಥಾದ್ದೊಂದು ಪ್ಲಾನು ಮಾಡಿಯೇ ಈತ ಕವಿತಾ ಮೇಲೆ ಕ್ಷಶ್ ಆದಂತೆ ನಾಟಕ ಶುರುವಿಟ್ಟಿದ್ದಾನೆಂಬುದು ಯಾರಿಗಾದರೂ ಅರ್ಥವಾಗುವಂತಿದೆ.

ಎಲ್ಲರನ್ನೂ ಇರಿಟೇಟ್ ಮಾಡುತ್ತಾ, ಪಕ್ಕಾ ನರಿ ಬುದ್ಧಿ ಪ್ರದರ್ಶಿಸೋ ಆಂಡಿಗೆ ಇದೀಗ ಸಣ್ಣಗಾಗಿರೋ ಬುಲೆಟ್ ಪ್ರಕಾಶ್ ಜಾಗದಲ್ಲಿ ತನ್ನ ಅಗಾಧ ದೇಹವನ್ನು ಪ್ರತಿಷ್ಠಾಪಿಸೋ ಬಯಕೆ. ಥೇಟು ಬುಲೆಟ್ ಪ್ರಕಾಶನ ಸೋದರ ಸಂಬಂಧಿಯಂತೆ ದೇಹ ಕುಲುಕಿಸಿ ನಗುವ ಆಂಡಿ ಪಾಲಿಗೆ ಬಿಗ್‌ಬಾಸ್ ಶೋನಿಂದಲೇ ಹಾಸ್ಯ ಕಲಾವಿದನಾಗಿ ನೆಲೆಗೊಳ್ಳೋ ತಲುಬು. ಇದರಿಂದಾಗಿಯೇ ಪಚಪಚನೆ ಮಾತಾಡುತ್ತಾ, ಇರಿಟೇಟ್ ಮಾಡೋದನ್ನೇ ಹಾಸ್ಯ ಅಂದುಕೊಂಡಿರೋ ಪರಮ ಮುಠ್ಠಾಳ ಆಂಡಿ!

ಹಾಸ್ಯ ಹುಟ್ಟೋದಕ್ಕೆ ಸೆನ್ಸ್ ಆಫ್ ಹ್ಯೂಮರ್ ಅತ್ಯಗತ್ಯ. ಆದರೆ ಈ ಆಂಡಿಗೆ ಕಾಮನ್ ಸೆನ್ಸೇ ಕಡಿಮೆ ಪ್ರಮಾಣದಲ್ಲಿದೆ. ಅಸಹ್ಯವನ್ನೇ ಹಾಸ್ಯ ಅಂದುಕೊಂಡಿರೋ ಈ ಆಸಾಮಿಯನ್ನು ಹಾಸ್ಯ ನಟನಾಗಿ ನೋಡುವಂತಾದರೆ ಆ ಅಪಹಾಸ್ಯದ ಫಾಯಿದೆ ಬಿಗ್‌ಬಾಸ್ ಮಂದಿಗಲ್ಲದೆ ಬೇರ್‍ಯಾರಿಗೂ ಸಿಕ್ಕಲು ಸಾಧ್ಯವಿಲ್ಲ!

#

ಇನ್ನಷ್ಟು ಓದಿರಿ

Scroll to Top