ನವರಸನಾಯಕನಿಗೆ ಅಧೋವಾಯು ಬಾಧೆ!

Picture of Cinibuzz

Cinibuzz

Bureau Report


ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರೋ ನಾಯಕ ನಟರಲ್ಲಿ ಮುಂಚೂಣಿಯಲ್ಲಿರುವವರು ನವರಸ ನಾಯಕ ಜಗ್ಗೇಶ್. ಅವರು ಟ್ವಿಟರ್‌ನಂಥಾದ್ದನ್ನು ಇತ್ತೀಚೆಗೆ ಹೆಚ್ಚಾಗಿ ಸಾಮಾಜಿಕ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಬಳಸುತ್ತಿದ್ದಾರೆ. ಆದರೆ ಸ್ವತಃ ರಾಜಕಾರಣಿಯೂ ಆಗಿರೋ ಜಗ್ಗಣ್ಣನ ಮಾತುಗಳು ರಾಜಕೀಯಕ್ಕೆ ಕನೆಕ್ಟ್ ಆಗಿ ಕೆಲ ಮಂದಿ ಉರಿದುಕೊಳ್ಳುವಂತಾದದ್ದೂ ಇದೆ.
ಇದೀಗ ಅಂಥಾ ಉರಿಯಿಂದಲೇ ಕೆಲ ಮಂದಿ ಫೋಟೋಶಾಪ್ ಮೂಲಕ ಜಗ್ಗೇಶ್ ಅವರ ಹೆಸರು ಕೆಡಿಸಲು ಮುಂದಾಗಿದ್ದಾರಾ? ಖುದ್ದು ಜಗ್ಗೇಶ್ ಈ ಬಗ್ಗೆ ಹೌದೆಂಬಂಥಾ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ಕೆಲ ಫೇಕುಗಳು ಇಂಥಾ ಕೆಲಸ ಮಾಡುತ್ತಿದ್ದಾರೆಂದು ಮಮ್ಮಲ ಮರುಗುತ್ತಿದ್ದಾರೆ.

ಇದಕ್ಕೆ ಕಾರಣವಾಗಿರೋದು ಈಗೊಂದಷ್ಟು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರೋ ಜಗ್ಗೇಶ್ ಹೆಸರಿನಲ್ಲಿರೋ ಒಂದು ಟ್ವೀಟ್. ಮೋದಿ ಗಡಿಯಲ್ಲಿ ನಿಂತು ಜೋರಾಗಿ ಒಂದು ಹೂಸು ಬಿಟ್ಟರೆ ಸಾಕು, ಇಡೀ ಪಾಕಿಸ್ತಾನ ವಾಸನೆ ತಡೆಯಲಾರದೆ ನಾಶವಾಗುತ್ತೆ ಅನ್ನೋದು ಈ ಟ್ವೀಟ್ ಸಾರಾಂಶ. ಇದು ಜಗ್ಗೇಶ್ ಅವರೇ ಮಾಡಿದ ಟ್ವೀಟ್ ಅಂತ ಕೆಲ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಕಿಂಡಲ್ ಮಾಡುತ್ತಿದ್ದಾರೆ.

ಈ ಬಗ್ಗೆ ನೊಂದುಕೊಂಡಿರೋ ಜಗ್ಗಣ್ಣ ತಾವು ಯಾವತ್ತೂ ಜವಾಬ್ದಾರಿ ಮರೆತು ವರ್ತಿಸಿಲ್ಲ. ಚುನಾವಣೆ ಹತ್ತಿರ ಬಂದಿರೋದರಿಂದ ಯಾರೋ ಕಿಡಿಗೇಡಿಗಳು ತನ್ನ ಹೆಸರು ಕೆಡಿಸೋ ಹುನ್ನಾರದಿಂದ ಇಂಥಾ ಮಣ್ಣು ತಿನ್ನೋ ಕೆಲಸ ಮಾಡಿದ್ದಾರೆ ಎಂಬರ್ಥದಲ್ಲಿ ಅಲವತ್ತುಕೊಂಡಿದ್ದಾರೆ. ಯಾರದ್ದೋ ಹೆಸರಿನ ಖಾತೆಗಳನ್ನು ನಕಲಿಸಿ ಇಂಥಾ ಅಸಹ್ಯ ಸೃಷ್ಟಿಸೋದನ್ನು ಯಾವ ಪಕ್ಷದ ಯಾರೇ ಮಾಡಿದರೂ ಅದು ತಪ್ಪೇ.

ಇನ್ನು ಈ ಅಧೋವಾಯುವಿನ ಪೋಸ್ಟು ತನ್ನದಲ್ಲ ಅಂತ ಜಗ್ಗಣ್ಣ ಆಣೆ ಪ್ರಮಾಣ ಮಾಡುತ್ತಿರೋದರಲ್ಲಿಯೂ ನಿಜವಿದ್ದಂತಿದೆ. ಯಾಕೆಂದರೆ ಈ ಮೋದಿ ಹೂಸಿನ ಟ್ವಿಟರ್ ವಾಕ್ಯರಚನೆ ನೀಟಾಗಿದೆ. ಇರೋದು ಸಣ್ಣದೊಂದು ಲೈನ್ ಆದರೂ ಓದಿಸಿಕೊಳ್ಳುವಂತಿದೆ. ಖಂಡಿತಾ ಇದನ್ನು ಜಗ್ಗಣ್ಣ ಬರೆದಿರಲಿಕ್ಕಿಲ್ಲ. ಯಾಕೆಂದರೆ ಅವರು ಬರವಣಿಗೆಯ ವಿಚಾರದಲ್ಲಿ ಜಡೇಮಾಯಸಂದ್ರದ ಮ್ಯಾಟರ್ ಹೇಳಲು ಕೂತರೆ ಮಂತ್ರಾಲಯಕ್ಕೆ ಹೋಗಿ, ಅಲ್ಲಿಂದ ಧರ್ಮಸ್ಥಳಕ್ಕೆ ಬಂದು, ಅದರಲ್ಲೇ ತರುಪತಿ ದರ್ಶನವನ್ನೂ ಮಾಡಿಸುವಂಥಾ ಮಾಯ್ಕಾರ ಪ್ರತಿಭೆ!

ಇನ್ನಷ್ಟು ಓದಿರಿ

Scroll to Top