
ಮೇಘನಾ ರಾಜ್ ರನ್ನು ಮದುವೆಯಾದ ನಂತರದಲ್ಲಿ ಚಿರಂಜೀವಿ ಅದೃಷ್ಟ ಸರಿಯಾಗಿಯೇ ವರ್ಕೌಟ್ ಆದಂತಿದೆ. ಅಮ್ಮ ಐ ಲವ್ ಯೂ ಚಿತ್ರದ ನಂತರದಲ್ಲಿ ಚಿರು ಕೈಲಿರೋ ಹೊಸಾ ಚಿತ್ರಗಳ ಪಟ್ಟಿಯನ್ನು ನೋಡಿದರೆ ಯಾರೇ ಆದರೂ ಈ ಮಾತನ್ನು ಅನುಮೋದಿಸುವಂತಿದೆ!
ಹೀಗೆ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರೋ ಚಿರಂಜೀವಿ ಸರ್ಜಾ ಈಗ ಸಿಂಗ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾಗಲೇ ಅವರು ಧೈರ್ಯಂ ಖ್ಯಾತಿಯ ಶಿವತೇಜಸ್ ನಿರ್ದೇಶನದ ಚಿತ್ರವೊಂದನ್ನು ಒಪ್ಪಿಕೊಂಡಿರೋ ಸುದ್ದಿ ಬಂದಿದೆ.

ಈ ಚಿತ್ರಕ್ಕೆ ಭೈರವ ಎಂಬ ಶೀರ್ಷಿಕೆಯೂ ನಿಗಧಿಯಾಗಿದೆ. ಈ ಹಿಂದೆ ಅಜೇಯ್ ರಾವ್ ನಾಯಕನಾಗಿ ನಟಿಸಿದ್ದ ಧೈರ್ಯಂ ಚಿತ್ರದ ಮೂಲಕ ಶಿವತೇಜಸ್ ಗಮನ ಸೆಳೆದಿದ್ದರು. ಅವರೀಗ ಚಿರಂಜೀವಿಗೋಸ್ಕರವೇ ಪಕ್ಕಾ ಮಾಸ್ ಕಥೆಯೊಂದನ್ನ ರೆಡಿ ಮಾಡಿದ್ದಾರಂತೆ. ಇದೀಗ ಚಿರು ಏಕಕಾಲದಲ್ಲಿಯೇ ರಾಜಮಾರ್ತಾಂಡ ಮತ್ತು ಸಿಂಗ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದಾಕ್ಷಣವೇ ನಾಗಾಭರಣ ನಿರ್ದೇಶನದ ಜುಗಾರಿ ಕ್ರಾಸ್ ಆರಂಭವಾಗಲಿದೆ. ಇದು ಮುಗಿದ ನಂತರ ತರುಣ್ ಶಿವಪ್ಪ ನಿರ್ದೇಶನದ ಚಿತ್ರಕ್ಕೂ ಚಾಲನೆ ಸಿಗಲಿದೆ. ಇದೆಲ್ಲ ಆದ ನಂತರ ಭೈರವನ ಅಬ್ಬರ ಶುರುವಾಗಲಿದೆಯಂತೆ.











































