ಸುಮಲತಾ ಅಂಬರೀಶ್ ಬಗ್ಗೆ ಜಗ್ಗೇಶ್ ಹೇಳಿದ್ದೇನು?

Picture of Cinibuzz

Cinibuzz

Bureau Report


ಮೈತ್ರಿ ಸರ್ಕಾರದ ಕೂಡಿಕೆ ಆಟದ ಮುಂದೆ ಅಂಬರೀಶ್ ಮಡದಿ ಸುಮಲತಾ ರಾಜಕೀಯ ಹೆಜ್ಜೆಗಳ ಮುಂದೆ ನಾನಾ ಸವಾಲುಗಳು ಎದುರಾಗಿವೆ. ಮಂಡ್ಯ ಸೀಮೆಯ ತುಂಬಾ ಪ್ರೀತಿ, ಅಭಿಮಾನ ಹೊಂದಿದ್ದ ಅಂಬಿ ಮಡದಿಯ ವಿರುದ್ಧ ನಡೆಯುತ್ತಿರೋ ರಾಜಕೀಯ ದಾಳಗಳ ವಿರುದ್ಧ ಅಭಿಮಾನಿಗಳೆಲ್ಲ ಆಕ್ರೋಶಗೊಂಡಿದ್ದಾರೆ. ಆದರೂ ಕೂಡಾ ಹಳೇದನ್ನೆಲ್ಲ ನೆನಪಿಟ್ಟುಕೊಂಡ ಚಿತ್ರ ತಾರೆಯರನೇಕರು ರಾಜಕೀಯ, ಪಕ್ಷಗಳನ್ನು ಮೀರಿ ಸುಮಲತಾರ ಬೆಂಬಲಕ್ಕೆ ನಿಲ್ಲೊ ಮಾತಾಡುತ್ತಿದ್ದಾರೆ.

ಇದೀಗ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ನವರಸ ನಾಯಕ ಜಗ್ಗೇಶ್ ಅವರೂ ಕೂಡಾ ಈ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತಾಡಿದ್ದಾರೆ. ರಾಜಕೀಯವನ್ನು ಮೀರಿ ಅಂಬರೀಶ್ ಅವರೊಂದಿಗಿನ ದಶಕಗಳ ಸ್ನೇಹವನ್ನು ಮೆಲುಕು ಹಾಕಿರುವ ಜಗ್ಗೇಶ್, ಸುಮಲತಾರನ್ನು ಜನರೇ ಗೆಲ್ಲಿಸಿತ್ತಾರೆಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ. ಅಂಬರೀಶ್ ಇಷ್ಟು ವರ್ಷ ಮಾಡಿರೋ ಸಾಧನೆ, ಒಳ್ಳೆತನಗಳೇ ಸುಮಲತಾರ ಕೈಹಿಡಿಯುತ್ತವೆ ಅನ್ನೋ ಭವಿಷ್ಯವನ್ನೂ ಜಗ್ಗೇಶ್ ಹೇಳಿದ್ದಾರೆ. ಜೊತೆಗೆ ಅವರು ಸೂಕ್ತ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆಂಬ ಭರವಸೆಯ ಮಾತುಗಳೂ ಕೂಡಾ ಜಗ್ಗಣ್ಣನ ಕಡೆಯಿಂದ ಬಂದಿವೆ. ಈಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೇರೆಯದ್ದೇ ವಾತಾವರಣವಿದೆ. ಆರಂಭದಲ್ಲಿ ಸುಮಲತಾ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟು ಗ್ಯಾರೆಂಟಿ ಎಂಬ ವಾತಾವರಣ ಇತ್ತು. ಆದರೀಗ ಅದು ಸಂಪೂರ್ಣ ಉಲ್ಟಾ ಹೊಡೆದಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ನಿಖಿಲ್ ರನ್ನು ಕಣಕ್ಕಿಳಿಸಿದೆ. ಇದೀಗ ಸುಮಲತಾ ಒಂದೋ ಬಿಜೆಪಿ ಸೇರಬೇಕು ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಬೇಕು. ಅತ್ತ ಬಿಜೆಪಿ ಅವರನ್ನು ಸೆಳೆದುಕೊಳ್ಳುವ ಕಸರತ್ತು ನಡೆಸುತ್ತಿದೆ. ಜಗ್ಗಣ್ಣನ ಆಂತರ್ಯದಲ್ಲಿಯೂ ಸುಮಲತಾ ಬಿಜೆಪಿ ಸೇರಲಿ ಅನ್ನೋ ಇರಾದೆ ಇದ್ದಂತಿದೆ.

ಇನ್ನಷ್ಟು ಓದಿರಿ

Scroll to Top