ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಂದಿದ್ದು, ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. 2018ರಲ್ಲಿ ಬಿಡುಗಡೆಯಾಗಿದ್ದ ‘ಅಜ್ಞಾತವಾಸಿ’ ಸಿನಿಮಾದ ನಂತರ ಪವನ್ ಕಲ್ಯಾಣ್ ಬೇರೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಚಿತ್ರರಂಗಕ್ಕೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಧುಮುಕಿದ್ದ ಪವರ್ ಸ್ಟಾರ್, ಆಂಧ್ರ ಪ್ರದೇಶದಲ್ಲಿ ರಾಜಕೀಯ ಚುಕ್ಕಾಣಿ ಹಿಡಿಯಲು ಮುಂದಾಗಿದ್ದರು. ಇತ್ತೀಚೆಗಷ್ಟೇ ಆಂಧ್ರದ ಚುನಾವಣೆ ಮುಗಿದಿದೆ. ಫಲಿತಾಂಶ ಮೇ 23ಕ್ಕೆ ಬರಲಿದೆ. ಈ ನಡುವೆ ಪವನ್ ಕಲ್ಯಾಣ್ ಮತ್ತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದ್ದು ಅದು ಭಾರಿ ಸದ್ದು ಮಾಡುತ್ತಿದೆ. ಸಿಕ್ಕ ಮಾಹಿತಿ ಪ್ರಕಾರ ಪವನ್ ಕಲ್ಯಾಣ್ ಅವರಿಗೆ ಆಫರ್ ಮಾಡಲಾಗಿರುವ ಮುಂಬರುವ ಚಿತ್ರಕ್ಕೆ 30 ಕೋಟಿ ಆಫರ್ ನೀಡಲಾಗಿದೆಯೆಂಬ ಸುದ್ದಿ ಹರಿದಾಡುತ್ತಿದೆ.

ಪವನ್ ಕಲ್ಯಾಣ್ ಅವರ ಕಂಬ್ಯಾಕ್ ಸುದ್ದಿ ಕೇಳಿ ಅವರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಚಿತ್ರವು 2019ರ ಅಂತ್ಯದಲ್ಲಿ ಆರಂಭವಾಗಲಿದ್ದು, ಈ ಚಿತ್ರಕ್ಕಾಗಿ ಪವನ್ ಕಲ್ಯಾಣ್ ಅವರಿಗೆ 30 ಕೋಟಿ ಸಂಭಾವನೆ ನೀಡಲು ನಿರ್ಮಾಪಕರು ತೀರ್ಮಾನಿಸಿದ್ದಾರಂತೆ. ಈ ಸಂಗತಿ ನಿಜವಾದರೆ, ಪವನ್ ಕಲ್ಯಾಣ ಟಾಲಿವುಡ್ನಲ್ಲಿ ದೊಡ್ಡ ಮೊತ್ತದ ಸಂಭಾವನೆ ಪಡೆದ ನಟರ ಸಾಲಿನಲ್ಲಿ ಸೇರಲಿದ್ದಾರೆ. ಈಗಾಗಲೇ ಮಹೇಶ್ ಬಾಬು, ಪ್ರಭಾಸ್ ಮುಂತಾದವರು ಟಾಲಿವುಡ್ನಲ್ಲಿ ಭಾರಿ ಎನಿಸುವ ಸಂಭಾವನೆ ಪಡೆಯುತ್ತಿದ್ದಾರೆ. ಟಾಲಿವುಡ್ ಸ್ಟಾರ್ ನಟ ಪವನ್ ಕಲ್ಯಾಣ್ ಮುಂಬರುವ ಚಿತ್ರವನ್ನು ‘ಮೈತ್ರಿ ಮೂವಿ ಮೇಕರ್ಸ್’ ನಿರ್ಮಿಸಲಿದ್ದು, ಈಗಾಗಲೇ ತೆಲುಗು ಪವರ್ ಸ್ಟಾರ್ ಬಳಿ ಅಡ್ವಾನ್ಸ್ ನೀಡಿ ಕಾಲ್ ಶೀಟ್ ಕೂಡ ಪಡೆದುಕೊಂಡಿದೆ ಎನ್ನಲಾಗಿದೆ. ಮುಂಬರುವ ಆ ಚಿತ್ರಕ್ಕೆ ನಟ ಪವನ್ ಕಲ್ಯಾಣ್ ಒಟ್ಟಾರೆ 40 ದಿನ ಕಾಲ್ ಶೀಟ್ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಯಾವುದಕ್ಕೂ ಮೇ 23ರ ಚುನಾವಣೆ ಫಲಿತಾಂಶದವರೆಗೆ ಕಾಯಲೇಬೇಕಿದೆ. ಒಮ್ಮೆ ಪವನ್ ಗೆದ್ದರೆ, ಸಿನಿಮಾ ಕೆಲಸ ಸಹಜವಾಗಿಯೇ ಮುಂದಕ್ಕೆ ಹೋಗಲಿದೆ. ಮೇ 23ರಂದು ಆಂದ್ರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಎರಡೂ ಚುನಾವಣೆಯ ಫಲಿತಾಂಶ ನಿರ್ಧರವಾಗಲಿದ್ದು, ಪವನ್ ಕಲ್ಯಾಣ್ ಕಂಬ್ಯಾಕ್ ಚಿತ್ರದ ಬಗ್ಗೆಯೂ ಆ ದಿನ ಸ್ಪಷ್ಟ ಉತ್ತರ ಸಿಗಲಿದೆ. ಪವನ್ ಅಭಿಮಾನಿಗಳು ಸಿನಿಮಾ ಸುದ್ದಿಯ ಖಾತ್ರಗಾಗಿ ಅಲ್ಲಿಯವರೆಗೆ ಕಾಯದೇ ಬೇರೆ ದಾರಿಯಿಲ್ಲ.











































