ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಪ್ರಚಾರದಲ್ಲಿ ದರ್ಶನ್, ಯಶ್, ಆಡಿದ ಬಹುತೇಕ ಮಾತುಗಳು, ಹೊಡೆದ ಡೈಲಾಗ್ ಗಳು ಚುನಾವಣೆ ಮುಗಿಯುವವರೆಗೂ ಟ್ರೆಂಡಿಂಗ್ ನಲ್ಲಿಯೇ ಇತ್ತು. ಇತ್ತೀಚಿಗೆ ಎಲ್ಲಿದ್ಯಪ್ಪ ನಿಖಿಲ್ ಹೇಳಿಕೆ ಕುರಿತಾಗಿ ಸ್ವತಃ ನಿಖಿಲ್ ರವರು ಸಿನಿಮಾ ಮಾಡುವುದಾಗಿ ಹೇಳಿರುವ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಳಸಿದ್ದ ಜೋಡೆತ್ತು ಅನ್ನುವ ಟೈಟಲ್ಲಿನ ಸಿನಿಮಾ ಕೂಡಾ ಸೆಟ್ಟೇರುವ ಸಾಧ್ಯತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ಪದದ ಚರ್ಚೆ ಹೆಚ್ಚಾದ ಹಿನ್ನೆಲೆಯಲ್ಲಿ ಸಾಕಷ್ಟು ನಿರ್ಮಾಪಕರು ಈ ಟೈಟಲ್ ರಿಜಿಸ್ಟರ್ ಮಾಡಿಸಲು ಸರತಿ ಸಾಲಲ್ಲೂ ನಿಂತಿದ್ದರಂತೆ.

ಈಗ ಈ ಟೈಟಲ್ ಮೆಜೆಸ್ಟಿಕ್ ನಿರ್ಮಾಪಕ ಎಂ.ಜಿ. ರಾಮಮೂರ್ತಿ ಅವರ ಪಾಲಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೇ ಈ ಚಿತ್ರಕ್ಕೆ ನಾಯಕನನ್ನಾಗಿ ಮಾಡುವ ಹಂಬಲದಲ್ಲಿದ್ದಾರೆ ನಿರ್ಮಾಪಕ ರಾಮಮೂರ್ತಿ. ಈ ಬಗ್ಗೆ ದರ್ಶನ್ ಅವರ ಜತೆಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿರುವ ಅವರು ರಾಕಿಂಗ್ ಸ್ಟಾರ್ ಬಳಿಯೂ ಈ ಕುರಿತು ಮಾತನಾಡುವ ಪ್ಲ್ಯಾನ್ ನಲ್ಲಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹವಾ ಸೃಷ್ಟಿಸಿದ್ದ ಈ ಪದ, ಸ್ಯಾಂಡಲ್ ವುಡ್ ನಲ್ಲೂ ಸೆನ್ಸೇಷನ್ ಸೃಷ್ಟಿಸಬಹುದೋ ಕಾದು ನೋಡಬೇಕು.











































