ಹಿರಿಯ ಚಿತ್ರ ನಿರ್ಮಾಪಕ ಜಿ.ಎನ್ ಲಕ್ಷ್ಮೀಪತಿ ಅವರು ಬೆಂಗಳೂರಿನಲ್ಲಿ ನಿನ್ನೆ ಗುರುವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಲಕ್ಷ್ಮೀಪತಿ ಅವರು ತುಮಕೂರು ಜಿಲ್ಲೆಯ ಗುಬ್ಬಿಯವರು. ಡಾ. ರಾಜ್ ಕುಮಾರ್ ಅಭಿನಯದ ದೇವರ ಮಕ್ಕಳು, ಉಯ್ಯಾಲೆ, ಕಾಡು, ಚಿತೆಗೂ ಚಿಂತೆ, ಒಂದಾನೊಂದು ಕಾಲದಲ್ಲಿ ಅವರು ನಿರ್ಮಿಸಿದ ಕನ್ನಡ ಸಿನಿಮಾಗಳು.

ಕರ್ನಾಟಕ ಚಲನಚಿತ್ರ ರಂಗದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಟ್ಟಡ ನಿರ್ಮಾಣಕ್ಕೆ ಜಾಗ ದೊರಕಿಸಿಕೊಡುವಲ್ಲಿ ಲಕ್ಷ್ಮೀಪತಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಕಟ್ಟಡ ನಿರ್ಮಾಣದ ಬಳಿಕ ಲಕ್ಷ್ಮೀಪತಿ ಅವರು ಮಂಡಳಿ ಉಪಾಧ್ಯಕ್ಷರಾಗಿಯೂ ಮೂರು ವರ್ಷ ಕರ್ತವ್ಯದಲ್ಲಿದ್ದರು. ಮೃತರ ಅಂತ್ಯಕ್ರಿಯೆಯು ಬೆಂಗಳೂರಿನ ಹರಿಶ್ಚಂದ್ರಘಾಟ್ ಚಿತಾಗಾರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯಲಿದೆ.











































