ಸದಾ ಹೊಸತನ್ನೇ ಪ್ರಯತ್ನಿಸುವ ರಿಷಬ್ ಶೆಟ್ಟಿ, ಇಲ್ಲಿಯವರೆಗೂ ಮಾಡಿರುವ ಸಾಕಷ್ಟು ಸಿನಿಮಾಗಳೆಲ್ಲವೂ ಡಿಫರೆಂಟ್ ಜಾನರ್ ನದ್ದು. ಹೊಸ ಹೊಸ ಪ್ರಯತ್ನಗಳದ್ದೇ. ಈ ಹಿಂದೆ ರಿಷಬ್ ಶೆಟ್ಟಿ ಕಥಾ ಸಂಗಮ ಸಿನಿಮಾದಲ್ಲಿ ಆರು ಹೊಸ ನಿರ್ದೇಶಕರಿಗೆ ಅವಕಾಶ ನೀಡಿದ್ದರು. ಸದ್ಯ ರಿಷಬ್ ಶೆಟ್ಟಿ ಪ್ರತಿಭಾವಂತರಿಗೆ ಮತ್ತೊಂದು ಆಫರ್ ನೀಡಿದ್ದು, ಬಣ್ಣದ ಲೋಕದ ಪ್ರವೇಶಕ್ಕೆ ಹಾತೊರೆಯುತ್ತಿರುವ ಮಂದಿಗೆ ಮುಖವರಳುವಂತೆ ಮಾಡಿದ್ದಾರೆ. ಈಗ ಅತ್ಯುತ್ತಮ ಕಥೆಗಾರರಿಗೆ ಆಹ್ವಾನ ನೀಡಿರುವ ರಿಷಬ್ ಶೆಟ್ಟಿ, ಅಂತ್ಯ ಸಂಸ್ಕಾರ ಸಮಯದಲ್ಲಿ ನಡೆಯಬಹುದಾದ ಹಾಸ್ಯ ಸನ್ನಿವೇಶವೊಂದನ್ನು ದೃಶ್ಯವಾಗಿ (ಸಂಭಾಷಣೆ ಸಹಿತ) ಎರಡು ಪುಟಗಳಿಗೆ ಮೀರದಂತೆ ಬರೆಯಬೇಕೆಂಬ ನಿಬಂಧನೆಯನ್ನು ಇಟ್ಟಿದ್ದಾರೆ.

ಇನ್ನು ಸಹಿಪ್ರಾಶಾಲೆ ಕಾಸರಗೋಡು ಚಿತ್ರದ ಅನಂತ್ ಪದ್ಮನಾಭ, ಉಳಿದವರು ಕಂಡಂತೆ ಚಿತ್ರದ ರತ್ನಕ್ಕ, ರಂಗನಾಯಕಿ ಚಿತ್ರದ ಶೇಖರ್, ಬೆಲ್ ಬಾಟಂನ ಕುಸುಮ ಪಾತ್ರಗಳ ಪೈಕಿ ಒಂದಕ್ಕೆ ಪಾತ್ರ ಚಿತ್ರಣವನ್ನು ಬರೆಯಬೇಕೆಂದು ತಿಳಿಸಿದ್ದಾರೆ. ಜತೆಗೆ ಕಿರಿಕ್ ಪಾರ್ಟಿ ಸಿನಿಮಾ ಗ್ಯಾಂಗ್ಸ್ಟರ್ ಶೈಲಿಯ ಚಿತ್ರವಾಗಿದ್ದರೆ ಅದರ ಕಥೆಯ ಎಳೆ ಹೇಗೆ ಸೃಷ್ಟಿಸುತ್ತಿದ್ದಿರಿ? ಹೀಗೆ ಒಟ್ಟು ಮೂರು ಪ್ರಶ್ನೆಗಳನ್ನು ಯುವ ಬರಹಗಾರರ ಮುಂದಿಟ್ಟಿದ್ದಾರೆ. ರಿಷಬ್ ಮೇ 23ರವರೆಗೆ ಸಮಯಾವಕಾಶ ನೀಡಿದ್ದು, ಹೇಗೆ ಕಳಿಸಬೇಕು ಇತ್ಯಾದಿ ವಿಚಾರಗಳನ್ನು ಅವರ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ತಿಳಿಸಿದ್ದಾರೆ.











































