ಸುಮಲತಾ ಗೆಲುವಿಗೆ ಡಿಬಾಸ್ ಸಂತಸ!

Picture of Cinibuzz

Cinibuzz

Bureau Report

ಭಾರತದಲ್ಲಿ ಚುನಾವಣೆಯೇನೋ ಅನೌನ್ಸ್ ಆಯ್ತು. ಒಂದೆಡೆ ಮೋದಿ ಅಲೆ ಜೋರಾಗಿದ್ದರೆ ಮತ್ತೊಂದೆಡೆ ಮಂಡ್ಯ ರಾಜಕೀಯವೇ ರಾಷ್ಟ್ರದೆಲ್ಲೆಡೆ ಸುದ್ದಿ ಮಾಡಿತ್ತು. ಒಬ್ಬ ಪಕ್ಷೇತರ ಅಭ್ಯರ್ಥಿಗೆ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ಕೆಸೆರೆರಚಾಟದಲ್ಲಿ ಇಷ್ಟರಮಟ್ಟಿಗೆ ಬಿಲ್ಡಪ್ ಕೊಟ್ಟಿದ್ದಾಗಲೀ, ಪರೋಕ್ಷವಾಗಿ ಅಭ್ಯರ್ಥಿಯ ಪರ ಪ್ರಚಾರಕ್ಕೆ ನಿಂತಿದ್ದಾಗಲೀ ಯಾವೊಬ್ಬರೂ ಮರೆಯಲು ಸಾಧ್ಯವಿಲ್ಲ. ಹಾಗಂತ ಪಕ್ಷೇತರ ಅಭ್ಯರ್ಥಿ ಎಂದ ಮಾತ್ರಕ್ಕೆ ಅದೇನು ಹಗುರವಾದ ವಿಚಾರವೇನಲ್ಲ. ಒಬ್ಬ ಹಾಲಿ ಮುಖ್ಯಮಂತ್ರಿ, ಶಾಸಕರು, ಮಂತ್ರಿಗಳು, ಎಂಎಲ್ಸಿಗಳು, ಮಾಜಿ ಪ್ರಧಾನಿಗಳಿಗೆಲ್ಲಾ ಏಕೈಕ ಮಹಿಳೆ ಮಣ್ಣು ಮುಕ್ಕಿಸಿದಳೆಂದರೆ ಅದೇನೂ ಮೂಗು ಮುರಿಯುವ ಸಂಗತಿಯೂ ಅಲ್ಲ.

ಮಂಡ್ಯದ ಸೊಸೆ ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಮಂಡ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ, ಕರ್ನಾಟಕದ ಸ್ವತಂತ್ರ್ಯ ಪಕ್ಷೇತರ ಎಂಪಿಯಾಗಿ ಕೇಂದ್ರಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೇ ಎಷ್ಟೋ ದಾಖಲೆಗಳನ್ನು ಪುಡಿ ಪುಡಿಯೂ ಮಾಡಿದ್ದಾರೆ. ಸುಮಲತಾ ಅವರ ಗೆಲುವಿಗೆ ನೊಗಹೊತ್ತು ನಿಂತಿದ್ದ ಜೋಡೆತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರ ಪರಿಶ್ರಮವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳದೇ ಇರಲು ಸಾಧ‍್ಯವೇ ಇಲ್ಲ. ಸುಮಲತಾ ಅವರ ಭರ್ಜರಿ ಗೆಲುವಿನ ನಂತರ ಅವರಿಗೆ ಶುಭಾಶಯ ಕೋರಿ ಮಾತನಾಡಿದ ಒಡೆಯ ದರ್ಶನ್ ಸೆಲ್ಫಿ ವಿಡಿಯೋ ಮೂಲಕ ಮಂಡ್ಯದ ಜನತೆಗೂ ಕೃತಜ್ಞತೆ ಸಲ್ಲಿಸಿದ್ದಾರೆ.

https://twitter.com/dasadarshan/status/1131568212024254464

ಸೆಲ್ಫಿ ವಿಡಿಯೋ ಮಾಡುವ ಮೂಲಕ ಟ್ವೀಟ್​ ಮಾಡಿರುವ ಅವರು, ‘ಮಂಡ್ಯ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದ.. ಧನ್ಯವಾದ ಹೇಳಿದ್ರೆ ತುಂಬಾ ಚಿಕ್ಕದಾಗತ್ತೆ. ಹಾಗಾಗಿ ಅಮ್ಮನಿಗೆ ದೊಡ್ಡ ಗೆಲುವು ನೀಡಿರುವ ನಿಮ್ಮ ಪ್ರೀತಿಗೆ ನನ್ನ ಸಾಷ್ಟಾಂಗ ನಮಸ್ಕಾರ. ನಿಮ್ಮ ಗೆಲುವನ್ನು ಅಮ್ಮ ಜೋಪಾನ ಮಾಡಿಕೊಂಡು ನಿಮಗೆಲ್ಲರಿಗೂ ಒಳ್ಳೆಯದನ್ನು ಮಾಡುತ್ತಾರೆ. ಮತ ಹಾಕಿದ ಮಂಡ್ಯದ ಎಲ್ಲಾ ದೇವರುಗಳಿಗೆ ನಾನು ಚಿರರುಣಿ’ ಅಂತಾ ಹೇಳಿದ್ದಾರೆ.

 

ಇನ್ನಷ್ಟು ಓದಿರಿ

Scroll to Top