ಕನ್ನಡ ಚಿತ್ರರಂಗದ ಗಮಲನ್ನು ಭಾರತದುದ್ದಕ್ಕೂ ಹರಡಲು ಪಣತೊಟ್ಟಿರುವ ಯಶ್, ಸಿನಿಮಾ ಮಾಡುವ ಜತೆಗೆ ತಮ್ಮ ಯಶೋಮಾರ್ಗ ಪೌಂಡೇಷನ್ ಮೂಲಕವೂ ಬಹಳಷ್ಟು ಸಮಾಜೋದ್ದಾರ ಕೆಲಸಗಳನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರದಲ್ಲಿದ್ದ ಯಶ್ ಈಗಷ್ಟೇ ಕೆಜಿಎಫ್ ಚಾಪ್ಟರ್ 2ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಬೀದರ್ ಜನತೆಗೆ ತಮ್ಮ ಯಶೋಮಾರ್ಗದ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಯಶೋ ಮಾರ್ಗ ಸಂಸ್ಥೆಯ ಮೂಲಕ ಔರಾದ್ನ ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

ನೀರು ಸಿಗದೇ ಪರದಾಡುತ್ತಿರುವ ಗ್ರಾಮಕ್ಕೆ 16 ಸಾವಿರ ಲೀಟರ್ ಸಾಮರ್ಥ್ಯದ ಬೃಹತ್ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಇನ್ನು ಗ್ರಾಮದ ಮಹಿಳೆಯರು ಕೂಡ ನೀರಿನ ಟ್ಯಾಂಕರ್ಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ನೀರು ತುಂಬಿಸಿಕೊಂಡಿದ್ದಾರೆ. ಬೀದರ್ನಲ್ಲಿರುವ ಯಶ್ ಅಭಿಮಾನಿಗಳು ತೀವ್ರ ನೀರಿನ ಸಮಸ್ಯೆ ಇರೋ ಗ್ರಾಮಗಳನ್ನ ಗುರುತಿಸಿ ನೀರನ್ನು ಪೂರೈಕೆ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ‘ಯಶೋಮಾರ್ಗ’ದ ಮೂಲಕ ರಾಯಚೂರಿನ ಹಳ್ಳಿಗಳಿಗೆ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಿ, ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಬೀದರ್ ಜಿಲ್ಲೆಗೂ ಯಶೋಮಾರ್ಗ ಸಂಸ್ಥೆ ನೀರು ಪೂರೈಕೆ ಮಾಡುತ್ತಿದೆ. ಕಳೆದ ಬಾರಿ ಕೊಪ್ಪಳದ ಕೆರೆ ಅಭಿವೃದ್ಧಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಯಶ್, ಇದೀಗ ಬೀದರ್ ಹಾಗೂ ರಾಯಚೂರಿನಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಯಶ್ ಕಾರ್ಯಕ್ಕೆ ಬೀದರ್ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.











































