ಕನ್ನಡಿಗರಿಗೆ ಕೋಟೆ ಎಂದಾಕ್ಷಣ ಚಿತ್ರದುರ್ಗದ ಹೊರತಾಗಿ ಮತ್ತೇನೂ ನೆನಪಿಗೆ ಬಾರದೆ ಇರಲಿಕ್ಕಿಲ್ಲ. ಕನ್ನಡ ಚಿತ್ರರಂಗಕ್ಕೂ ಚಿತ್ರದುರ್ಗ ಕೋಟೆಗೂ ಎಲ್ಲಿಲ್ಲದ ನಂಟಿರೋದು ಗೊತ್ತಿರುವ ಸಂಗತಿಯೇ. ಬಹಳಷ್ಟು ಸಿನಿಮಾಗಳು ಚಿತ್ರದುರ್ಗದ ನೆಲೆಬೀಡಿನಲ್ಲಿ ಚಿತ್ರೀಕರಣವಾಗಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಗಳಿಸಿದೆ. ಬಹಳಷ್ಟು ಸಿನಿಮಾಗಳು ಚಿತ್ರದುರ್ಗದಲ್ಲಿಯೇ ಶೂಟಿಂಗ್ ಆಗುತ್ತಲೂ ಇವೆ. ಆ ಪೈಕಿ ಇತ್ತೀಚಿಗೆ ಸೆಟ್ಟೇರಿರುವ ಚಿತ್ರದುರ್ಗದ ಒನಕೆ ಓಬವ್ವ ಕೂಡ ಒಂದು. ಭಕ್ತಿ ಪ್ರಧಾನ ಚಿತ್ರಗಳನ್ನು ಮಾಡುತ್ತಿದ್ದ ನಿರ್ದೇಶಕ ಬಿ. ಎ ಪುರುಷೋತ್ತಮ್ ಓಬವ್ವನ ಮೂಲಕ ಐತಿಹಾಸಿಕ ಕಥನದ ನಿರ್ದೇಶನಕ್ಕೆ ಇಳಿದಿದ್ದಾರೆ. ಚಿತ್ರವು ಓಬವ್ವನ ಜೀವನಾಧಾರಿತವಾಗಿದ್ದು, ಓಬವ್ವನ ಬಾಲ್ಯ, ಯೌವ್ವನ, ಗಂಡ, ಆಕೆಯ ವ್ಯಕ್ತಿತ್ವವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಕೋಟೆ ಕಾಯುವವನ ಹೆಂಡತಿ, ಛಲವಾದಿ ಹೆಣ್ಣು ಮಗಳಾಗಿ ಎದುರಾಳಿ ಸೈನಿಕರನ್ನು ಒನಕೆಯಿಂದ ಹೇಗೆ ಕೊಂದಳು. ಇತ್ಯಾದಿ ಅಂಶಗಳನ್ನು ಸಿನಿಮಾದಲ್ಲಿ ಸಮ್ಮಿಳಿತಗೊಳಿಸಲಾಗಿದೆಯಂತೆಇನ್ನು ಚಿತ್ರಕ್ಕೆ ಹೆಸರಾಂತ ಲೇಖಕ ಡಾ.ಬಿ.ಎಲ್.ವೇಣು ಕತೆ,ಚಿತ್ರಕತೆ ಮತ್ತು ಸಂಭಾಷಣೆ ಬರೆದಿರುವುದು ವಿಶೇಷವಾಗಿದೆ.

ಇನ್ನು ಓಬವ್ವನಾಗಿ ನವನಟಿ ತಾರಾ ಕಾಣಿಸಿಕೊಂಡಿದ್ದಾರೆ. ಈಕೆಯ ತಂದೆಯಾಗಿ ಬಾಲಕೃಷ್ಣ, ನಾಯಕ ಮತ್ತು ಗಂಡನಾಗಿ ಅಕ್ಷಯ್, ಹೈದರಾಲಿಯಾಗಿ ಗಣೇಶ್ರಾವ್, ಕಳ್ಳನರಸಯ್ಯನಾಗಿ ವಿಕ್ರಂ ಉದಯ್ ಕುಮಾರ್, ಮದಕರಿನಾಯಕನಾಗಿ ಚೇತನ್, ಸಿರಿ ಅಜ್ಜಿ ಹಾಗೂ ಸಹನಿರ್ಮಾಪಕಿಯಾಗಿ ಪುಷ್ಪಸ್ವಾಮಿ, ಮಹಾರಾಣಿ ಪಾತ್ರಕ್ಕೆ ಶಿಲ್ಪಾಗೌಡ, ದಿವಾನ್ಪೂರ್ಣಯ್ಯನಾಗಿ ಜಿಮ್ ಶಿವು ಅಭಿನಯಿಸಿರುವುದಲ್ಲದೇ ಸಿನಿಮಾ ಟೈಟಲ್ ಸಾಂಗನ್ನು ಹಾಡಿದ್ದಾರೆ. ವಿಜಯ ಭರಮಸಾಗರ,ಕುಮಾರ್ ಸಾಹಿತ್ಯದ ಹಾಡುಗಳಿಗೆ ಎಸ್.ನಾಗು ಸಂಗೀತ ಸಂಯೋಜಿಸಿದ್ದಾರೆ. ಜತೆಗೆ ಗೌರಿ ವೆಂಕಟೇಶ್ ಛಾಯಾಗ್ರಹಣ, ಬೇಬಿ ನಾಗರಾಜ್ ಸಂಕಲನ, ವಿಜಿಕುಮಾರ್ ವಸ್ತ್ರವಿನ್ಯಾಸ, ಚಿತ್ರಕ್ಕಿದೆ. ಪ್ರಚಾರಾರ್ಥವಾಗಿ ಇತ್ತೀಚಿಗೆ ಸಿನಿಮಾದ ಆಡಿಯೋವನ್ನು ರಿಲೀಸ್ ಮಾಡಿಕೊಂಡಿದೆ ಚಿತ್ರತಂಡ.











































