ಅಲಮೇಲಮ್ಮನ ಆಪರೇಷನ್ ಮಾಡಿಸಿ, ಕವಲು ದಾರಿಯಲ್ಲಿ ಸಾರ್ವಜನಿಕರಿಗೆ ಸುವರ್ಣಾವಕಾಶ ನೀಡಲು ಹೊರಟಿದ್ದಾರೆ ರಿಷಿ. ಹೌದು ಅನುರೂಪ ಧಾರವಾಹಿಯಲ್ಲಿ ಲಂಬು ಮೇಷ್ಟ್ರಾಗಿ ಕಿರುತೆರೆಗೆ ಲಗ್ಗೆ ಇಟ್ಟ ರಿಷಿ, ಅದಾದ ಮೇಲೆ ಬಿಗ್ ಸ್ಕ್ರೀನ್ ಗೆ ಎಂಟ್ರಿಯನ್ನು ಪಡೆದರು. ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾದ ಸಕ್ಸಸ್ ನ ನಂತರ ಸದ್ಯ ಸಾರ್ವಜನಿಕರಿಗೆ ಸುವರ್ಣಾವಕಾಶ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ನಾಯಕ ತನ್ನ ಪ್ರೇಯಸಿಗಾಗಿ ಏನನ್ನಾದರೂ ಮಾಡಲು ಸಿದ್ದನಿರುತ್ತಾನೆ. ಅದಕ್ಕಾಗಿ ಕಂಟಕವೊಂದರಲ್ಲಿ ತಗುಲಿಕೊಂಡ ನಾಯಕ ಅದರಿಂದ ಹೇಗೆ ಹೊರಬರುತ್ತಾನೆ ಎಂಬುದೇ ಸಾರ್ವಜನಿಕರಿಗೆ ಸುವರ್ಣಾವಕಾಶದ ಕಥಾಸಾರಾಂಶ. ರಿಷಿಗೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ ನಟಿಸುತ್ತಿದ್ದಾರೆ. ಪ್ಯಾಚಪ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಸದ್ಯ ಮೂರು ಹಾಡುಗಳು ಹಾಗೂ ಕ್ಲೈಮ್ಯಾಕ್ಸ್ ಶೂಟಿಂಗ್ ನ್ನು ಉಳಿಸಿಕೊಂಡಿದೆ. ಇದೇ ತಿಂಗಳಾಂತ್ಯಕ್ಕೆ ಚಿತ್ರದ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಲಿದೆ. ಸಾರ್ವಜನಿಕರಿಗೆ ಸುವರ್ಣಾವಕಾಶಕ್ಕೆ ಅನೂಪ್ ರಾಮಸ್ವಾಮಿ ಕಶ್ಯಪ್ ಚಿತ್ರಕತೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಇನ್ನು ಜನಾರ್ದನ್ ಚಿಕ್ಕಣ್ಣ, ಹರಿಕೃಷ್ಣ ಸಂಭಾಷಣೆ ಬರೆದಿದ್ದು, ವಿಜ್ಞೇಶ್ ರಾಜ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಆರ್ ದೇವರಾಜ್, ಪ್ರಶಾಂತ್ ರೆಡ್ಡಿ, ಜನಾರ್ದನ್ ಚಿಕ್ಕಣ್ಣ ಬಂಡವಾಳವನ್ನು ಹೂಡಿದ್ದಾರೆ. ಇನ್ನು ಸಿನಿಮಾ ತಾರಾಂಗಣದಲ್ಲಿ ಸಿದ್ದು ಮೂಲಿಮನಿ, ದತ್ತಣ್ಣ, ರಂಗಾಯಣ ರಘು, ಶೀನು, ಮಿತ್ರ, ಶಾಲಿನಿ ಇತರರಿದ್ದಾರೆ.











































