ರಾಕಿಂಗ್ ಸ್ಟಾರ್ ಯಶ್ ಅವರ ಬಾಡಿಗೆ ಮನೆಯ ವಿವಾದ ಇಂದು ನಿನ್ನೆಯದಲ್ಲ. ಸತತ ಎರಡು ವರ್ಷಗಳಿಂದ ಯಶ್ ಹಾಗೂ ಬನಶಂಕರಿಯ ಮನೆ ಓನರ್ ನಡುವಿನ ಪರ್ಸನಲ್ ತಕರಾರು ಬೀದಿಗೆ ಬಂದು, ಕೊನೆಗೆ ಸೋಶಿಯಲ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾದಲ್ಲೂ ಪುಕಾರೆದ್ದೆ ಕೋರ್ಟ್ ಮೆಟ್ಟಿಲ್ಲನ್ನೂ ಏರಿತ್ತು. ಸದ್ಯ ಎಲ್ಲವೂ ಸುಖಾಂತ್ಯಗೊಂಡಿದ್ದು, ಯಶ್ ತಮ್ಮ ಬನಶಂಕರಿಯ ಮನೆಯನ್ನು ಓನರ್ ಡಾ. ಮುನಿಪ್ರಸಾದ್ ಅವರಿಗೆ ಯಾವುದೇ ತಕರಾರಿಲ್ಲದೇ ಎಂಬತ್ತು ಸಾವಿರ ಡಿಡಿ ನೀಡುವ ಮೂಲಕ ಹಸ್ತಾಂತರಿಸಿದ್ದಾರೆ.

ಈ ಮೊದಲು ಎರಡು ತಿಂಗಳುಗಳ ಹಿಂದೆಯೇ (ಮಾರ್ಚ್ 31ಕ್ಕೆ) ಯಶ್ ಬಾಡಿಗೆ ಮನೆ ಖಾಲಿ ಮಾಡುವಂತೆ ಮನೆ ಖಾಲಿ ಮಾಡಲು ಹೈಕೋರ್ಟ್ ಈ ಹಿಂದೆ ಆದೇಶಿಸಿತ್ತು. ಆದರೆ, ಈ ಸಂಬಂಧ ಯಶ್ ಅವರ ತಾಯಿ ಪುಷ್ಪಾ ‘ಹಾಸನದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿಗೆ ನಮ್ಮ ಕುಟುಂಬ ಶಿಫ್ಟ್ ಆಗಲು ನಿರ್ಧರಿಸಿದ್ದೇವೆ. ಹಾಗಾಗಿ 6 ತಿಂಗಳು ಕಾಲಾವಕಾಶ ನೀಡಬೇಕು ಎಂದು ಕೋರ್ಟ್ಗೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮನೆ ಮಾಲೀಕರಾದ ಡಾ.ಮುನಿಪ್ರಸಾದ್ ಪರ ವಕೀಲರು ಎರಡು ತಿಂಗಳು ಕಾಲಾವಕಾಶ ನೀಡಲು ಒಪ್ಪಿದ್ದರು. ಹಾಗಾಗಿ ಮೇ 31ರ ತನಕ ಹೈಕೋರ್ಟ್ ಕಾಲಾವಕಾಶ ನೀಡಿತ್ತು. ಆದರೆ, ಮೇ 31ಕ್ಕೂ ಯಶ್ ಕುಟುಂಬ ಮನೆ ಖಾಲಿ ಮಾಡಿಲ್ಲವಾಗಿ, ಮನೆ ಮಾಲೀಕರು ಮತ್ತೆ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದರು ಎನ್ನಲಾಗಿದೆ. ಅಷ್ಟರಲ್ಲಿ, ಇಂದು ಯಶ್ ಕುಟುಂಬ ಮನೆ ಖಾಲಿ ಮಾಡಿ ಕೀಯನ್ನು ಮನೆ ಮಾಲೀಕರಿಗೆ ಹಸ್ತಾಂತರಿಸುವ ಮೂಲಕ ಈ ವಿವಾದವು ಅಂತ್ಯಗೊಂಡಂತಾಗಿದೆ.











































