ಅಂಜುಮಲ್ಲಿಗೆ ಗಿರೀಶ್ ಕಾರ್ನಾಡರ ಅಂಜುಮಲ್ಲಿಗೆ ನಾಟಕ 1977ರಲ್ಲಿ ಪ್ರಕಟಗೊಂಡಿತು. ಅದನ್ನು ಆಮೂಲಾಗ್ರವಾಗಿ ತಿದ್ದಿತೀಡಿ ಪುನಃ 1989ರಲ್ಲಿ ಪ್ರಕಟಿಸಿದರು. ಸಮಕಾಲೀನ ಸಾಮಾಜಿಕ ಜೀವನದ ವಸ್ತುವನ್ನು ಹೊಂದಿರುವ ಕಾರ್ನಾಡರ ಏಕೈಕ ನಾಟಕ ಅಂಜುಮಲ್ಲಿಗೆ. ಋಗ್ವೇದ ಸಂಹಿತೆಯಲ್ಲಿ ಬರುವ ಯಮ-ಯಾಮಿನಿಯರ ಸಂವಾದದ ಮೊದಲನೆಯ ಶ್ಲೋಕವನ್ನು ಉಲ್ಲೇಖಿಸಿರುವುದನ್ನು ನೋಡಿದರೆ ಕಾರ್ನಾಡರು ನಮ್ಮ ಪರಂಪರೆಯ ನೆರಳಿನಿಂದ ಈಚೆಗೆ ಬಂದಿಲ್ಲ ಎನಿಸುತ್ತದೆ. ಅಕ್ಕ ತಮ್ಮನೊಡನೆ ಬಯಸಿದ ಲೈಂಗಿಕ ಸಂಬಂಧ ಅಸ್ವಾಭಾವಿಕ ಎನ್ನುವಂತಹ ವಸ್ತು ಇದರಲ್ಲಿದೆ. ಯಾಮಿನಿ ಮತ್ತು ಸತೀಶರ ಮೊದಲ ಲೈಂಗಿಕ ಸಂಬಂಧದ ಪೂರ್ಣತೆಯನ್ನು ಕಾಣಲು ಹೋದ ಅಕ್ಕ ಯಾಮಿನಿ ಇಂಗ್ಲೆಂಡಿನಲ್ಲಿದ್ದ ಸತೀಶನಿಂದ ನಿರಾಶಳಾಗುತ್ತಾಳೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇದಿಷ್ಟು ಮುಖ್ಯ ಕಥೆಯ ಹಂದರ. ಜೊತೆ ಜೊತೆಗೆ ಸಮಾನಾಂತರದ ಪಾತ್ರಗಳೂ ಕಾಣಿಸಿಕೊಂಡಿವೆ. ನೆನಪು ಲೈಂಗಿಕ ಕ್ರಿಯೆಯ ಮುಖ್ಯ ಭಾಗ ಎಂದು ಕಾರ್ನಾಡರು ಇಲ್ಲಿ ಪ್ರತಿಪಾದಿಸುತ್ತಾರೆ. ಸಂಸ್ಕೃತಿ ಶಿಷ್ಯಾಚಾರ ಮತ್ತು ನೆನಪು ಬಹು ಮಹತ್ವದ ಅಂಶಗಳೆಂದು ಅವರ ದರ್ಶನವನ್ನು ವಿಶ್ಲೇಷಿಸಬಹುದು. ಇದು ಆಧುನಿಕ ಜೀವನ ಶೈಲಿಯ, ಮಾನವ ಸಂಬಂಧಗಳ ಮೇಲಿನ ನಾಟಕಕಾರನ ಒಳನೋಟವು ಹೌದು. ಭಾಷೆಯ ದೃಷ್ಟಿಕೋನದಿಂದ ಕೆಲವು ಕಡೆ ದುರ್ಬಲತೆ ಕಂಡುಬಂದರೂ ಎತ್ತಿಕೊಂಡ ಸಮಸ್ಯೆ ಕಲಾತ್ಮಕವಾಗಲು ಅವರು ಆರಿಸಿಕೊಂಡ ಪರದೇಶದ ಪರಿಸರ ಕಾರಣವಾಗಿದೆ ಎನ್ನಬಹುದು. ಅದು ನಾಟಕಕಾರನ ಕೌಶಲ್ಯವೂ ಹೌದು. ಕಲಾವಿದನ ದೈತ್ಯ ಪ್ರತಿಭೆ ಯಶಸ್ಸಿನ ಪರಂಪರೆಯನ್ನು ನಿರ್ಮಿಸಿಕೊಂಡು ಹೊರಟಾಗ ಸೃಜನ ಕ್ರಿಯೆ ಸರ್ವಕೃತಿಗಳಲ್ಲಿಯೂ ಅದೇ ಉಚ್ಛ್ರಾಯ ಸ್ಥಿತಿಯಲ್ಲಿ ಇರಬೇಕೆಂದು ನಿರೀಕ್ಷಿಸುವುದು ತಪ್ಪಾಗುತ್ತದೆ.
|
No Comment! Be the first one.