ಒರಟ ಶ್ರೀ ಒಂಟಿಯಾಗಿ ಬಂದಿದ್ದಾರೆ!

Picture of Cinibuzz

Cinibuzz

Bureau Report

ಆಗಷ್ಟೇ ದುನಿಯಾ, ಮುಂಗಾರುಮಳೆಯಂಥಾ ಸಿನಿಮಾಗಳು ಬಂದು ಸಿನಿಮಾರಂಗವನ್ನು ಸಮೃದ್ಧಗೊಳಿಸಿದ್ದವು. ಜನ ಆ ಫೀಲನ್ನು ಎಂಜಾಯ್ ಮಾಡೋ ಹೊತ್ತಿಗೇ `ಯಾರೋ… ಕಣ್ಣಲ್ಲಿ ಕಣ್ಣನಿಟ್ಟು, ಮನಸಿನಲ್ಲಿ ಮನಸನ್ನಿಟ್ಟು, ನನ್ನ ಒಳಗಿಂದಾನೆ ನನ್ನ ಕದ್ದೋರ್ಯಾರೋ’ ಅನ್ನೋ ಮತ್ತೊಂದು ಹಾಡು ಕೇಳುಗರ ಕರ್ಣಾನಂದಗೊಳಿಸಿತ್ತು. ಅದು `ಒರಟ ಐ ಲವ್ ಯೂ’ ಸಿನಿಮಾದ ಇಂಪಾದ ಗೀತೆ. ಈ ಸಿನಿಮಾ ರಿಲೀಸಾದಾಗಲೂ `ಕನ್ನಡಕ್ಕೆ ಮತ್ತೊಬ್ಬ ಕಮರ್ಷಿಯಲ್ ಡೈರೆಕ್ಟರ್ ಸಿಕ್ಕರು’ ಅಂತಾ ನಿರ್ದೇಶಕ ಶ್ರೀ ಅವರ ಬಗ್ಗೆ ಒಳ್ಳೆ ಅಭಿಪ್ರಾಯಗಳು ಬಂದವು. ಎಲ್ಲ ಗೆದ್ದ ನಿರ್ದೇಶಕರಂತೆ ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಂಡಿದ್ದರೆ ಇವತ್ತು ಶ್ರೀ ಕೂಡಾ ಭಟ್ರು, ಸೂರಿ, ಶಶಾಂಕ್ ಮುಂತಾದವರಂತೆ ಜನ ಗುರುತಿಸುವಂತಾ ನಿರ್ದೇಶಕರ ಪಟ್ಟಿಗೆ ಸೇರುತ್ತಿದ್ದರೇನೋ? ಯಾವ ಕಾರಣಕ್ಕೆ ನಿಧಾನ ಮಾಡಿದರೋ ಗೊತ್ತಿಲ್ಲ ಒರಟ ನಂತರ `ಈ ಸಂಜೆ’ ಅನ್ನೋ ಸಿನಿಮಾವೊಂದನ್ನು ಶ್ರೀ ನಿರ್ದೇಶಿಸಿದರು. ಕಿಚ್ಚ ಸುದೀಪ್ ಅವರ ಹತ್ತಿರದ ಸಂಬಂಧಿ ಆರ್ಯ ಆ ಚಿತ್ರದಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟಿದ್ದರು. ಸಿನಿಮಾ ಬಿಡುಗಡೆಯೂ ಆಯಿತು. ಆದರೆ ಅಂದುಕೊಂಡ ಮಟ್ಟಿಗೆ ಕೈ ಹಿಡಿಯಲಿಲ್ಲ.

ಅದಾಗಿ ಸರಿಸುಮಾರು ಒಂಭತ್ತು ವರ್ಷಗಳ ನಂತರ ಮತ್ತದೇ ಶ್ರೀ ಮತ್ತು ಆರ್ಯ ಜೋಡಿ ಮತ್ತೆ ಒಂದಾಗಿ ಬಂದಿದ್ದಾರೆ. `ಒಂಟಿ’ ಅನ್ನೋ ಸಿನಿಮಾದಲ್ಲಿ ಅದೇ ಆರ್ಯ ಹೀರೋ ಆದರೆ, ಶ್ರೀ ನಿರ್ದೇಶನ ಮಾಡಿದ್ದಾರೆ. ಒಂದೇ ಒಂದು ಬದಲಾವಣೆಯೆಂದರೆ, ಪಡ್ಡೆ ಹುಡುಗರನ್ನು  ಆಕರ್ಷಿಸುವ ಪಕ್ಕಾ ಆ್ಯಕ್ಷನ್ ಮತ್ತು ಮಾಸ್ ಎಲಿಮೆಂಟಿನ ಸಿನಿಮಾದೊಂದಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಈಗ ಬಿಡುಗಡೆಯಾಗಿರುವ `ಒಂಟಿ’ ಚಿತ್ರದ ಟ್ರೇಲರು ನೋಡಿದರೇನೇ ಈ ಸಿನಿಮಾ ಗೆಲ್ಲೋದು ಗ್ಯಾರೆಂಟಿ ಎನ್ನುವಂತಿದೆ. ಆರಡಿ ಎತ್ತರದ ಆರ್ಯ ಅವರನ್ನು ಪರದೆಯಲ್ಲಿ ನೋಡೋದೇ ಒಂಥರಾ ಖುಷಿ ಎನಿಸುತ್ತದೆ. ಮೊದಲೇ ಕನ್ನಡ ಚಿತ್ರರಂಗದಲ್ಲಿ ಮಾಸ್ ಲುಕ್ ಇರುವ ಆ್ಯಕ್ಷನ್ ಹೀರೋಗಳ ಕೊರತೆ ಇದೆ. ಈ ನಿಟ್ಟಿನಲ್ಲಿ `ಒಂಟಿ’ ಆರ್ಯ ಕಮರ್ಷಿಯಲ್ ಸಬ್ಜೆಕ್ಟುಗಳಿಗೆ ಹೇಳಿ ಮಾಡಿಸಿದಂತಾ ಹೀರೋ ಥರಾ ಕಾಣುತ್ತಿದ್ದಾರೆ. ಇನ್ನು ಈ ಮಾಸ್ ಲುಕ್ ಆರ್ಯನಿಗೆ ನಾಯಕಿಯಾಗಿ ಮೇಘನಾ ರಾಜ್ ರೊಮ್ಯಾಂಟಿಕ್ ಟಚ್ ನೀಡಲಿದ್ದಾರೆ. ಈ ಎಲ್ಲ ನಿರೀಕ್ಷೆಗಳನ್ನು ಸಿನಿಮಾ ಬಿಡುಗಡೆಯ ನಂತರವೂ ಶ್ರೀ ಮತ್ತು ಆರ್ಯ ನಿಜವಾಗಿಸಬೇಕಿದೆ..

ಇನ್ನಷ್ಟು ಓದಿರಿ

Scroll to Top