ಸಾರ್ವಜನಿಕ ಜೀವನದಲ್ಲಿ ಪೊಲೀಸರು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಶಾಂತಿಯುತವಾದ ಜೀವನವನ್ನು ಪ್ರತಿಯೊಬ್ಬ ಮನುಷ್ಯನೂ ನಡೆಸಬೇಕಾದರೆ ಕಾರ್ಯ ಸಾಧನೆಗಾಗಿ ಪೊಲೀಸರು ಪಡುವ ಪಾಡು ಅಷ್ಟಿಷ್ಟಲ್ಲ. ಹಾಗಿದ್ದರೂ ಪೊಲೀಸರು ಕಲಿಯುಗದ ಯಮಕಿಂಕರರಂತೆ, ನಿಜ ಜೀವನದಲ್ಲಿ ವಿಲನ್ ಗಳಂತೆ ಬಿಂಬಿತರಾಗುತ್ತಾರೆ. ಸಾಕಷ್ಟು ಪ್ರಯತ್ನದ ಫಲವಾಗಿಯೂ ಪೊಲೀಸರ ಮೇಲಿರುವ ಆ ಅಪವಾಧವನ್ನು ಹೊಗಲಾಡಿಸಲು ವಿಫಲವಾಗುತ್ತಲೇ ಇದ್ದಾರೆ. ಸದ್ಯ ಆ ಅಪವಾಧವನ್ನು ಕೊಂಚಮಟ್ಟಿಗಾದರೂ ತೊಲಗಿಸಿ, ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಸ್ನೇಹಯುತ ಸಂಬಂಧವನ್ನು ಬೆಸೆಯುವ ಸಲುವಾಗಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾವೊಂದು ರಿಲೀಸ್ ಗೆ ರೆಡಿಯಾಗಿದೆ.

ಸಾರ್ವಜನಿಕರಲ್ಲಿ ವಿನಂತಿ ಎಂದು ಟೈಟಲ್ಲಿನಲ್ಲಿ ರೆಡಿಯಾಗಿರುವ ಕೃಪಾ ಸಾಗರ್ ಸಾರಥ್ಯದ ಈ ಸಿನಿಮಾಕ್ಕೆ ಪೊಲೀಸರೇ ಮೂಲ ಕಥಾ ವಸ್ತು. ಜನಜೀವನದಲ್ಲಿ ನಡೆಯುವ ಸಂಗತಿಯೊಂದನ್ನು ಕೇಂದ್ರೀಕರಿಸಿಕೊಂಡು ಸಾರ್ವಜನಿಕರಲ್ಲಿ ವಿನಂತಿ ಎಂಬ ಸಿನಿಮಾವನ್ನು ತಯಾರು ಮಾಡಲಾಗಿದೆ.
ಇಲ್ಲಿಯವರೆಗೂ ಬಹುತೇಕ ಸಿನಿಮಾಗಳಲ್ಲಿ ನೆಗೆಟೀವ್ ಶೇಡಿನಲ್ಲಿ ಕಾಣಿಸಿಕೊಂಡಿರುವ ರಮೇಶ್ ಪಂಡಿತ್ ಸಾರ್ವಜನಿಕರಲ್ಲಿ ವಿನಂತಿ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಪೊಲೀಸರಿಗಾಗಿಯೇ ಹಾಡೊಂದನ್ನು ಕಂಪೋಸ್ ಮಾಡಲಾಗಿದ್ದು ಅದನ್ನು ಜೈಹೋ ವಿಜಯ್ ಪ್ರಕಾಶ್ ಹಾಡಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕನಾಗಿ ನವ ನಟ ಮದನ್ ರಾಜ್ ಅಭಿನಯಿಸಿದ್ದು ನಾಯಕಿಯಾಗಿ ಅಮೃತಾ ನಟಿಸಿದ್ದಾರೆ. ಅಂತರಾಷ್ಟ್ರೀಯ ಯೋಗದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ವಿನಂತಿ ಸಿನಿಮಾ ರಿಲೀಸ್ ಆಗಲಿದೆ.











































