ಪತ್ರಿಕಾ, ಟಿವಿ ಮಾಧ್ಯಮಗಳಿಗೆ ಸೋಶಿಯಲ್ ಮೀಡಿಯಾ ಕಾಂಪಿಟೇಷನ್ ಕೊಡಲು ಶುರುವಾದ ಮೇಲಂತೂ ಫೇಸ್ ಬುಕ್, ಟ್ವಿಟ್ಟರ್, ವೆಬ್ ಸೈಟು, ಯೂಟ್ಯೂಬ್, ಇನ್ ಸ್ಟಾಗ್ರಾಂ ಇತ್ಯಾದಿ ಜಾಲ ತಾಣಗಳ ಅಬ್ಬರ ಅಷ್ಟಿಷ್ಟಲ್ಲ. ತಮ್ಮದೇ ಆದ ನ್ಯೂಸ್ ಗ್ರೂಪ್ ಗಳನ್ನು, ಚಾನೆಲ್ ಗಳನ್ನು ಮಾಡಿಕೊಂಡ ಬಹುತೇಕ ಸೈಟ್ ಗಳು ಹಿಟ್ಸ್, ವ್ಯೂವರ್ ಶಿಪ್ ಹೆಚ್ಚು ಗಳಿಸುವ ಸಲುವಾಗಿ ಫೇಕ್ ನ್ಯೂಸ್ ಗಳನ್ನು ಹರಡಿ ಜನರನ್ನು ತಪ್ಪು ದಾರಿಗೆ ಎಳೆಯುವ ವಿಕೃತಿಗೆ ಇಳಿದಿವೆ. ಇದರಿಂದ ಪ್ರಭಾವಿಗಳ, ಸೆಲೆಬ್ರೆಟಿಗಳ ಹೆಸರಿಗೆ ಮಸಿ ಬಳಿಯುವ ಕೆಲಸಗಳು ಜೋರಾಗಿಯೇ ನಡೆಯುತ್ತಿವೆ. ಇಂತಹ ಸುಳ್ಳು ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸುವ ಆಂದೋಲನ ದೇಶದಲ್ಲಿ ಪ್ರಾರಂಭವಾಗಿದೆ.

ಈ ಆಂದೋಲನಕ್ಕೆ ಕನ್ನಡದ ನಟ ರಕ್ಷಿತ್ ಶೆಟ್ಟಿಯೂ ಸಾಥ್ ನೀಡಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಪರಭಾಷಾ ನಟರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸುಳ್ಳು ಸುದ್ದಿಗೆ ಕಡಿವಾಣ ಹಾಕಲು ಪ್ರಚಾರ ಮಾಡುವುದು ಆಂದೋಲನದ ಉದ್ದೇಶವಾಗಿದೆ. ಈ ಆಂದೋಲನಕ್ಕೆ ಸ್ಟಾರ್ ನಟರಾದ ಮೋಹನ್ ಲಾಲ್, ಡಯಾನಾ ಪೆಂಟಿ, ವಿಜಯ್ ಸೇತುಪತಿ, ಜೀತ್, ಮಂಜು ವಾರಿಯರ್ ಮತ್ತಿತರರು ಮುಂದಾಳತ್ವ ವಹಿಸಿದ್ದಾರೆ.











































