ರಾಷ್ಟ್ರಪ್ರಶಸ್ತಿ ಪುರಸ್ಕೃತ `ಬ್ಯಾರಿ’ ಸಿನಿಮಾವನ್ನು ಪ್ರದರ್ಶನ ಮಾಡಬಾರದೆಂದು ಮಂಗಳೂರು ಕೋರ್ಟ್ ತೀರ್ಪು ನೀಡಿದೆ. ಸಾರಾ ಅಬೂಬಕರ್ ಕಾದಂಬರಿ `ಚಂದ್ರಗಿರಿಯ ತೀರದಲ್ಲಿ’ ಕೃತಿಯ ಕತೆಯನ್ನು ಕೃತಿಚೌರ್ಯವೆಸಗಿ ನಿರ್ಮಿಸಿರುವುದಾಗಿ ಮಾಡಿರುವ ಆರೋಪದ ಮೇಲೆ ಬ್ಯಾರಿ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿದೆ. ಸುವೀರನ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅಲ್ತಾಫ್ ಹುಸೇನ್ ನಿರ್ಮಾಣ ಮಾಡಿದ್ದಾರೆ.

59ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದ `ಬ್ಯಾರಿ’ ಸಿನಿಮಾವನ್ನು ತನ್ನ ಕಥೆ ಕದ್ದು ನಿರ್ಮಿಸಿರುವ ವಿಚಾರ ತಿಳಿದ ಮೇಲೆ ಅಬೂಬರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಮುರಳೀಧರ ಪೈ ಬಿ. ತೀರ್ಪು ನೀಡಿದ್ದು, ಸಾರ್ವಜನಿಕವಾಗಿ ಸಿನಿಮಾವನ್ನು ಪ್ರದರ್ಶಿಸದಂತೆ ಆದೇಶಿಸಿದ್ದು,ಕೃತಿಚೌರ್ಯಕ್ಕಾಗಿ ಲೇಖಕಿಗೆ ಎರಡು ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು. ಜೊತೆಗೆ ವಿಚಾರಣಾವಧಿಯ(ಎಂಟು ವರ್ಷ 12 ದಿನಗಳು) ಕಾಲದ ಬಡ್ಡಿಯನ್ನು, ನ್ಯಾಯಾಲಯದ ವೆಚ್ಚವನ್ನೂ ಪಾವತಿಸುವಂತೆಯೂ ನ್ಯಾಯಪೀಠ ತೀರ್ಪು ನೀಡಿದೆ. `ಲಂಕೇಶ್ ಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ `ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ಪ್ರಕಟಗೊಂಡಿತ್ತು. ಸಾರ್ವಜನಿಕವಾಗಿ ಬಾರಿ ಚರ್ಚೆಗೊಳಗಾಗಿದ್ದು ಈ ಕೃತಿ ಅಪಾರ ಓದುಗ ಸಮೂಹವನ್ನೇ ಹೊಂದಿತ್ತು.











































