ಯಾವುದೇ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಅಗಾಧ ಅನುಭವಗಳನ್ನು ಪಡೆದ ಸ್ಪರ್ಧಿಗಳನ್ನು ಹೊಸ ಸೀಜನ್ನಿಗೆ ಬರಮಾಡಿಕೊಳ್ಳುವ ಸಂದರ್ಭಗಳಲ್ಲಿ ಪ್ರೊಮೋಷನ್ ಪೀಸ್ ಗಳಂತೆ ಬಳಸಿಕೊಳ್ಳುವ ವಾಡಿಕೆ ಇದೆ. ಆ ಮೂಲಕ ಹೊಸ ಸ್ಪರ್ಧಿಗಳಿಗೆ ಕೊಂಚಮಟ್ಟಿಗಾದರೂ ಆತ್ಮ ವಿಶ್ವಾಸ ಮೂಡಿಸುವ ಪ್ರಯತ್ನವನ್ನು ಇನ್ ಡೈರೆಕ್ಟ್ ಆಗಿ ಮಾಡುವುದುಂಟು.

ಸದ್ಯದಲ್ಲೇ ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಸೀಜನ್ 3 ಕಾರ್ಯಕ್ರಮ ಆರಂಭವಾಗಲಿದೆ. ಈಗಾಗಲೇ ಕರ್ನಾಟಕದುದ್ದಕ್ಕೂ ಆಡಿಷನ್ ನಡೆಸಿ ಪ್ರತಿಭಾವಂತ ವ್ಯಕ್ತಿತ್ವಗಳನ್ನು ಸೆಲೆಕ್ಟ್ ಮಾಡುವ ಕೆಲಸದಲ್ಲಿ ಕಾಮಿಡಿ ಕಿಲಾಡಿ ತಂಡ ನಿರತವಾಗಿದೆ. ಅದರಂತೆ ಬೆಂಗಳೂರಿನಲ್ಲೂ ಕಳೆದ ಭಾನುವಾರ ವಿಜಯನಗರದ ಶ್ರೀ ಸರ್ವಜ್ಞ ಪಬ್ಲಿಕ್ ಸ್ಕೂಲ್ ನಲ್ಲಿ ಒಂದು ಆಡಿಷನ್ ಆಯೋಜಿಸಲಾಗಿತ್ತು. ನಿರೀಕ್ಷೆಗೂ ಮೀರಿದ ಜನಸ್ತೋಮವೂ ಅಲ್ಲಿ ನೆರೆದಿತ್ತು. ಆ ಆಡಿಷನ್ ನಲ್ಲಿ ಕಳೆದ ಸೀಜನ್ ನಲ್ಲಿ ಜನಮನ ಗೆದ್ದ ಸೀನಿಯರ್ ಕಿಲಾಡಿಗಳು ಪ್ರಮುಖ ಆಕರ್ಷಣೆಯೂ ಆಗಿದ್ದರು. ಆಡಿಷನ್ ಗೆ ಬಂದಿದ್ದ ಸ್ಪರ್ಧಿಗಳ ಜತೆ ಹಾಳು ಹರಟೆಯನ್ನು ಮಾಡಿ ಟೈಮ್ ಪಾಸ್ ಮಾಡುತ್ತಿದ್ದ ಕಿಲಾಡಿಗಳು ನೋಡ ನೋಡುತ್ತಲೇ ಸ್ಪರ್ಧಿಗಳ ಕಾಲೆಳೆದುಕೊಂಡು `ಇದೇನ್ ಮಹಾ ಕಾಮಿಡಿ’ ನಗೂನೇ ಬರ್ಲಿಲ್ಲ, ನೀನು ಕಾಮಿಡಿ ಕಿಲಾಡಿಗೆ ಬರ್ಬೇಕಾ ಇತ್ಯಾದಿ ಫಿಲ್ಮಿ ಡೈಲಾಗ್ ಗಳನ್ನು ಹೊಡೆಯುತ್ತಲೇ ಕಾಲ ಕಳೆದರು. ಆಡಿಷನ್ ನಲ್ಲಿ ನೆರೆದಿದ್ದ ಬಹಳಷ್ಟು ಮಂದಿಗೂ ಈ ಕುರಿತು ಬೇಸರವಾಗಿ ಸೀನಿಯರ್ ಕಿಲಾಡಿಗಳ ಮೇಲೆ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ವಿಷಾಧದಲ್ಲಿಯೇ ಹಿಂತಿರುಗಿದ್ದಾರೆ.

ಸೀನಿಯರ್ ಕಿಲಾಡಿಗಳಿಗೇನು ತಲೆ ನೆಟ್ಟಗಿಲ್ಲದಂತೆ ಕಾಣುತ್ತದೆ. ಸೀಜನ್ ಗಳಲ್ಲಿ ಭಾಗವಹಿಸಿ ಸೋ ಕಾಲ್ಡ್ ಸೆಲೆಬ್ರೆಟಿಗಳೆಂದೆನಿಸಿಕೊಂಡ ಮಾತ್ರಕ್ಕೆ ಪ್ರತಿಭಾವಂತರನ್ನು ಹಳ್ಳಕ್ಕೆ ತಳ್ಳುವ, ಮಾನಸಿಕವಾಗಿ ಕುಗ್ಗಿಸಿ ತುಳಿಯುವ ಕೆಲಸವನ್ನು ಯಾಕೆ ಮಾಡ್ಬೇಕು? ಹೊಟ್ಟೆ ತುಂಬ ಊಟ, ಓಡಾಡೋದಕ್ಕೆ ಕಾರು ಬಂದ ಮಾತ್ರಕ್ಕೆ ಬಂದ ದಾರಿಯನ್ನು ಮರೆತು ಬಿಡೋದ. ಇದೇ ಎರಡ್ಮೂರು ವರ್ಷಗಳ ಹಿಂದೆ ತಾವೂ ಅದೇ ಜಾಗದಲ್ಲಿ ನಿಂತಿದ್ದೆವು ಅನ್ನೋ ಪರಿಜ್ಞಾನ ಬಾರದೇ ಹೋದ್ರೆ ಹೇಗೆ? ಮಾನವೀಯತೆಯನ್ನು ಮರೆತು ಕಾಲೆಳೆಯುವುದನ್ನೇ ಆಟವಾಗಿಸಿಕೊಂಡು ನಗು ಬಾರದ ಕಾಮಿಡಿ ಮಾಡುವ ಉನ್ಮಾದ ಸೀನಿಯರ್ ಕಿಲಾಡಿಗಳಿಗೆ ಯಾಕೆ ಬಂತೋ? ಒಟ್ನಲ್ಲಿ ನಮ್ಮವರೇ ನಮ್ಮನ್ನು ತುಳೀತಾರೇ ಅನ್ನೋ ಮಾತನ್ನು ಹಿಂದೆ ತುಳಿಸಿಕೊಂಡು ಮೇಲೆದ್ದ ಸೀನಿಯರ್ ಕಿಲಾಡಿಗಳೇ ಮಾಡಿರೋದು ದುರಂತ.











































