ರಾಧಿಕಾ ಪಂಡಿತ್ ಮದುವೆಯಾದ ನಂತರ ಒಪ್ಪಿಕೊಂಡಿರುವ ಚಿತ್ರ `ಆದಿ ಲಕ್ಷೀ ಪುರಾಣ’. ಈ ಚಿತ್ರದಲ್ಲಿ ಅವರು ಸಮಾಜದ ತಳಮಟ್ಟದಲ್ಲಿರುವ ಜನರ ಪರ ದನಿಯೆತ್ತುತ್ತಾ, ಅವರ ಬದುಕನ್ನು ಸುಧಾರಿಸುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗಿನ ಸಮಾಜದಲ್ಲಿ ಪ್ರೌಡಶಾಲಾ ವಿದ್ಯಾರ್ಥಿಗಳು ಸಿಗರೇಟ್ ಸೇದುವುದು, ಕಾಲೇಜು ಹುಡುಗರು ಮಾದಕ ವ್ಯಸನಕ್ಕೆ ದಾಸರಾಗುವುದು. ಇದರಿಂದ ಯುವ ಜನಾಂಗ ಹೇಗೆ ಕೆಟ್ಟದಾರಿಗೆ ಹೋಗುತ್ತಿದೆ. ಇದೆಲ್ಲಾದಕ್ಕೆ ಕಡಿವಾಣ ಹಾಕಿ, ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುವುದೇ ಆದಿ ಲಕ್ಷೀ ಪುರಾಣ ಚಿತ್ರದ ಸಾರಾಂಶವಾಗಿದೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ. ಡ್ರಗ್ಸ್ ದಂದೆಯನ್ನು ತನಿಖೆ ಮಾಡುವಾಗ, ನಾಯಕಿ ಲಕ್ಷ್ಮಿಯ ಭೇಟಿ, ನಂತರ ಪರಿಚಯವಾಗುತ್ತದೆ. ನಾಯಕನ ತಾಯಾಗಿ ತಾರಾ, ತಂದೆಯಾಗಿ ಸುಚೇಂದ್ರ ಪ್ರಸಾದ್ ಅಭಿನಯಿಸಿದ್ದಾರೆ.

ಮಣಿರತ್ನಂ ಬಳಿ ಸಹಾಯಕರಾಗಿ ಕೆಲಸ ಮಾಡಿದ ಚೆನ್ನೈನ ಪ್ರಿಯಾ ಈ ಚಿತ್ರದ ನಿರ್ದೇಶಕಿ. ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಅನೂಪ್ ಭಂಡಾರಿ ಮೂರು ಹಾಡುಗಳನ್ನು ಬರೆದು ಸಂಗೀತ ಒದಗಿಸಿದ್ದಾರೆ. ಛಾಯಾಗ್ರಹಣ ಪ್ರೀತಾ ಜಯರಾಮನ್ ಅವರದು. ಚಿತ್ರದ ಸಂಭಾಷಣೆಗಳನ್ನು ಪ್ರಶಾಂತ್ ರಾಜಪ್ಪ ರಚಿಸಿದ್ದಾರೆ. ನೃತ್ಯ ಎ.ಹರ್ಷ ನಿರ್ವಹಿಸಿದ್ದಾರೆ. ಕನ್ನಡ ಚಿತ್ರರಂಗದ ಧೀರ ರಾಕಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯುಎ ಪ್ರಮಾಣ ಪತ್ರ ಪಡೆದಿರುವ ಈ ಚಿತ್ರ ಇದೇ ತಿಂಗಳ 19ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ರೇಡಿಯೋ ಮಿರ್ಚಿ ಕಚೇರಿಯಲ್ಲಿ ಚಿತ್ರದ ಹಾಡುಗಳು ಅನಾವರಣಗೊಂಡಿವೆ.











































