ಸಿಗಂದೂರು ದೇವಿ ಕುರಿತ ಭಕ್ತಿ ಚಿತ್ರ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿ ದೆವ್ವದ ಸಿನಿಮಾ ’ವಜ್ರಮುಖಿ’ಗೆ ರಚನೆ, ಚಿತ್ರಕತೆ ಬರೆದು ಹಣ ಹೂಡುವ ಜೊತೆಗೆ ಖಳನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾರರ್, ಪ್ರೀತಿ ಮತ್ತು ತ್ರಿಕೋನಾತ್ಮಕ ಮಹಿಳಾ ಪ್ರಧಾನ ಜೊತೆಗೆ ಮರ್ಡರ್ ಮಿಸ್ಟರ್ ಕತೆ ಇರುವುದು ವಿಶೇಷವಾಗಿದೆ. ಯಾರಿಂದ ಯಾರಿಗೆ ಎಂಬಂತಹ ಕಾಲ್ಪನಿಕ ಘಟನೆಗಳು ತಿರುವು ಕೊಡುತ್ತದೆ. ರೋಡ್ ರೋಮಿಯೋ ನಂತರ ಎರಡನೆ ಇನ್ನಿಂಗ್ಸ್ ಎನ್ನುವಂತೆ ಆಡ್ ಫಿಲಿಂ ಮೇಕರ್ ಪಾತ್ರಕ್ಕೆ ನಾಯಕ ದಿಲೀಪ್ ಪೈ ನಟನೆ ಇದೆ. ಇವರಿಗೆ ಜೋಡಿಯಾಗಿ ಸಂಜನಾ ನಾಯ್ಡು ನಟಿಸಿದ್ದಾರೆ. ನಲವತ್ತೈದು ದಿನಗಳ ಕಾಲ ಮೂರು ಹಂತಗಳಲ್ಲಿ ಸಾಗರ, ಜೋಗ್ ಜಲಪಾತ, ತಾಳಗುಪ್ಪ ಸುಂದರ ತಾಣಗಳಲ್ಲಿ ಸಂಜೆ 4 ರಿಂದ ಮುಂಜಾನೆ ನಾಲ್ಕರವರೆಗೆ ಚಿತ್ರೀಕರಣ ನಡೆಸಲಾಗಿದೆ. ಸಂಕಲನ ಮತ್ತು ನಿರ್ದೇಶನ ಮಾಡಿರುವುದು ಎನ್. ಆದಿತ್ಯ ಕುಣಿಗಲ್.

ಶೀರ್ಷಿಕೆ ಹೆಸರಿನಲ್ಲಿ ಪ್ರೇಕ್ಷಕರಿಗೆ ಹೆದರಿಸುತ್ತಾರೆ. ಮೋಹಿನಿ, ಕೊಳ್ಳಿ ದೆವ್ವ, ನಾಗವಲ್ಲಿ ತರಹ ಇರುವುದಿಲ್ಲ. ಕಿಚ್ಚು, ಸೇಡು, ಸಿಟ್ಟು ಹಾಗೂ ಭಾವನೆಗಳನ್ನು ತುಂಬಿಕೊಂಡಿರುವ ಪಾತ್ರದಲ್ಲಿ ನೀತೂ ಅಭಿನಯಸಿದ್ದು ಇವರಿಗೆ 35ನೇ ಚಿತ್ರವಾಗಿದೆ. ಹಾರರ್ ಚಿತ್ರಗಳಲ್ಲಿ ನಟಿಸಿದ್ದರೂ, ಮೊದಲ ಬಾರಿ ದೆವ್ವ ಆಗಿ ಭಯಂಕರವಾಗಿ ನಗು ಚೆಲ್ಲಿದ್ದಾರಂತೆ. ಮೂರು ಹಾಡುಗಳಿಗೆ ಸಾಹಿತ್ಯ ಒದಗಿಸಿರುವ ಡಾ.ನಾಗೇಂದ್ರ ಪ್ರಸಾದ್ ಟೈಟಲ್ ನೀಡಿದ್ದು ಅಲ್ಲದೆ ಸದರಿ ಪಾತ್ರಕ್ಕೆ ನೀತೂ ಹೊಂದಿಕೊಳ್ಳುತ್ತಾರೆಂದು ಶಿಫಾರಸ್ಸು ಮಾಡಿದ್ದರು. ಇವರಿಗಾಗಿಯೇ ’ಕಾಲ ಚಂಚಲ’ ಹಾಡು ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಶೇಕಡ 25 ಭಾಗದಷ್ಟು ದೆವ್ವದ ದೃಶ್ಯಗಳು ಬರಲಿದೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಹೆಚ್.ದಾಸ್ ಎಲ್ಲರನ್ನು ಚೆನ್ನಾಗಿ ತೋರಿಸಿದ್ದಾರೆ.
ಮೂರು ಹಾಡುಗಳಿಗೆ ಸಂಗೀತವನ್ನುರಾಜ್ ಭಾಸ್ಕರ್ ಒದಗಿಸಿದ್ದಾರೆ. ಸಾಹಸ ಕೌರವ ವೆಂಕಟೇಶ್, ಸಂಭಾಷಣೆ ವಿನಾಯಕ್ ರಾಮ್ಕಲಗಾರು, ನೃತ್ಯಕಿಂಗ್ ಕಿಶೋರ್ ಅವರದಾಗಿದೆ. ನಿರ್ಮಾಪಕರ ಗೆಳಯನ ಪತ್ನಿ ಡಾ.ಗೀತಾ ನರೇಂದ್ರ ನಾಯಕ್ ಸಹ ನಿರ್ಮಾಪಕರಿಯಾಗಿ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕರ ಹಿತೈಷಿ ಹಿರಿಯ ವಿತರಕ, ನಿರ್ಮಾಪಕ ಎನ್.ಕುಮಾರ್ ಮುಂದಿನ ವಾರ ಬಿಡುಗಡೆ ಮಾಡಲು ಸಹಕಾರ, ಸಲಹೆ ನೀಡುತ್ತಿದ್ದಾರೆ.











































