ಬ್ರಹ್ಮಚಾರಿ ಸಿನಿಮಾದ ನಂತರ ನಟ ನೀನಾಸಂ ಸತೀಶ್ ಗೋದ್ರಾ ಚಿತ್ರದಲ್ಲಿ ತೊಡಗಿಕೊಂಡಿದ್ದು, ಸಿನಿಮಾ ಚಿತ್ರೀಕರಣದಲ್ಲಿರುವಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ನೈಜ ಘಟನೆಗಳಿಂದ ಪ್ರೇರಿತರಾಗಿ ಸಿನಿಮಾ ಮಾಡುತ್ತಾರೆಂದು ಕರೆಸಿಕೊಳ್ಳುವ ಜೇಕಬ್ ವರ್ಗೀಸ್ ಅವರೇ ಗೋದ್ರಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅವರ ಬಳಿ ಕೆಲಸ ಮಾಡಿರುವ ನಂದೀಶ್ ಈ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿಯೂ ಚಂದನವನಕ್ಕೆ ಲಾಂಚ್ ಆಗುತ್ತಿದ್ದಾರೆ. ಇನ್ನು ಗುರು ಶಿಷ್ಯರು ಸೇರಿ ಗುಜರಾತಿನ ಘಟನೆಯನ್ನೇ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆಯೇ ಎಂಬ ಅನುಮಾನಗಳು ಗಾಂಧಿನಗರದಲ್ಲಿದೆ.

ಈ ಮಧ್ಯೆ ಗೋದ್ರಾ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದ್ದು, ಶೂಟಿಂಗ್ ನ ಬಹುಭಾಗ ಹೊರ ರಾಜ್ಯಗಳಲ್ಲಿ ನಡೆಯುತ್ತಿರುವುದು ಅನುಮಾನಕ್ಕೆ ಮತ್ತಷ್ಟು ಇಂಬುಕೊಡುವಂತಿದೆ. ಅಲ್ಲದೇ ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ಗೋದ್ರಾ ತಯಾರಾಗಲಿದ್ದು, ತಮಿಳು, ಮಲೆಯಾಳಂ ಭಾಷೆಗಳಿಂದಲೂ ಬೇಡಿಕೆ ಸೃಷ್ಟಿಯಾಗಿದೆಯಂತೆ. ಆದರೆ ಚಿತ್ರದ ಕುರಿತಾಗಿನ ಯಾವುದೇ ಅಂತೆ ಕಂತೆಗಳಿಗೆ ಕೇರ್ ಮಾಡದ ಚಿತ್ರತಂಡ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಅಂದ ಹಾಗೆ ಚಿತ್ರಕ್ಕೆ ನಾಯಕಿಯಾಗಿ ಶ್ರದ್ದಾ ಶ್ರೀನಾಥ್ ನಟಿಸಿದ್ದು, ವಸಿಷ್ಟ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.











































