ಬಹುತೇಕ ಹೊಸಬರೇ ಸೇರಿ ನಿರ್ಮಾಣ ಮಾಡಿರುವ ವಿಜಯರಥ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಕಳೆದ ವಾರ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಕನ್ನಡದ ಹಲವಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಅಜಯ್ ಸೂರ್ಯ.ಕೆ ಇದೇ ಮೊದಲ ಬಾರಿಗೆ ಈ ಚಿತ್ರದ ಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರಪಂಚದಲ್ಲಿ ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದು ಹೊರಟಾಗ ಹಲವಾರು ಜನ ಅಡ್ಡ ಬರುತಾರೆ. ನಾವು ಎರಡು ಹಂತದಲ್ಲಿ ಬದುಕುತ್ತಿದ್ದೇವೆ. ಅದು ಧರ್ಮ ಮತ್ತು ಕರ್ಮ. ಒಬ್ಬ ತನ್ನ ಗುರಿ ಮುಟ್ಟುವ ಪ್ರಯತ್ನದಲ್ಲಿ ಕೆಳಗಡೆ ಬೀಳುತ್ತಾನೆ. ಅದು ಕರ್ಮ. ಇನ್ನೊಬ್ಬ ತನ್ನ ಗುರಿಯನ್ನು ತಲುಪುತ್ತಾನೆ. ಅದುವೇ ಧರ್ಮ. ಕೆಳಗಡೆ ಬಿದ್ದವನನ್ನು ಕೂಡ ತನ್ನ ಜೊತೆ ಕರೆದುಕೊಂಡು ಹೋಗಿ ಗುರಿಯನ್ನು ಮುಟ್ಟಿಸಲು ಪ್ರಯತ್ನ ಮಾಡುವ ಹೀರೋಗೆ ಮೂರನೇ ರೂಪದಲ್ಲಿ ಕಾಣಿಸುತ್ತದೆ. ಯಾರಿಗೂ ಕಾಣಲಾರದ ಆ ತೃತೀಯ ಶಕ್ತಿ ಏನು ಎನ್ನುವುದೇ ವಿಜಯರಥ ಚಿತ್ರದ ಕುತೂಹಲ.

ಚಿತ್ರದಲ್ಲಿ ನಾಯಕ ಹಳ್ಳಿಯ ಹುಡುಗನಾಗಿದ್ದು, ಜನರಿಗೆ ಯಾವುದೇ ತೊಂದರೆ ಬಂದರೂ ಮುಂದೆ ನಿಲ್ಲುವ ಗುಣಹೊಂದಿರುತ್ತಾನೆ. ಒಂದು ಹಂತದಲ್ಲಿ ತನಗೇ ದೊಡ್ಡದೊಂದು ಸಮಸ್ಯೆ ಎದುರಾದಾಗ ಅವನ ಬದುಕಿನಲ್ಲಿ ಏನಾಗುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ವಸಂತ್ ಕಲ್ಯಾಣ್ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜನವಿ ಚಿತ್ರದ ನಾಯಕಿ. ಕೆ.ಜಿ.ಎಫ್ ಖ್ಯಾತಿಯ ಅರ್ಚನಾ ಚಿತ್ರದ ಮತ್ತೊಬ್ಬ ನಾಯಕಿ. ಇನ್ನು ಏಸಿಪಿಯಾಗಿ ರಾಜೇಶ್ ನಟರಂಗ, ನಾಯಕಿಯ ತಂದೆಯಾಗಿ ಹನುಮಂತೇ ಗೌಡ ಕಾಣಿಸಿಕೊಂಡಿದ್ದು, ಹಿರಿಯ ನಟ ಕಾಕೋಳು ರಾಮಯ್ಯ ಒಬ್ಬ ಚಮ್ಮಾರನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆಯನ್ನು ಪ್ರೇಮ್ ಕುಮಾರ್ ಮಾಡಿದ್ದು, ಎಸ್. ಎಲ್. ಚಂದ್ರು ಸಾಹಿತ್ಯ ರಚನೆ ಮಾಡಿದ್ದಾರೆ. ಗೋಪಿ ಚಿತ್ರದ ಸಂಭಾಷಣೆಯನ್ನು, ರವಿಚಂದ್ರನ್ ಸಂಕಲನ ನಿರ್ವಹಿಸಿದ್ದಾರೆ. ಛಾಯಾಗ್ರಹಣ ಯೋಗಿ ಅವರದಾಗಿದೆ. ತಮ್ಮನೇ ನಾಯಕನಾಗಿ ನಟಿಸುತ್ತಿರುವ ಸಿನಿಮಾಕ್ಕೆ ರಮೇಶ್ .ಆರ್. ಮಧುಗಿರಿ ಬಂಡವಾಳ ಹೂಡಿzರೆ. ವಿಜಯ್ ಫಿಲಂಸ್ ಮೂಲಕ ಜುಲೈ 26ರಂದು ವಿಜಯರಥ ಚಿತ್ರ ರಾಜ್ಯದ್ಯಂತ ತೆರೆ ಕಾಣುವ ಸಾದ್ಯತೆ ಇದೆ.











































