ಮೂಕಜ್ಜಿಯ ಕನಸು ಚಿತ್ರದ ನಂತರ ಪಿ. ಶೇಷಾದ್ರಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಮೋಹನ ದಾಸ. ಈಗಾಗಲೇ ಬಹುತೇಕ ಚಿತ್ರದ ಚಿತ್ರೀಕರಣ ಮುಗಿದಿದ್ದು, ಮಹಾತ್ಮಗಾಂಧಿ ಬಾಲ್ಯ ಕುರಿತಾದ ‘ಮೋಹನದಾಸ’ ಚಿತ್ರದ ಕೊನೆ ಹಂತದ ಚಿತ್ರೀಕರಣವು ಬೆಂಗಳೂರಿನ ಚಾಮರಾಜಪೇಟೆಯ ೧೧೫ ವರ್ಷದ ಹಳೆಯ ಮನೆಯಲ್ಲಿ ಸೆರೆ ಹಿಡಿಯಲಾಯಿತು. 2006ರಲ್ಲಿ ಹಿರಿಯ ಕವಿ ಬೋಳುವಾರು ಮೊಹಮ್ಮದ್ ಕುಂಞ ಬರೆದ ಪಾಪು ಗಾಂಧಿ ಬಾಪು ಗಾಂಧಿಯಾದ ಕತೆ ಎಂಬ ಕೃತಿಯ ಸಾಕಷ್ಟು ವಿಚಾರಗಳನ್ನು ಮೋಹನದಾಸ ಚಿತ್ರಕ್ಕೆ ಬಳಕೆ ಮಾಡಿಕೊಳ್ಳಲಾಗಿದೆಯಂತೆ. ಇದೇ ವರ್ಷ ಗಾಂಧೀಜಿಯವರ 150ನೇ ವರ್ಷ ಜನ್ಮ ದಿನಾಚರಣೆಯ ಅಂಗವಾಗಿ ಮಿತ್ತ ಚಿತ್ರ ಸಂಸ್ಥೆ ಹುಟ್ಟುಹಾಕಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.

ಹದಿನಾಲ್ಕನೇ ವಯಸ್ಸಿನಲ್ಲಿ ಬಾಪು ಸುಳ್ಳು ಹೇಳಿದ್ದು, ಮಾಂಸಹಾರ ಸೇವಿಸಿದ್ದು, ವೇಶ್ಯೆ ಮನೆಗೆ ಹೋಗಿದ್ದು, ಧೂಮಪಾನ ಮಾಡಿದ್ದು, ಕೊನೆಗೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅಪ್ಪನಿಗೆ ಪತ್ರ ಬರೆದದ್ದು, ಅಪ್ಪ ಪತ್ರ ನೋಡಿ ಕಣ್ಣೀರು ಹಾಕಿದಾಗ ಬಾಪುನ ಇಡೀ ಬದುಕು ಬದಲಾಗುವುದೇ ಸಿನಿಮಾದ ಸಾರಾಂಶವಾಗಿದೆ. ಮೊಟ್ಟ ಮೊದಲ ಬಾರಿ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಬೆನ್ಕಿಂಗ್ಸ್ಲೇ ಅವರನ್ನು ಆಹ್ವಾನಿಸಲು, ಅವರ ಭೇಟಿಗಾಗಿ ಸಂಬಂದಪಟ್ಟವರನ್ನು ಸಂಪರ್ಕಿಸಲಾಗುತ್ತಿದೆ. ಇನ್ನು 80ರ ದಶಕದ ಮೆಗಾ ಧಾರವಾಹಿಗಳಾದ ನುಕ್ಕಡ್, ಯೋ ಜೋ ಹೈ ಜಿಂದಗಿದಲ್ಲಿ ನಟಿಸಿದ್ದ ಹಿರಿಯ ಕಲಾವಿದ ಅನಂತ ಮಹದೇವನ್ ಅವರು ಕರಮ ಚಂದ ಗಾಂಧಿ ಪಾತ್ರವನ್ನು ಮಾಡಿದ್ದಾರೆ. ಜತೆಗೆ ಪುತಲೀಬಾಯಿ ಪಾತ್ರವನ್ನು ಶೃತಿ ಅಭಿನಯಿಸಿದ್ದಾರೆ. ಬಾಲಕನಾಗಿ ಪರಂಸ್ವಾಮಿ, ಹುಡುಗನಾಗಿ ಮುಖ್ಯ ಪಾತ್ರದಲ್ಲಿ ಸಮರ್ಥ್, ತಪ್ಪು ದಾರಿಗೆ ಕರೆದುಕೊಂಡು ಹೋಗುವ ಗೆಳಯರುಗಳಾಗಿ ಆಭ್ಯಂತರ್, ಸೂರ್ಯ, ಸೋದರಿಯಾಗಿ ಜ್ಯೋತಿರ್ಮಯಿ, ಬೆಲವಣ್ಣು ಪಾತ್ರಕ್ಕೆ ನಂದಿನಿ ಮತ್ತಿತರರು ನಟಿಸಿದ್ದಾರೆ.











































