ಕಳೆದ ಫೆಬ್ರವರಿ ತಿಂಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಬಾಲಿವುಡ್ ನಟಿ ಪತ್ರಲೇಖಾ ಕಾಂಬಿನೇಷನ್ನಿನಲ್ಲಿ ‘ವೇರ್ ಇಸ್ ಮೈ ಕನ್ನಡಕ’ಎನ್ನುವ ಸಿನಿಮಾವೊಂದು ಮುಹೂರ್ತ ಆಚರಿಸಿಕೊಂಡಿತ್ತು. ಬಾಲಿವುಡ್ ನಟ ಅರ್ಬಾಸ್ ಖಾನ್ ಈ ಸಿನಿಮಾವನ್ನು ನಿರ್ಮಿಸಲು ಒಪ್ಪಿದ್ದರು. ರಾಜ್ ಮತ್ತು ದಾಮಿನಿ ಎಂಬ ದಂಪತಿ ಸೇರಿ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ, ಲಂಡನ್ನಲ್ಲಿ ನಡೆಯುವ ಕಥೆಯಿದ್ದು, ಮೂವತ್ತು ದಿನಗಳ ಕಾಲ ಅಲ್ಲೇ ಚಿತ್ರೀಕರಣ ನಡೆಯಲಿದೆ ಎಂದೆಲ್ಲಾ ಸುದ್ದಿಯಾಗಿತ್ತು.
ಇದೀಗ ಬಂದ ಮಾಹಿತಿಯ ಪ್ರಕಾರ ಗೋಲ್ಡನ್ ಸ್ಟಾರ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿದ್ದು, ಸ್ವತಃ ಗಣೇಶ್ ‘ಈ ಪಾತ್ರಕ್ಕೆ ದಿಗಂತನನ್ನು ಹಾಕಿಕೊಳ್ಳಿ. ಆತ ಕರೆಕ್ಟಾಗಿ ಹೊಂದುತ್ತಾನೆ’ ಎಂದಿದ್ದಾರಂತೆ. ಹೀಗಾಗಿ ಗಣೇಶ್ ಮಾಡಬೇಕಿದ್ದ ಪಾತ್ರ ದಿಗಂತ್ ಪಾಲಾಗಿದೆಯಂತೆ!
99 ಎನ್ನುವ ಸಿನಿಮಾದ ಭೀಕರ ಸೋಲೋ ಅಥವಾ ಬರಲಿರುವ ಗೀತಾ ಸಿನಿಮಾದ ಮೇಲಿನ ಅಪಾರವಾದ ನಿರೀಕ್ಷೆಯೋ ಗೊತ್ತಿಲ್ಲ, ಗಣೇಶ್ ಸಾಕಷ್ಟು ಸಿನಿಮಾಗಳನ್ನು ರಿಜೆಕ್ಟ್ ಮಾಡುತ್ತಿದ್ದಾರೆ. ಗಣೇಶ್ಗೆ ಡಿಜಿಟಲ್, ಡಬ್ಬಿಂಗ್, ಟೀವಿ ರೈಟ್ಸ್ ಸೇರಿದಂತೆ ನಿರ್ಮಾಪಕರನ್ನು ಸೇಫ್ ಮಾಡುವಷ್ಟು ಮಾರ್ಕೆಟ್ ಇದೆ. ಇದನ್ನೇ ಉದ್ದೇಶವನ್ನಾಗಿಸಿಕೊಂಡು ಯಾವ್ಯಾವುದೋ ಸಿನಿಮಾಗಳನ್ನು ಮಾಡಿಸಿ ಕೆಲವು ನಿರ್ಮಾಪಕರು ತಾವು ಕಾಸು ಮಾಡಿಕೊಂಡು ಗಣೇಶ್ ಇಮೇಜಿಗೆ ಡ್ಯಾಮೇಜ್ ಮಾಡಿರುವ ಪ್ರಕರಣಗಳು ಈಗಾಗಲೇ ಸಾಕಷ್ಟಾಗಿವೆ. ಈ ಕಾರಣಕ್ಕೋ ಏನೋ ಗಣೇಶ್ ಈಗ ಸಿಕ್ಕಾಪಟ್ಟೆ ಹುಷಾರಾಗಿಬಿಟ್ಟಿದ್ದಾರೆ. ದುಡ್ಡು ಕೊಡ್ತಾರೆ ಅಂತಾ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ನಟಿಸಿದರೆ ಅಭಿಮಾನಿಗಳು ನೊಂದುಕೊಳ್ಳುತ್ತಾರೆ ಅನ್ನೋದು ಗಣೇಶ್ ನಿಲುವಾಗಿರಲೂಬಹುದು. ಒಟ್ಟಿನಲ್ಲಿ ಅವಕಾಶಗಳಿಲ್ಲದೇ ಒದ್ದಾಡುತ್ತಿದ್ದ ದಿಗಂತ ಗಣೇಶ್ ಕಳಚಿಟ್ಟ ಕನ್ನಡಕವನ್ನು ತೊಡುವಂತಾಗಿರೋದು ಸಮಾಧಾನದ ವಿಚಾರ!
No Comment! Be the first one.