ಡಬ್ಬಿಂಗ್ ಮುಗಿಸಿಕೊಂಡ ಅಭಿಮನ್ಯು!

Picture of Cinibuzz

Cinibuzz

Bureau Report

ಭಾರತದಾದ್ಯಂತ ಸೆನ್ಸೇಷನ್ ಸೃಷ್ಟಿಸಲು ರೆಡಿಯಾಗಿರುವ ಪೌರಾಣಿಕ ಕನ್ನಡ ಚಿತ್ರ ಮುನಿರತ್ನ ಕುರುಕ್ಷೇತ್ರ. ಈಗಾಗಲೇ ಸಾಕಷ್ಟು ವಿಚಾರದಿಂದ ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿರುವ ಕುರುಕ್ಷೇತ್ರ ಮತ್ತೆ ಸುದ್ದಿಯಾಗಿದೆ. ಹೌದು.. ಟ್ರೇಲರ್ ನಲ್ಲಿ ಕಂಡು ಬಂದಂತೆ ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರ ಸ್ವಾಮಿ ಸ್ವತಃ ಡಬ್ ಮಾಡದೇ ಮತ್ತಾರದೋ ಧ್ವನಿಯನ್ನು ನೀಡಲಾಗಿತ್ತು. ನಿಖಿಲ್ ವೇಷಭೂಷಣಕ್ಕೂ ಆತನ ಧ್ವನಿಗೂ ಮ್ಯಾಚ್ ಆಗದೇ ಅದು ನಿಖಿಲ್ ಹ್ಞಾಂ.. ಅನ್ನಿಸುವ ಮಟ್ಟಿಗೆ ಕಾಣಿಸುತ್ತಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಯಾಗಿದ್ದಲ್ಲದೇ ರಾಜ್ಯ ರಾಜಕಾರಣ, ಲೋಕಸಭಾ ಚುನಾವಣೆಯ ಬಿಸಿಯಿಂದ ನಿಖಿಲ್ ಕುರುಕ್ಷೇತ್ರದಿಂದ ದೂರ ಉಳಿದಿದ್ದಾರೆ ಎಂಬ ಗಾಳಿ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಇತ್ತೀಚಿಗೆ ನಿಖಿಲ್ ಅವರೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡುವ ಮೂಲಕ ಎಲ್ಲ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.

ಡಬ್ಬಿಂಗ್ ಮಾಡಿದ ಬಳಿಕ ಮಾತನಾಡಿದ ನಿಖಿಲ್ ಕುಮಾರ ಸ್ವಾಮಿ, ರಾಜಕೀಯದ ಒತ್ತಡದಿಂದ ಡಬ್ಬಿಂಗ್ ಮಾಡಲು ತಡವಾಗಿತ್ತು. ನನಗೆ ಯಾರ ಮೇಲೆ ದ್ವೇಷ , ಸೇಡು ಇಲ್ಲ. ನಾನು ಸಿನಿಮಾವನ್ನು ಪ್ರೀತಿಸುತ್ತೇನೆ. ಅನಿವಾರ್ಯ ಕಾರಣಗಳಿಂದ ನಾನು ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಬರಲಾಗಲಿಲ್ಲ. ಇನ್ನು ಮುಂದೆ ಮಾಡುವ ಪ್ರಚಾರದಲ್ಲಿ ನಾನು ಕೈ ಜೋಡಿಸುತ್ತೇನೆ ಎಂದಿದ್ದಾರೆ.

ನಿರ್ದೇಶಕ ನಾಗಣ್ಣ ನಮ್ಮಿಂದ ಉತ್ತಮ ರೀತಿಯಲ್ಲಿ ಕೆಲಸ ತೆಗೆಸಿದ್ದಾರೆ ಹಾಗೂ ನಿರ್ಮಾಪಕ ಮುನಿರತ್ನ ಕೂಡ ಧೈರ್ಯ ಮಾಡಿ 2ಡಿ ಹಾಗೂ 3ಡಿಯಲ್ಲಿ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಎಲ್ಲಾ ಸಿನಿಪ್ರಿಯರು ಚಿತ್ರವನ್ನು ನೋಡಿ ಚಿತ್ರಣವನ್ನು ಬೆಳೆಸಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಕನ್ನಡದ ಮೊದಲ ಪೌರಾಣಿಕ 3D ಸಿನಿಮಾ ಮುನಿರತ್ನ ಕುರುಕ್ಷೇತ್ರ ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ.

ಇನ್ನಷ್ಟು ಓದಿರಿ

Scroll to Top