ಕನ್ನಡಕ್ಕೊಬ್ಬನೇ ದುರ್ಯೋಧನ ಅದು ದರ್ಶನ್: ರವಿ ಚಂದ್ರನ್

Picture of Cinibuzz

Cinibuzz

Bureau Report

ಕನ್ನಡದ ಬಹುತೇಕ ಪೌರಾಣಿಕ ಪಾತ್ರಗಳನ್ನು ನೆನಪಿಸಿಕೊಂಡರೆ ಥಟ್ಟನೆ ಕಣ್ಣಿಗೆ ಕಟ್ಟುವ ತಟ್ಟುವ ವ್ಯಕ್ತಿತ್ವವೆಂದರೆ ವರನಟ ಡಾ. ರಾಜ್ ಕುಮಾರ್. ಯಾವುದೇ ಜಾನರ್ ನ ಸಿನಿಮಾವಾಗಿರಲಿ, ಯಾವ ಪಾತ್ರವೇ ಆಗಿರಲಿ ತನ್ನನ್ನು ತೊಡಗಿಸಿಕೊಂಡು ಆ ಪಾತ್ರವೇ ನಾಚುವಂತೆ ಮಾಡುವ ಮಟ್ಟಿಗೆ ತನ್ನ ಅಭಿನಯವನ್ನು ತೋರುತ್ತಿದ್ದ ಡಾ. ರಾಜ್ ಕುಮಾರ್ ಹೆಸರಿಗೆ ತಕ್ಕಂತೆ ಕನ್ನಡದ ಮುತ್ತು. ಅವರು ಕನ್ನಡಿಗರನ್ನು ಅಗಲಿ ಬರೋಬ್ಬರಿ 13 ವರ್ಷಗಳಾದರೂ ಅವರಂತೆ ಪಾತ್ರಕ್ಕೆ ಒಗ್ಗಿಕೊಳ್ಳುವಂತಹ ವ್ಯಕ್ತಿತ್ವ ದೊರೆಯದೇ ಉಳಿಯುವಂತಾಗಿತ್ತು. ಆದರೆ ಕುರುಕ್ಷೇತ್ರ ಚಿತ್ರದ ಮೂಲಕ ನಾನಿದ್ದೇನೆ ಎಂಬ ಗಟ್ಟಿ ಧ್ವನಿಯಲ್ಲಿ ಅಜಾನುಬಾಹು ದೇಹವನ್ನು ಎದೆ ಸೆಟೆದುನಿಂತಿದೆ.

ಹೌದು.. ಡಾ. ರಾಜ್ ಕುಮಾರ್ ಅವರಂತೆ ಯಾವುದೇ ಪಾತ್ರವಾಗಲಿ, ಅವತಾರವಾಗಲಿ, ಜಾನರ್ ಆಗಲಿ ಮಾಡಬಲ್ಲೆ ಎಂದು ಈಗಾಗಲೇ ಸಾಬೀತು ಪಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರದ ಚಿತ್ರದ ಮೂಲಕ ಸಾಬೀತು ಪಡಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಕುರುಕ್ಷೇತ್ರದ ಟ್ರೇಲರ್ ನಲ್ಲಿ ದರ್ಶನ್ ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ ತಂದೆ ತೂಗುದೀಪ ಶ್ರೀನಿವಾಸ್ ಅವರ ಗತ್ತು, ಡಾ. ರಾಜ್ ಕುಮಾರ್ ಅವರಂತಹ ಗತ್ತು ಎಲ್ಲವೂ ಒಮ್ಮಿದೊಮ್ಮೆಲೆ ನೋಡುಗರಿಗೆ ಕಾಣಸಿಗುತ್ತದೆ. ಟ್ರೇಲರ್ ಗೆ ಈ ಟೈಪಾದರೆ ಇನ್ನು ಸಿನಿಮಾ ಹೇಳುವುದೇ ಬೇಕಿಲ್ಲ.

ಕುರುಕ್ಷೇತ್ರದ ಚಿತ್ರೀಕರಣದ ಸಮಯದಲ್ಲಿ ದುರ್ಯೋಧನನ ಪಾತ್ರವನ್ನುಮೆಚ್ಚಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ದರ್ಶನ್ ಅವರನ್ನು ಹಾಡಿ ಹೊಗಳಿದ್ದರಂತೆ. ಅಲ್ಲದೇ ಸೆಟ್‍ನಲ್ಲಿ ದರ್ಶನ್ ಅವರ ಅವತಾರ ನೋಡಿ ಲೋ.. ಮಗನೇ, ನಿನ್ನ ಬಿಟ್ಟರೆ ಇನ್ನೊಬ್ಬ ದುರ್ಯೋಧನ ಕರ್ನಾಟಕಕ್ಕೆ ಇಲ್ಲ ಎಂದಿದ್ದರಂತೆ.

ಐತಿಹಾಸಿಕ ಪಾತ್ರಗಳಿಗೆ ಅದರದ್ದೇಯಾದ ತೂಕವಿದೆ. ಅಂತಹದೊಂದು ನಿರೀಕ್ಷೆ ಕೂಡ ಜನರಲ್ಲಿರುತ್ತದೆ. ಅದನ್ನು ಮೀರಿಸುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡಿಗರು ದುರ್ಯೋಧನನನ್ನು ಇಲ್ಲಿವರೆಗೆ ನೋಡಿಲ್ಲ. ಇದೀಗ ದರ್ಶನ್ ಮುಖಾಂತರ ನೋಡಲಿದ್ದಾರೆ. ಇವರನ್ನು ನೋಡಿದ ಮೇಲೆ ಇನ್ನೊಂದು ಆಯ್ಕೆ ಕೂಡ ಜನರಿಗೆ ಕಾಣಿಸುವುದಿಲ್ಲ ಎಂದು ಚಾಲೆಂಜಿಂಗ್ ಸ್ಟಾರ್​ ಅವತಾರಕ್ಕೆ ಕ್ರೇಜಿಸ್ಟಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಎಲ್ಲ ಅಂದುಕೊಂಡಂತಾದರೆ ಕುರುಕ್ಷೇತ್ರ ಸಿನಿಮಾ ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗಲಿದ್ದು,  ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ‘ಕುರುಕ್ಷೇತ್ರ’ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ಇನ್ನಷ್ಟು ಓದಿರಿ

Scroll to Top