ಸಂಧಿಯ ಹೆಸರಿಟ್ಟುಕೊಂಡು ರೌಡಿಯ ಕಥೆ ಹೇಳಲು ಹೊರಟಿಸುವ ಹೊಸಬರ ತಂಡ ಸ್ಯಾಂಡಲ್ ವುಡ್ ಗೆ ಸವರ್ಣ ಧೀರ್ಘ ಸಂಧಿ ಮೂಲಕ ಎಂಟ್ರಿ ಪಡೆದಿದೆ. ಚಿತ್ರದ ಕಥೆಯಲ್ಲಿ ರೌಡಿ ನಾಯಕ ಅನಕ್ಷರಸ್ಥನಾಗಿದ್ದರೂ ಆತನಿಗೂ ಸಂಧಿಗೂ ಏನು ಸಂಬಂಧ ಎನ್ನುವುದು ಪ್ಲಸ್ ಪಾಯಿಂಟ್ ಆಗಿದ್ದು, ಅದಕ್ಕೆ ಚಿತ್ರತಂಡವೇ ಉತ್ತರಿಸಿದೆ. ‘ಈ ರೌಡಿ ವ್ಯಾಕರಣದಲ್ಲಿ ಪಂಟರ್ ಆಗಿರುತ್ತಾನೆ. ರೌಡಿ ವೃತ್ತಿಯ ಭಾಗವಾಗಿ ಎತ್ತಾಕಿಕೊಂಡು ಬಂದವರಲ್ಲಿ ವ್ಯಾಕರಣದ ಕುರಿತು ಪ್ರಶ್ನೆಗಳನ್ನು ಕೇಳುತ್ತಿರುತ್ತಾನೆ. ಸರಿಯಾಗಿ ಉತ್ತರ ಕೊಡದವರಿಗೆ ಒಂದಿಷ್ಟು ಒದೆಯುತ್ತಾನೆ’ ಎಂಬ ವಿವರಣೆ ನೀಡಿದ್ದಾರೆ ನಿರ್ದೇಶಕ ವೀರೇಂದ್ರ ಶೆಟ್ಟಿ.

‘ವ್ಯಾಕರಣದ ಹುಚ್ಚು ಹಿಡಿಸಿಕೊಂಡಿರುವ ರೌಡಿಯ ಹಾಸ್ಯಮಯ ಕಥೆ’ ಎನ್ನುವ ಟ್ಯಾಗ್ ಲೈನ್ ಹೊಂದಿರುವ ಈ ಸಿನಿಮಾ ಸಾಕಷ್ಟು ಕುತೂಹಲವನ್ನು ಹುಟ್ಟಿಸಿದೆ. ವಿಶೇಷವೆಂದರೆ ಈ ಮೊದಲು ತುಳು ಸಿನಿಮಾವನ್ನು ನಿರ್ದೇಶಿಸಿದ್ದ ವೀರೇಂದ್ರ ಶೆಟ್ಟಿ ಅವರಿಗಿದು ಎರಡನೆಯ ಚಿತ್ರವಾಗಿದೆ. ಜತೆಗೆ ಅವರೇ ಹೀರೋ ಕೂಡ. ಸವರ್ಣ ದೀರ್ಘ ಸಂಧಿಯಲ್ಲಿ ಒಟ್ಟು ಏಳು ಹಾಡುಗಳಿದ್ದು, ಮನೋ ಮೂರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವೀರೇಂದ್ರ ಶೆಟ್ಟಿಗೆ ನಾಯಕಿಯಾಗಿ ಕೃಷ್ಣಾ ಅಭಿನಯಿಸಿದ್ದು, ಅವರಿಗಿದು ಚೊಚ್ಚಲ ಸಿನಿಮಾ. ಅಪ್ಪನ ಮಾತಿನಂತೆ ಸಿನಿಮಾ ಒಪ್ಪಿಕೊಂಡ ಕೃಷ್ಣಾ ಅಮೃತ ವರ್ಷಿಣಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.












































