ದರ್ಶನ್ ಗೆ ಕುರುಕ್ಷೇತ್ರ ಮೈಲಿಗಲ್ಲಿನ ಸಿನಿಮಾ: ಸಂಸದೆ ಸುಮಲತಾ!

Picture of Cinibuzz

Cinibuzz

Bureau Report

ಒಂದೆಡೆ ದಕ್ಷಿಣ ಕರ್ನಾಟಕದ ಮಂದಿಗೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಮತ್ತೊಂದೆಡೆ ಉತ್ತರ ಭಾರತದ ಮಂದಿಗೆ ಜಲ ಸಮಾಧಿಯ ಭಯ. ಯಾವಾಗ ನಮ್ಮ ಹಳ್ಳಿಗೂ ನೀರು ನುಗ್ಗುವುದೋ ನೆರೆ ಪ್ರವಾಹದ ದಿಗಿಲು. ಇವೆಲ್ಲದರ ಮಧ್ಯೆ ವಿಶ್ವದಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾದ ಅಬ್ಬರದ ಬಿಡುಗಡೆ. ಸಿನಿಮಾ ನೋಡಿ ಹಬ್ಬ ಮಾಡಿ ಖುಷಿ ಪಡುವುದೋ ನಮ್ಮ ನೆರೆಯ ಜಿಲ್ಲೆಯವರ ದುಃಖಕ್ಕೆ ಕರ್ಚೀಪು ಕೊಡುವುದೋ!

ಈ ಮಧ್ಯೆಯೂ ಕುರುಕ್ಷೇತ್ರ  ಪೌರಾಣಿಕ ಸಿನಿಮಾ 2ಡಿ ಮತ್ತು 3ಡಿಯಲ್ಲಿ ಬಿಡುಗಡೆಯಾಗಿದ್ದು, ರಾಷ್ಟ್ರದಾದ್ಯಂತ ಕುರುಕ್ಷೇತ್ರ ಚಿತ್ರದ ಜ್ವರ ಬಂದಿದೆ ಅಂದರೂ ತಪ್ಪಿಲ್ಲ. ಅಷ್ಟರಮಟ್ಟಿಗೆ ಡಿ ಬಾಸ್ ಅಭಿಮಾನಿಗಳು, ಚಿತ್ರರಸಿಕರು ಬಹುತಾರಾಗಣದ ಕುರುಕ್ಷೇತ್ರಕ್ಕಾಗಿ ಸಾಕಷ್ಟು ದಿನಗಳಿಂದ ಕಾದು ಕುಳಿತಿದ್ದರು.

ನಿನ್ನೆ ಮಧ್ಯರಾತ್ರಿಯೇ ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಕುರುಕ್ಷೇತ್ರ ಚಿತ್ರದ ಪ್ರೀಮಿಯರ್ ಶೋವನ್ನು ಪ್ರದರ್ಶಿಸಲಾಗಿತ್ತು. ಸಿನಿತಾರೆಯರು ಹಾಗೂ ಚಿತ್ರತಂಡದ ಸದಸ್ಯರು ಸಿನಿಮಾವನ್ನು ಮಜಭೂತಾಗಿಯೇ ಎಂಜಾಯ್ ಮಾಡಿದ್ದಾರೆ. ನಟ ದರ್ಶನ್, ನಿರ್ಮಾಪಕ ಮುನಿರತ್ನ, ರಾಕ್ ಲೈನ್ ವೆಂಕಟೇಶ್, ಸುಮಲತಾ ಅಂಬರೀಶ್, ದೊಡ್ಡಣ್ಣ ಕುರುಕ್ಷೇತ್ರ ಸಿನಿಮಾವನ್ನು ತಡರಾತ್ರಿಯೇ ವೀಕ್ಷಣೆ ಮಾಡಿದ್ದಾರೆ.

ರಾತ್ರಿ 9:30 ಕ್ಕೆ ವಿಶೇಷ ಪ್ರದರ್ಶನ ಕಂಡ ಕುರುಕ್ಷೇತ್ರ ಸಿನಿಮಾವನ್ನು ಸ್ವತಃ ವೀಕ್ಷಿಸಿ ಮಾತನಾಡಿದ ಸುಮಲತಾ ಕುರುಕ್ಷೇತ್ರ ಸಿನಮಾ ಅನ್ನೋದು ಅನುಭವ ಮತ್ತು ಜರ್ನಿಯಿಂದ ಕೂಡಿರೋ ಫಿಲ್ಮ್. ದರ್ಶನ್ ಗೆ ಸಂಗೊಳ್ಳಿ ರಾಯಣ್ಣ ಆದಮೇಲೆ ಅಂತಹ ಮತ್ತೊಂದು ಮೈಲಿಗಲ್ಲಿನ ಸಿನಿಮಾವನ್ನು ಮಾಡಿದ್ದಾರೆ. ದುರ್ಯೋಧನನ ಪಾತ್ರಕ್ಕೆ ತಕ್ಕನಾಗಿ ದರ್ಶನ್ ನಟಿಸಿದ್ದಾರೆ. ಕರ್ನಾಟಕದ ಜನ 100 ವರ್ಷ ನೆನಪಿಸಿಕೊಳ್ಳೋ ಸಿನಿಮಾ” ಎಂದು ಕುರುಕ್ಷೇತ್ರವನ್ನು ಹೊಗಳಿ ಮಾತನಾಡಿದರು.

ಇನ್ನು ಚಿತ್ರ ವೀಕ್ಷಣೆಯ ಬಳಿಕ ದರ್ಶನ್ ಮಾತನಾಡಿ ಚಿತ್ರ ಇನ್ನೇನು ತೆರೆ ಕಾಣಲಿದೆ. ಎಲ್ಲರೂ ಸಿನಿಮಾ ನೋಡಿದಮೇಲೆ ನಾನು ಮಾತನಾಡುತ್ತೇನೆ ಅಂಬರೀಶ್ ಅಪ್ಪಾಜಿ ಜತೆ ಮೊದಲ ಮತ್ತು ಕೊನೆಯ ಚಿತ್ರದಲ್ಲಿ ನಟಿಸೋ ಭಾಗ್ಯ ನನಗೆ ಸಿಕ್ಕಿದೆ. ಮಹಾಭಾರತ ಎಲ್ಲರಿಗೂ ತಿಳಿಯಬೇಕು ಅಂದರೆ ಕುರುಕ್ಷೇತ್ರ ಸಿನಿಮಾ ನೋಡಿ ಎಂದು ದರ್ಶನ್ ಹೇಳಿದರು.

ಇನ್ನಷ್ಟು ಓದಿರಿ

Scroll to Top