ತಂದೆಯಿಂದ ಈಡೇರಿಸಲಾಗದ ಕನಸೊಂದನ್ನು ಪುಟ್ಟ ಮಗಳು ತನ್ನದಾಗಿಸಿಕೊಂಡು ನನಸು ಮಾಡುವ ಸೆಂಟಿಮೆಂಟ್ ಕಥೆಯೇ ನಾನು ನನ್ನ ಕನಸು. ಡಾಕ್ಟರ್ ಆಗುವತ್ತ ಅನು ಪಾತ್ರಧಾರಿ ಸಾಗುವ ಮಧ್ಯೆ ಅವಳು ಅನಿರೀಕ್ಷಿತ ಅನಾಹುತವೊಂದನ್ನು ಎದುರಿಸಬೇಕಾಗುತ್ತದೆ. ಅವಳ ಸಾಧನೆಗೆ ಅಡ್ಡಲಾಗಿ ವಿಲನ್ ಗಳು ಪ್ರತಿಯೊಂದು ಸನ್ನಿವೇಶಗಳಲ್ಲಿಯೂ ಸವಾಲುಗಳನ್ನು ಒಡ್ಡುತ್ತಾರೆ. ಆ ಎಲ್ಲ ಅಡೆತಡೆಗಳನ್ನು ಎದುರಿಸಿ ತನ್ನ ಕನಸನ್ನ ಹೇಗೆ ಸಾಕಾರಗೊಳಿಸಿಕೊಳ್ಳುತ್ತಾಳೆಯೇ ಎಂಬುದು ನಾನು ನನ್ನ ಕನಸು ಧಾರಾವಾಹಿಯ ಒಂದೆಳೆ.
https://www.facebook.com/UDAYATELEVISION/videos/2354961698053475/
ನಾನು ನನ್ನ ಕನಸು ಧಾರವಾಹಿ ಇದೇ ಆಗಸ್ಟ್ 5ರ ಸೋಮವಾರದಿಂದ ಉದಯದ ಟಿವಿಯಲ್ಲಿ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುತ್ತಿದೆ. ಕಿರುತೆರೆಯಲ್ಲಿಯೇ ಫೇಮಸ್ ಆಗಿರುವ ಪುಟಾಣಿ ಶೃತಾ ಅನು ಪಾತ್ರ ನಿರ್ವಹಿಸುತ್ತಿದ್ದರೆ, ಕನಸನ್ನು ಬಿತ್ತಿದ ತಂದೆಯ ಪಾತ್ರದಲ್ಲಿ ನಟ ರಾಜೇಶ್ ನಟರಂಗ ಇದ್ದಾರೆ. ಅನುವಿನ ತಾಯಿಯಾಗಿ ಆರತಿ ಕುಲಕರ್ಣಿ, ವಿಲನ್ ಪಾತ್ರದಲ್ಲಿ ನಿಶಿತಾ ಗೌಡ ನಟಿಸುತ್ತಿದ್ದಾರೆ. ಉಳಿದಂತೆ ವಿಶಾಲ್ ರಘು, ಹರೀಶ್, ಬಾಲನಟರಾಗಿ ಸ್ಕಂದ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ನಾನು ನನ್ನ ಕನಸು ಧಾರವಾಹಿಯ ಮೂಲಕ ಪ್ರಿಯಾಂಕ ಉಪೇಂದ್ರ ಕಿರುತೆರೆಗೆ ಕಾಲಿಟ್ಟಿದ್ದು, ಪ್ರೋಮೋಗಳಲ್ಲಿ ಕಾಣಿಸಿಕೊಳ್ಳುವ ಜತೆಗೆ ಧಾರವಾಹಿಯ ಪ್ರಮುಖ ಘಟ್ಟಗಳನ್ನು ನರೇಟ್ ಮಾಡಲಿದ್ದಾರೆ. ಇನ್ನು ಈ ಧಾರಾವಾಹಿಯನ್ನು ಛಾಯಾಗ್ರಾಹಕ ಮತ್ತು ನಿರ್ದೇಶಕ ಬಿ. ಕುಮಾರ್ ನಿರ್ದೇಶನ ಮಾಡುತ್ತಿದ್ದು, ಹಿಂದಿ ಟೆಲಿವಿಷನ್ ನ ಶಶಿ ಸುಮೀತ್ ಗ್ರೂಪ್ ನಿರ್ಮಾಣ ಮಾಡುತ್ತಿದೆ. ಉಳಿದಂತೆ ಶ್ರೀಕಾಂತ್ ಸಂಭಾಷಣೆ, ಡಾ. ವಿ. ನಾಗೇಂದ್ರ ಪ್ರಸಾದ್ ಗೀತಸಾಹಿತ್ಯ, ಶ್ರೀಧರ್ ಸಂಭ್ರಮ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.
ವಿಶೇಷವೆಂದರೆ ಈ ಧಾರವಾಹಿಯ ಮೂಲಕ ಉದಯ ಟಿವಿ ಚಿನ್ನದ ಕಾಂಟೆಸ್ಟ್ ಕೂಡ ಆಯೋಜಿಸಿದ್ದು ಪ್ರತಿದಿನ ಎಪಿಸೋಡುಗಳನ್ನು ನೋಡಿ ವಾಹಿನಿ ಕೇಳುವ ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಚಿನ್ನವನ್ನು ಗೆಲ್ಲುವ ಅವಕಾಶವನ್ನು ಒದಗಿಸಿದೆ.
No Comment! Be the first one.