ಉತ್ತರ ಕರ್ನಾಟಕದ ಮಳೆ ಪ್ರವಾಹದ ಕುರಿತಾಗಿ ವಿವರವಾಗಿ ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಕಳೆದ 10-15 ದಿನಗಳಿಂದ ಉತ್ತರ ಕರ್ನಾಟಕದ ಅಂದಾಜು 80 ತಾಲ್ಲೂಕುಗಳು ವರುಣನ ಕೆಂಗಣ್ಣಿಗೆ ತುತ್ತಾಗಿವೆ. ಜತೆಗೆ ಅಲ್ಲಿನ ನಿವಾಸಿಗಳು ಮನೆ ಮಠವಿಲ್ಲದೇ ಜತೆಗೆ ತಿನ್ನಲು ಆಹಾರವಿಲ್ಲದೇ ಎಲ್ಲವೂ ಇದ್ದು ಏನೂ ಇಲ್ಲದವರಂತೆ ಪರದಾಡುವಂತಾಗಿದೆ. ಈ ಮಧ್ಯೆ ಅವರಿಗೆ ಕೈ ಹಿಡಿಯುವ ಕೈ ಅವಶ್ಯವಿದ್ದು, ಕರ್ನಾಟಕ ಜನತೆ ಉತ್ತರ ಕರ್ನಾಟಕದ ಮಂದಿಯ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ.

ತಮ್ಮ ಕೈಲಾದ ಸಹಾಯವನ್ನು ಬಿಟ್ಟು ಬಿಡದೇ ಮಾಡುತ್ತಿದ್ದಾರೆ. ಬಾಲಿವುಡ್ ಸಿನಿಮಾ ತಾರೆಯರು ಉತ್ತರ ಕರ್ನಾಟಕದ ಸ್ಥಿತಿಗೆ ಮರುಕಪಟ್ಟು ಲಕ್ಷಾಂತರ ರುಪಾಯಿ ಅನುದಾನವನ್ನು ನೀಡಿ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನ ಮಂದಿಯೂ ಯಾವುದಕ್ಕೂ ಕಮ್ಮಿ ಇಲ್ಲದಂತೆ ಕೊಟ್ಯಾಂತರ ರುಪಾಯಿ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವುದಲ್ಲದೇ ನೆರೆ ಸಂತ್ರಸ್ಥರಿಗೆ ಅಗತ್ಯವಿರುವ ಮೂಲಭೂತ ಅವಶ್ಯಕತೆಗಳಾದ ಬಟ್ಟೆ, ಆಹಾರ ಇತ್ಯಾದಿ ಸಾಮಾನುಗಳನ್ನು ಕಳುಹಿಸುತ್ತಲೇ ಇದ್ದಾರೆ. ಈ ಮಧ್ಯೆ ಇದೇ ಆಗಸ್ಟ್ 23ರಂದು ಬಿಡುಗಡೆಗೆ ರೆಡಿಯಾಗಿರುವ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಟಿಸಿರುವ ರಾಂಧವ ಚಿತ್ರತಂಡವೂ ಕೂಡ ತಮ್ಮ ಕೈಲಾದ ಸಾಮಾಗ್ರಿಗಳನ್ನು ನೆರೆ ಸಂತ್ರಸ್ಥರಿಗೆ ನೀಡಿದ್ದಲ್ಲದೇ ಸ್ವತಃ ಚಿತ್ರ ತಂಡವೇ ಪರಿಕರಗಳನ್ನು ಸಿದ್ಧಪಡಿಸಿ, ಪ್ಯಾಕ್ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೇ ಅಗತ್ಯ ಬಿದ್ದರೆ ಮತ್ತಷ್ಟು ಸಾಮಗ್ರಿಗಳನ್ನು ಕಳುಹಿಸಿಕೊಡುವುದಾಗಿಯೂ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಸುಕೃತಿ ಚಿತ್ರಾಲಯ ಬ್ಯಾನರ್ ನಲ್ಲಿ ಮೂಡಿಬಂದಿರುವ ರಾಂಧವ ಚಿತ್ರವನ್ನು ಸುನೀಲ್ ಆಚಾರ್ಯ ನಿರ್ದೇಶನ ಮಾಡಿದ್ದು, ಇದೇ ಆಗಸ್ಟ್ 23ರಂದು ರಾಂಧವ ಚಿತ್ರ ಬಿಡುಗಡೆಯಾಗಲಿದೆ.












































