‘ಈ ಕಾಮಿಡಿ ಆಕ್ಟರುಗಳನ್ನು ಮೇಂಟೇನು ಮಾಡೋದು ಭಾಳಾ ಕಷ್ಟ ಕಣ್ರೀ… ನಾಲ್ಕು ಜನ ಸ್ಟಾರ್ ಹೀರೋಗಳ ಜೊಗೆ ಛಾನ್ಸು ಸಿಗುತ್ತಿದ್ದಂತೇ ಕುತ್ತಿಗೆ ಮೇಲೆ ತಲೇನೇ ನಿಲ್ಲೋದಿಲ್ಲ…’ – ಇದು ಬಹಳಷ್ಟು ವರ್ಷಗಳಿಗೆ ಹಾಸ್ಯ ಪಾತ್ರಗಳನ್ನು ನಿಭಾಯಿಸುವ ಪೋಷಕ ಕಲಾವಿದರ ಮೇಲಿನ ಆರೋಪ. ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಹಾಸ್ಯ ಕಲಾವಿದರ ಕೊರತೆ ಇದ್ದೇ ಇತ್ತು. ಆದರೆ ‘ಉದಯ ಟೀವಿ’ಯ ಕುರಿ ಬಾಂಡ್ ಮತ್ತು ಜ಼ೀ ಟೀವಿಯಲ್ಲಿ ‘ಕಾಮಿಡಿ ಕಿಲಾಡಿಗಳು’ ಅನ್ನೋ ಶೋಗಳು ಆ ಕೊರತೆಯನ್ನು ನೀಗಿಸಿದವು. ಕುರಿ ಕಾರ್ಯಕ್ರಮದಿಂದ ಸ್ಮೈಲ್ ಸಾಗರ್, ಕುರಿ ರಂಗ, ಕುರಿ ಪ್ರತಾಪ, ಕುರಿ ಸುನೀಲ, ಕುರಿ ಪ್ರಕಾಶರಂಥಾ ನಟರು ಸಿನಿಮಾರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಇನ್ನು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಿಂದ ಏನಿಲ್ಲವೆಂದರೂ ಒಂದು ಡಜನ್ ನಟರು ಸಿನಿಮಾಗಳಲ್ಲಿ ಗುರುತಿಸಿಕೊಳ್ಳುವಂತಾಯಿತು. ಜಿಜಿ-ಗೋವಿಂದೇಗೌಡ, ದಿವ್ಯಾ, ನಯನಾ, ಮಡೆನೂರು ಮನು, ಲೋಕೇಶ್, ಹಿತೇಶ್, ಸಂಜು ಬಸಯ್ಯ ಸೇರಿದಂತೆ ಸಾಕಷ್ಟು ಜನರೀಗ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ.

ಇವೆಲ್ಲದರ ಸೈಡ್ ಎಫೆಕ್ಟ್ ಎನ್ನುವಂತೆ ಕಾಮಿ ನಟ ಚಿಕ್ಕಣ್ಣನಿಗೆ ಇತ್ತೀಚೆಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಚಿಕ್ಕಣ್ಣನನ್ನು ಮೇಂಟೇನ್ ಮಾಡಕ್ಕಾಗಲ್ಲ, ದಿನಕ್ಕೆ ಇಷ್ಟು ಕೇಳ್ತಾನೆ ಎನ್ನುವ ಆರೋಪಗಳ ಮಧ್ಯೆ ನೋಡುಗರಿಗೂ ಚಿಕ್ಕಣ್ಣನ ಫೇಸು ಬೋರು ಹೊಡೆಸಿದೆ. ಕಲಸಿಟ್ಟುಕೊಂಡ ಮುಖದ ಅದೇ ನಟನೆಯನ್ನು ಜನ ತಾನೆ ಎಷ್ಟೂಂತ ನೋಡಲು ಸಾಧ್ಯ? ಚಿಕ್ಕಣ್ಣನ ಒಂದೇ ಥರದ ನಟನೆಯಿಂದ ಬೇಸರಗೊಂಡಿದ್ದವರೆಲ್ಲಾ ಈಗ ಆತನ ಜಾಗಕ್ಕೆ ಶಿವರಾಜ್ ಕೆ.ಆರ್.ಪೇಟೆಯನ್ನು ತಂದು ಕೂರಿಸುತ್ತಿದ್ದಾರೆ.
ಅಧ್ಯಕ್ಷ ಇನ್ ಅಮೆರಿಕ ಸಿನಿಮಾದಲ್ಲಿ ಕೂಡಾ ಚಿಕ್ಕಣ್ಣ ಮಾಡಬೇಕಿದ್ದ ಪಾರ್ಟು ಕೆ.ಆರ್.ಪೇಟೆ ಪಾಲಾಗಿದೆಯಂತೆ. ಹಿಂದೆಲ್ಲಾ ಶರಣ್, ಕೋಮಲ್ ಥರದ ನಟರು ಹಾಸ್ಯಪಾತ್ರಗಳು ಸಾಕು ಎನಿಸಿದಾಗ ಹೀರೋಗಳಾಗುವ ಸರ್ಕಸ್ಸು ಮಾಡಿದರು ಮತ್ತು ತಮಗೊಪ್ಪುವ ಸಬ್ಜೆಕ್ಟುಗಳನ್ನು ಆಯ್ಕೆ ಮಾಡಿಕೊಂಡಾಗೆಲ್ಲಾ ಗೆದ್ದರು ಕೂಡಾ. ಆದರೆ ಚಿಕ್ಕಣ್ಣ ತೀರಾ ಹೀರೋ ಆಗುವ ಎಲಿಮೆಂಟಲ್ಲ. ಶರಣ್, ಕೋಮಲ್, ಸಾಧು ಕೋಕಿಲಾರಷ್ಟು ಪ್ರತಿಭಾವಂತನೂ ಅಲ್ಲ. ಮಿತಿಗಳ ನಡುವೆ ಅವಕಾಶ ಪಡೆಯುತ್ತಿದ್ದ ಚಿಕ್ಕಣ್ಣನ ತಲೆಗೆ ಸ್ಟಾರ್ ಗಿರಿ ತಗುಲಿಕೊಂಡಿದ್ದು ದೊಡ್ಡ ದುರಂತ!

ಈಗಾಗಲೇ ಕನ್ನಡದ ಅಷ್ಟೂ ಜನ ಹೀರೋಗಳ ಜೊತೆ ಎರಡೆರಡು ರೌಂಡು ನಟಿಸಿರುವ ಚಿಕ್ಕಣ್ಣನಿಗೆ ಸದ್ಯ ಕಾಮಿಡಿ ಕಿಲಾಡಿಗಳೇ ವಿಲನ್ನುಗಳಂತೆ ಕಂಡರೂ ಆಶ್ವರ್ಯವಿಲ್ಲ.











































