ದಲಿತ ಕವಿ ಸಿದ್ಧಲಿಂಗಯ್ಯನವರ ಯಾರಿಗೆ ಬಂತು? ಎಲ್ಲಿಗೆ ಬಂತು? 47ರ ಸ್ವಾತಂತ್ರ್ಯ ಎಂಬ ಪದ್ಯವಂತು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ ನೆನಪಿಗೆ ಬಾರದೆ ಇರಲಿಕ್ಕಿಲ್ಲ. ಹೇಳಿಕೊಳ್ಳಲು ನಮಗೆ ಸ್ವಾತಂತ್ರ್ಯ ಬಂದು 73ರ ಸಂಭ್ರಮ.!
https://www.facebook.com/anilallollii/videos/2709722902389347/
ಅರೇ.. ಸಂಭ್ರಮವೇ… ಯಾವ ರೀತಿ… ರಾಷ್ಟ್ರವನ್ನು ಪೂರಾ ದೋಚಿ, ಮತ್ತೆ ದೋಚಲು ಏನು ಸಿಗದ ಬಡಕಲು ಭಾರತವನ್ನು ಬಿಟ್ಟು ಹೋದ ದಿನವೆಂಬ ಸಂಭ್ರಮವೇ… ಒಳ ಕುತಂತ್ರಿಗಳ ಮಸಲತ್ತಿನಿಂದ ಸಹೋದರರಂತಿದ್ದ ಪಾಕಿಸ್ತಾನವನ್ನು ಕಳೆದುಕೊಂಡೆವಲ್ಲವೆಂಬ ಸಂಭ್ರಮವೇ… ಮಹಾತ್ಮರೆಂದೆನಿಸಿಕೊಂಡ ಗಾಂಧೀಜಿಯ ಕನಸು ನನಸಾದರೂ ಬಲವಿಲ್ಲದಂತಾಯ್ತಲ್ಲ ಎಂಬ ಸಂಭ್ರಮವೇ… ಭಾರತದ ಪ್ರತಿಯೊಬ್ಬನೂ ಪಡೆದಿರುವ ಆದರೆ ಅನುಭವಿಸಲು ಹೆಣಗಾಡುತ್ತಿರುವ ಆರ್ಟಿಫಿಷಿಯಲ್ ಸ್ವಾತಂತ್ರ್ಯವನ್ನು ಗಳಿಸಿದ್ದೇವೆಂಬ ಸಂಭ್ರಮವೇ… ಯಾವ ಸಂಭ್ರಮಕ್ಕೆ ನಾವು ಸ್ವಾತಂತ್ರ್ಯ ದಿನವೆಂದು ಆಚರಿಸಿ ಸ್ವೀಟು ತಿಂದು ಮತ್ತೆ ನಮ್ಮ ದಿನನಿತ್ಯ ವಿಕೃತಿಯಲ್ಲಿ ಮುಂದುವರೆಯಬೇಕೋ …

ಅರಿವಿದ್ದೂ ಇಲ್ಲದಂತೆ ರಾಜಕಾರಣಿಗಳ ಕಪಿಮುಷ್ಠಿಯಲ್ಲಿ ಗುಲಾಮಗಿರಿಯನ್ನು ಅನುಭವಿಸುತ್ತಿರುವ ನಾವು ನಿಜವಾದ ಸ್ವಾತಂತ್ರ್ಯವನ್ನು ಗಳಿಸಿದ್ದೇವೆಯೇ .. ಅರೇ ಇಲ್ಲ.. ನಾವು ಸ್ವಾತಂತ್ರ್ಯವನ್ನು ಗಳಿಸಿದ್ದೇವೆ ಎಂದು ಒಕ್ಕೊರಲಿನಿಂದ ಕೂಗಿ ಹೇಳಿದರೂ ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ನಾವು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿದ್ದೇವೆ.. ಬಳಸಿಕೊಂಡರೂ ಯಾರ ಒಳಿತಿಗಾಗಿ… ಯಾರ ಉದ್ಧಾರಕ್ಕಾಗಿ… ಯಾರ ಅಭ್ಯುದಯಕ್ಕಾಗಿ… ಯೋಚಿಸಬೇಕಾದ ಸಂಗತಿಗಳಾದರೂ ಉತ್ತರಿಸಬಹುದಾದ ಸಹೃದಯಿ ಕೊರತೆಯಂತು ನೀಗಿಸದಂತಾಗಿದೆ.

ಸ್ವಾತಂತ್ರ್ಯವಂತೆ ಸ್ವಾತಂತ್ರ್ಯ ಮಹಾತ್ಮರೆಂದೆನಿಸಿಕೊಂಡ ಗಾಂಧಿ ಯಾವ ಹೆಣ್ಣು ಮಗಳು 12 ಗಂಟೆಯ ರಾತ್ರಿ ಒಬ್ಬಳೇ ನಿರ್ಭಯದಿಂದ ಓಡಾಡುತ್ತಾಳೋ ಅಂದೇ ನಮಗೆ ಸ್ವಾತಂತ್ರ್ಯ ಸಿಕ್ಕಿದಂತೆ ಎನ್ನುತ್ತಿದ್ದರಂತೆ. ವಾಸ್ತವದಲ್ಲಿ ಅಂತಹ ಸ್ವಾತಂತ್ರ್ಯ ಲಭ್ಯವಿರುವುದೇ. ಪ್ರತಿಯೊಬ್ಬ ನಿದ್ರೆಗಣ್ಣಿನಲ್ಲಿರುವ ಮನುಷ್ಯ ಪ್ರಾಣಿ ತನ್ನನ್ನು ತಟ್ಟಿ ಕೇಳಿಕೊಳ್ಳಬೇಕಾದ ಯಕ್ಷ ಪ್ರಶ್ನೆಯಿದು.

ರಾತ್ರಿ 12 ಗಂಟೆಗಂತೆ… ಎಲ್ಲರೂ ಸತ್ತವರಂತೆ ಎದ್ದು ದಿನನಿತ್ಯದ ಕರ್ಮಗಳಲ್ಲಿ ನಿರತರಾಗಿರುವಾಗ ಹೆಣ್ಣೊಬ್ಬಳು ಧೈರ್ಯದಿಂದ ಓಡಾಡುವ ಪರಿಸ್ಥಿತಿ ಭಾರತದಲ್ಲಿ ಇಲ್ಲ… ಭಾರತ ಹೆಣ್ಣಿಗೆ ದೈವೀ ಸ್ವರೂಪವನ್ನು ನೀಡಿದೆ ಎಂಬುದು ಪುರಾಣಗಳಿಗೆ ಮಾತ್ರ ಸೀಮಿತ. ಅಗತ್ಯ ಬಂದಾಗ ದೇವರಂತೆ, ತಾಯಿಯಂತೆ, ಮಗಳಂತೆ, ಅಕ್ಕನಂತೆ, ತಂಗಿಯಂತೆ ಇನ್ನೂ ಅಗತ್ಯ ಬಂದಾಗ ಸೂಳೆಯಂತೆ, ಕಾಮದ ವಸ್ತುವಂತೆ, ಮಾಂಸದ ಮುದ್ಧೆಯಂತೆ, ತೆವಲು ನೀಗಿಸುವ ಯಂತ್ರದಂತೆ ಬಿಂಬಿಸುವ ಅಯೋಗ್ಯರಿಗೆ ಮನ್ನಣೆ ನೀಡಿದ ಭಾರತದಲ್ಲಿ ನಾವಿದ್ದೇವೆ.

ನಮಗೆ ಸ್ವಾತಂತ್ರ್ಯ ಬಂದು 73 ವರ್ಷವಾಗಿದೆ. ಬಾವುಟ ಹಾರಿಸಿ, ಸ್ವೀಟು ತಿಂದು ಪುನಃ ಅದೇ ವಿಕೃತಿಯಲ್ಲಿ ಚೆನ್ನಾಗಿ ಬದುಕೋಣ ಅಲ್ಲವೇ… ಬೋಲೋ ಭಾರತ್ ಮತಾಕಿ…. ವಂದೇ… ಮಾತರಂ… ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ಫೇಸ್ಬುಕ್, ವಾಟ್ಸ್ಅಪ್, ಇನ್ಸ್ ಸ್ಟಾ ಗ್ರಾಂ ಡಿಪಿ ಬದಲಾದರೆ ಏನು ಪ್ರಯೋಜನವಿಲ್ಲ… ನಾಚಿಕೆಯಾಗಬೇಕು ಅಂತಹ ಅನಾಗರೀಕರಿಗೆ…
– ಸಚಿನ್ ಕೃಷ್ಣ











































