ಭಾರತದಾದ್ಯಂತ ಸಂಚಲನವನ್ನುಂಟು ಮಾಡಿ ದಾಖಲೆಗಳ ಸರಮಾಲೆಯನ್ನೇ ಸೃಷ್ಟಿಸಿದ್ದ ಕೆಜಿಎಫ್ ತನ್ನ ಮೊದಲನೇ ಚಾಪ್ಟರ್ ಯಶಸ್ಸಿನ ನಂತರ ಸದ್ಯ ಎರಡನೇ ಚಾಪ್ಟರ್ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದೆ. ಈ ನಡುವೆ ಚಿತ್ರದ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ರಘು ಕೊಲೆ ಆರೋಪದ ಮೇಲೆ ಜೈಲು ಪಾಲಾಗಿದ್ದಾರೆ.

ಕೊಲೆಯಾದ ಶಿಕ್ಷಕ ರಂಗಸ್ವಾಮಿ ನಗರದ ಸಿದ್ದಾರ್ಥ ನಗರದ ನಿವಾಸಿಯಾಗಿದ್ದು, ಕೋಳಿ ಪಾಳ್ಯದ ಶಾಲೆಯಲ್ಲಿ ಸಿಆರ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈತ ಆರೋಪಿ ಮತ್ತು ರಘುವಿನ ಗೆಳತಿ ಬಸವರಾಜೇಶ್ವರಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ. ಅಲ್ಲದೆ ಆಕೆಯ ಅಶ್ಲೀಲ ಫೋಟೊ ತೆಗೆದು, ತನ್ನ ಜತೆ ಸಹಕರಿಸದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ತನಿಖೆ ವೇಳೆ ಆರೋಪಿ ಬಸವ ರಾಜೇಶ್ವರಿ ಹೇಳಿಕೆ ನೀಡಿದ್ದಾಳೆ. ಆರೋಪಿಗಳು ಕೊಟ್ಟಿರುವ ಹೇಳಿಕೆ ಆಧಾರದ ಮೇಲೆ ರಘು ಮತ್ತು ಆತನ ಗೆಳತಿ ಹಾಗೂ ಮತ್ತೋರ್ವ ಸ್ನೇಹಿತನನ್ನೂ ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ರಘು ಈ ಮೊದಲು ಬೇರೆ ಚಿತ್ರಗಳಲ್ಲೂ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. ಯಾವುದೇ ಅಪಶಕುನವಿಲ್ಲದೇ ಸರಾಗವಾಗಿ ಸಾಗುತ್ತಿರುವಾಗಲೇ ಹೀಗೊಂದು ಅಹಿತಕರ ಘಟನೆ ನಡೆದಿರುವುದು ಚಿತ್ರತಂಡಕ್ಕೆ ಬೇಸರದ ಸಂಗತಿಯಾಗಿದೆ.











































