ರೋಚಕವಾಗಿ ಹುಟ್ಟಿದ ಉಡುಂಬಾ!

Picture of Cinibuzz

Cinibuzz

Bureau Report

ತೆಲುಗಿನ ಸಿನಿಮಾದ ಚಿತ್ರೀಕರಣಕ್ಕಾಗಿ ಒಡಿಸ್ಸಾಗೆ ಹೋಗಿದ್ದ ಶಿವರಾಜ್ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ತನ್ನ ಸ್ನೇಹಿತರೊಂದಿಗೆ ಸಮುದ್ರದ ಕಿನಾರೆಯಲ್ಲಿ ವಿಹಾರ ನಡೆಸುವಾಗ ಅಲ್ಲಿನ ವಾತಾವರಣವೇ ನೂರೆಂಟು ಕಥೆಗಳನ್ನು ಹೇಳುತ್ತಿರುವಂತೆ ಫೀಲ್ ಆಗುತ್ತಿತ್ತಂತೆ.

ಬೆಸ್ತರ ಗುಡಿಸಲು, ಅದರ ಹಿಂದೆಯೇ ರೊಚ್ಚಿಗೆದ್ದರೆ ನುಂಗಿಬಿಡುತ್ತೇನೆ ಎನ್ನುವ ರೌದ್ರತೆಯಲ್ಲಿರುವ ಬೃಹತ್ತಾದ ಸಮುದ್ರ, ಹಿಡಿದು ತಂದ ಮೀನುಗಳನ್ನು ಗುಡಿಸಲುಗಳ ಮುಂದೆ ನೇತು ಹಾಕಿದ್ದ ರೀತಿ, ಮೀನು ಮಾರುತ್ತಾ ಬದುಕು ಸಾಗಿಸುವ ಬೆಸ್ತರ ಕುಟುಂಬ, ವಾರಗಟ್ಟಲೇ ಸಮುದ್ರದಲ್ಲಿದ್ದು, ಬಲೆ ಹಾಕಿ ತಂದ ಮೀನನ್ನು ಪಡೆದುಕೊಳ್ಳಲು ನಿಂತ ಒಬ್ಬ ಯಜಮಾನ, ಮೀನಿನ ವ್ಯಾಪಾರಕ್ಕೊಂದು ಮಾರುಕಟ್ಟೆ… ಹೀಗೆ ಪ್ರತಿಯೊಂದು ಸಂಗತಿಗಳು ಮನಸಿನಲ್ಲಿ ಮೂಡಲು ಪ್ರಾರಂಭವಾಯಿತಂತೆ. ಅದರ ಪ್ರತಿಫಲವೇ ಉಡುಂಬಾ. ಹೌದು.. ಇದೇ ಆಗಸ್ಟ್ 23ರಂದು ಬಿಡುಗಡೆಗೆ ರೆಡಿಯಾಗಿರುವ ಶ್ರೀ ಚಂದ್ರ ಪ್ರೊಡಕ್ಷನ್ಸ್‌ನಡಿ ನಿರ್ಮಿಸಿರುವ, ಶಿವರಾಜ್ ನಿರ್ದೇಶನದ ಉಡುಂಬಾ ಹುಟ್ಟಿದ್ದೇ ಹೀಗಂತೆ…

ಇಂತಹ ಪರಿಸರದಲ್ಲಿ ಹುಂಬ ಹುಡುಗನೊಬ್ಬ ಇದ್ದರೆ ಹೇಗೆ? ಅವನ ಮನಸ್ಸಿನಲ್ಲೂ ಪ್ರೀತಿ ಚಿಗುರೊಡೆದರೆ ಏನಾಗಬಹುದು? ಬಯಸಿದ್ದನ್ನು ಪಡೆಯಲು ಈ ಹುಂಬ ಹುಡುಗ ಶಕ್ತಿಶಾಲಿ ಉಡದ ಅವತಾರವೆತ್ತಿ ಬರಬಹುದಲ್ಲವಾ? ಎಂಬೆಲ್ಲಾ ಕಲ್ಪನೆಗಳು ತೆರೆ ಮೇಲೆ ಬಂದರೆ ಹೇಗಿರಬಹುದು? ಈವರೆಗೂ ಇಷ್ಟು ಆಳವಾಗಿ ಯಾರೂ ಮುಟ್ಟದ ಕಥಾವಸ್ತುವೊಂದನ್ನು ಸಿದ್ಧಪಡಿಸಿರುವ ಖುಷಿಯಲ್ಲಿ ಹಾಗೂ ಅದನ್ನು ಮುಕ್ತಮನಸ್ಸಿನಿಂದ ಸ್ವೀಕರಿಸುತ್ತಾರೆಂಬ ಭರವಸೆಯಲ್ಲಿ ನಿರ್ದೇಶಕ ಶಿವರಾಜ್ ಇದ್ದಾರೆ.

ಇನ್ನಷ್ಟು ಓದಿರಿ

Scroll to Top