ಸ್ಯಾಂಡಲ್ ವುಡ್ ನಲ್ಲಿ ಲವ್ ಸ್ಟೋರಿ ಸಿನಿಮಾಗಳಿಗೇನು ಬರವಿಲ್ಲ. ಇಲ್ಲಿವರೆವಿಗೂ ಸಾವಿರಾರು ಸಿನಿಮಾಗಳು ಬರುತ್ತವೆ. ಹೋಗುತ್ತವೆ. ಕಥೆ ಸ್ಟ್ರಾಂಗಾಗಿದ್ದರೆ ಜನ ಸಾಮಾನ್ಯವನ್ನು ಹೃದಯವನ್ನು ಮುಟ್ಟುತ್ತವೆ. ಸದ್ಯ ಪ್ರಸ್ತುತ ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನು ನಿದರ್ಶನವಾಗಿಟ್ಟುಕೊಂಡು, ಪ್ರೀತಿ ಮಾಡಿದರೆ ಒಳ್ಳೆಯದಾಗುತ್ತಾ, ಕೆಟ್ಟದಾಗುತ್ತಾ? ಎನ್ನುವ ಸಂದೇಶದೊಂದಿಗೆ ಮರೆಯದೆ ಕ್ಷಮಿಸು ಸಿನಿಮಾ ಸೆಟ್ಟೇರಿದೆ. ಇತ್ತೀಚಿಗಷ್ಟೇ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮರೆಯದೆ ಕ್ಷಮಿಸು ಸಿನಿಮಾದ ಮುಹೂರ್ತ ನಡೆದಿದ್ದು, ಚಿತ್ರದ ಮೊದಲ ದೃಶ್ಯದ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು. ಚಿತ್ರದ ಶೀರ್ಷಿಕೆಗೆ ತಕ್ಕಂತೆ ‘ನೆನಪಾದರೆ’ ಎನ್ನುವ ಅಡಿಬರಹ ಸಹ ನೀಡಲಾಗಿದೆ. ಮರೆಯದೇ ಕ್ಷಮಿಸು ಎಂದು ಕೇಳಿಕೊಳ್ಳುವುದು ಪ್ರೇಮಿಗಳೋ ಅಥವಾ ಹೆತ್ತವರಿಗೆ ಮಕ್ಕಳು ಹೇಳುವುದೋ ಎನ್ನುವುದು ಸದ್ಯದ ಕೌತುಕ.

ಇನ್ನು ಕೆ. ರಾಘವ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಪ್ರೀತಿ ಎಂದರೆ ಹುಡುಗ- ಹುಡುಗಿಯರ ನಡುವಿನ ಪ್ರೀತಿ ಮಾತ್ರವಲ್ಲ. ಪೋಷಕರು ಮಕ್ಕಳನ್ನು ಪ್ರೀತಿಸಬೇಕು, ಮಕ್ಕಳಾದವರು ತಂದೆ-ತಾಯಿಯನ್ನು ಪ್ರೀತಿಸಬೇಕೆನ್ನುವ ಸಂದೇಶ ಈ ಚಿತ್ರದಲ್ಲಿದೆ. ಇದೊಂದು ಹಳ್ಳಿಯಲ್ಲಿ ನಡೆಯುವ ಕಥೆ ಎಂಬುದು ನಿರ್ದೇಶಕರ ಅಂಬೋಣ.
ಇನ್ನು ಚಿತ್ರಕ್ಕೆ ಪ್ರಮೋದ್ ಬೋಪಣ್ಣ ನಾಯಕನಾಗಿ ನಟಿಸಿದ್ದು, ಮೇಘನಾ ಗೌಡ ನಾಯಕಿಯಾಗಿ ಅಭಿನಯಿಸಲಿದ್ದಾರೆ.
ಮೈಸೂರು, ಸಕಲೇಶಪುರ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದ್ದು, ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಜತೆಗೆ ಇದೇ ವಾರದಲ್ಲಿ ಚಿತ್ರೀಕರಣವನ್ನು ಆರಂಭಿಸಲಿದೆ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಪ್ರಭು ಎಸ್.ಆರ್. ಸಂಗೀತ ಸಂಯೋಜನೆ ಮಾಡಿದ್ದಾರೆ. ಮೂರು ಫೈಟ್ ದೃಶ್ಯಗಳಿಗೆ ರಾಮ್ದೇವ್ ಸಾಹಸ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣ ಹೃಷಿಕೇಶ್ ಅವರದ್ದು.











































