ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಿಗೆ ಹೊಸ ತಿರುವನ್ನು ತಂದುಕೊಟ್ಟಿದ್ದು ಜೀ ಕನ್ನಡ ವಾಹಿನಿ. ಡ್ರಾಮಾ ಜೂನಿಯರ್ಸ್, ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ವೀಕೆಂಡ್ ವಿತ್ ರಮೇಶ್ನಂಥ ರಿಯಾಲಿಟಿ ಶೋಗಳ ಸಾಲಿನಲ್ಲಿ ತನ್ನದೇ ಆದ ವಿಶಿಷ್ಠ ಆಯಾಮನ್ನು ಮೂಡಿಸಿದ ಮತ್ತೊಂದು ಮನರಂಜನಾತ್ಮಕ ಕಾರ್ಯಕ್ರಮ ಕಾಮಿಡಿ ಕಿಲಾಡಿಗಳು. ಹಾಸ್ಯವನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ಶುರುವಾದ ಈ ಕಾರ್ಯಕ್ರಮವನ್ನು ಕನ್ನಡನಾಡಿನ ಪ್ರತಿಯೊಬ್ಬ ಪ್ರೇಕ್ಷಕ ಇದು ನಮ್ಮ ಕಾರ್ಯಕ್ರಮ, ನಮ್ಮೊಳಗಿನ ನೋವುಗಳನ್ನು ದೂರವಾಗಿಸಿ ನಗುವಿನ ಕಚಗುಳಿಯಿಡುವ ನಮ್ಮ ಹೆಮ್ಮೆಯ ಕಾರ್ಯಕ್ರಮ ಎನ್ನುವಷ್ಟರ ಮಟ್ಟಿಗೆ ನೋಡುಗರ ಮೆಚ್ಚುಗೆ ಗಳಿಸಿತ್ತು. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಸೀಜನ್ 1 ಹಾಗೂ ಸೀಜನ್ 2ನ್ನು ಯಶಸ್ವಿಯಾಗಿ ಮುಗಿಸಿ ಈಗ 3ನೇ ಸರಣಿಯನ್ನು ಕೂಡ ಅದೇ ಉತ್ಸಾಹ, ಅದೇ ಹುರುಪಿನೊಂದಿಗೆ ಜೀ ಕನ್ನಡ ವೀಕ್ಷಕರಿಗೆ ನೀಡಲು ಸಜ್ಜಾಗಿದೆ. ಈಗಾಗಲೇ ಕರ್ನಾಟಕದಾದ್ಯಂತ 9 ಜಿಲ್ಲೆಗಳಲ್ಲಿ ನಡೆಸಿದ ಆಡಿಷನ್ನಲ್ಲಿ ಸಹಸ್ರಾರು ಉತ್ಸಾಹಿ ಹಾಗೂ ಪ್ರತಿಭಾವಂತ ಕಲಾವಿದರು ಭಾಗವಹಿಸಿದ್ದರು, ಅವರಲ್ಲಿ ಆಯ್ಕೆಯಾದಂತ ಪ್ರತಿಭಾನ್ವಿತ ಕಿಲಾಡಿಗಳನ್ನು ಮೆಗಾ ಆಡಿಷನ್ ಮೂಲಕ ಕರ್ನಾಟಕಕ್ಕೆ ಪರಿಚಯಿಸುವ ಮತ್ತೊಂದು ಪ್ರಯತ್ನಕ್ಕೆ ಸಜ್ಜಾಗಿ ನಿಂತಿದೆ ಕಾಮಿಡಿ ಕಿಲಾಡಿಗಳು ವೇದಿಕೆ.

ಈ ಕಾಮಿಡಿ ಕಿಲಾಡಿಗಳು ಸೀಜನ್ 3 ಕಾರ್ಯಕ್ರಮಕ್ಕೆ ಎಂದಿನಂತೆ ಮುಖ್ಯ ಆಧಾರ ಸ್ಥಂಭಗಳಾದ ನವರಸ ನಾಯಕ ಜಗ್ಗೇಶ್, ರಕ್ಷಿತ ಪ್ರೇಮ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ರವರು ತೀರ್ಪುಗಾರರ ಸ್ಥಾನವನ್ನು ಮುಂದುವರೆಸಲಿದ್ದಾರೆ. ಅಲ್ಲದೆ ತನ್ನ ಮಾತಿನಿಂದಲೇ ಮೋಡಿ ಮಾಡುವ ಮೋಡಿಗಾರ ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ನಿರೂಪಕರಾಗಿ ಸಾರಥ್ಯ ವಹಿಸಲಿದ್ಧಾರೆ. ಇನ್ನುಳಿದಂತೆ ಸ್ಫರ್ಧಿಗಳಿಗೆ ಉತ್ತಮ ರಂಗ ತರಬೇತಿಯ ಜೊತೆಗೆ ಹಾಸ್ಯದ ಹಲವು ಮಜಲುಗಳನ್ನು ಪರಿಚಯಿಸಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಹಾಸ್ಯ ಕಲಾವಿದರ ಸಾಲಿಗೆ ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಕಾಮಿಡಿ ಕಿಲಾಡಿಗಳು ಸೀಜನ್ 3 ರಿಯಾಲಿಟಿ ಶೋ ಕಾರ್ಯಕ್ರಮ ವಿಭಿನ್ನತೆಯ ಜೊತೆಗೆ ಹೊಸತನದ ಕಚಗುಳಿಯ ಅಲೆಯೊಂದಿಗೆ ತೆರೆಮೇಲೆ ಬರಲು ಅಣಿಯಾಗಿದೆ. ಇದೇ ಆಗಸ್ಟ್ 31ರಿಂದ ಬದಲಾದ ಸಮಯದಲ್ಲಿ ಪ್ರತಿ ಶನಿವಾರ ಹಾಗು ಭಾನುವಾರ ರಾತ್ರಿ 7.30ಕ್ಕೆ ಕಾಮಿಡಿ ಕಿಲಾಡಿಗಳು ಸೀಜನ್ 3 ಪ್ರಸಾರವಾಗಲಿದೆ.











































