ತಾಂಡವ ಎಂಬ ಸಿನಿಮಾ ನಿರ್ದೇಶಿಸಿದ್ದ ಸ್ವಾತಿ ಅಂಬರೀಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ ತಮಸ್. ಇತ್ತೀಚೆಗೆ ವಿಜಯನಗರದ ಆದಿಚುಂಚನಗಿರಿ ಮಠದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್ ಚಿತ್ರಕ್ಕೆ ಸ್ವಿಚ್ಆನ್ ಮಾಡಿದರೆ, ಉಪಾಧ್ಯಕ್ಷರಾದ ಉಮೇಶ್ ಬಣಕಾರ್ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ನಟ ಮಹೇಶ್ ಅವರ ಸಹೋದರ ಯೋಗಿ, ನಿರ್ಮಾಪಕರಾದ ಸಿದ್ದರಾಜು, ಬಾಮಾ ಗಿರೀಶ್ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
ಟಿ.ಪಿ.ಸಿದ್ದರಾಜು ಅವರ ದ್ವಿತೀಯ ಪುತ್ರ ಮಹೇಶ್ ಈ ಚಿತ್ರದ ನಾಯಕನಾಗಿದ್ದು, ಅಮೃತಾಗೌಡ ಹಾಗೂ ಸೋನಂ ರೈ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಹೂರ್ತದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ಸ್ವಾತಿ ಅಂಬರೀಶ್, ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ವಿಜಯಲಕ್ಷ್ಮಿ ಮಂಜುನಾಥರೆಡ್ಡಿ ಅವರು ಬರೆದ ತಮಸ್ ಎಂಬ ಕಾದಂಬರಿ ಆಧರಿಸಿ ಈ ಚಿತ್ರಕ್ಕೆ ಚಿತ್ರಕಥೆ ಮಾಡಿದ್ದೇನೆ. ಇದೇ ೨೮ರಂದು ಆರಂಭಿಸಿ ದೇವನಹಳ್ಳಿ, ಚಿಕ್ಕಬಳ್ಳಾಪುರ ಸುತ್ತಮುತ್ತ ೩೫ ದಿನಗಳ ಕಾಲ ಶೂಟಿಂಗ್ ನಡೆಸುವ ಯೋಜನೆ ಹಾಕಿದ್ದೇವೆ. ಚಿಕ್ಕಮಗಳೂರು ಬಳಿಯ ದೇವರಮನೆ ಎಂಬಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಭಾಗವನ್ನು ಚಿತ್ರೀಕರಿಸುತ್ತಿದ್ದೇನೆ ಎಂದು ಹೇಳಿದರು.
ನಾಯಕ ನಟ ಮಹೇಶ್ ಮಾತನಾಡಿ, ಭಾಗ್ಯರಾಜ್ ನಂತರ ಬಹಳ ದಿನಗಳ ಗ್ಯಾಪ್ ಆಗಿದ್ದು, ಈ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದೇನೆ. ನಾಲ್ಕು ಪಾತ್ರಗಳ ಸುತ್ತ ನಡೆಯುವಂಥ ಕಥೆಯಿದು. ನಾಯಕ ಒಬ್ಬ ಕುರುಡು. ಕನ್ನಡ ಸಾಹಿತ್ಯವನ್ನು ಬೆಳೆಸಬೇಕೆಂಬ ನಿಟ್ಟಿನಲ್ಲಿ ಆತನ ಪ್ರಯತ್ನವಿರುತ್ತದೆ ಎಂದು ಹೇಳಿದರು.
ನಾಯಕಿ ಅಮೃತಾಗೌಡ ಮಾತನಾಡಿ, ಚಂದ್ರ ಎಂಬ ಹಳ್ಳಿಯ ಮುಗ್ದ ಹುಡುಗಿ. ಕವನ ಕೇಳುವುದೆಂದರೆ ತುಂಬ ಆಸಕ್ತಿ. ನಾಯಕ ಕವಿ ಬರಹಕ್ಕೆ ಮಾರುಹೋಗಿರುತ್ತಾಳೆ. ಒಬ್ಬ ಮುಗ್ದ ಹುಡುಗಿ ಯಾವ ರೀತಿ ಮೋಸ ಹೋಗಬಹುದು ಎಂದು ಈ ಚಿತ್ರದಲ್ಲಿ ತೋರಿಸಿದ್ದಾರೆ ಎಂದು ಹೇಳಿದರು.
ಮತ್ತೊಬ್ಬ ನಾಯಕಿ ಸೋನಂ ರೈ ಮಾತನಾಡಿ, ಚಿತ್ರದಲ್ಲಿ ನಾನೊಬ್ಬ ಕುರುಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಅನಂತ ಆರ್ಯನ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಮೋಂಬತ್ತಿ ಚಿತ್ರದ ನಟ ರಾಜ್ ಕೂಡ ಈ ಚಿತ್ರದಲ್ಲಿ ಒಬ್ಬ ಸ್ಪೋರ್ಟ್ಸ್ಮ್ಯಾನ್ ಆಗಿ ನಟಿಸಿದ್ದಾರೆ.
No Comment! Be the first one.