ಕಿಚ್ಚ ಕೊಟ್ಟ ಸಾಥ್ ಮತ್ತು ಕೃಷ್ಣ ಕನಸು!

Picture of Cinibuzz

Cinibuzz

Bureau Report

ಸುದೀಪ್ ಅವರದ್ದು ತಾನೂ ಬೆಳೆದು ತನ್ನವರನ್ನು ಬೆಳೆಸುವ ದೊಡ್ಡತನ. ಹುಡುಕುತ್ತಾ ಹೋದರೆ ಇಂತಹ ನಿದರ್ಶನಗಳು ಸಾಕಷ್ಟು ಸಿನಿಮಾಗಳಲ್ಲಿ ಕಾಣಸಿಗುತ್ತವೆ. ಸದ್ಯ ಸುದೀಪ್ ನಟಿಸಿರುವ ಪೈಲ್ವಾನ್ ಚಿತ್ರ ಕೂಡ ಅದೇ ದಾರಿಯಲ್ಲಿದೆ.


ಹೆಬ್ಬುಲಿ ಚಿತ್ರದ ಗೆಲುವಿನ ನಂತರ ಮತ್ತೊಂದು ಸಿನಿಮಾವನ್ನು ಮಾಡುವ ತವಕದಲ್ಲಿದ್ದ ಕೃಷ್ಣ ಸುದೀಪ್ ಅವರಿಗೆ ಪೈಲ್ವಾನ್ ಎಳೆಯನ್ನು ಹೇಳಿದ್ದರಂತೆ. ಆರಂಭದಲ್ಲಿ ಬಾಡಿ ಟೋನಿಂಗ್ ವಿಚಾರವನ್ನು ಕಿಚ್ಚ ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದೇನು ಅನ್ನಿಸಿತ್ತೋ ಮತ್ತೆ ಈ ಸಿನಿಮಾ ಕಡೆ ಆಕರ್ಷಣೆಯಾಗಿ ಕೃಷ್ಣ ಅವರಿಗೆ ಪೈಲ್ವಾನ್ ಸ್ಕ್ರಿಪ್ಟ್ ಕೆಲಸವನ್ನು ಶುರು ಮಾಡಲು ಹೇಳಿದ್ದರಂತೆ. ಸ್ಕ್ರಿಪ್ಟ್ ಮುಗಿಸಿ ಯಾವುದೇ ನಿರ್ಮಾಪಕರನ್ನು ಕರೆದುಕೊಂಡು ಹೋದರೂ ನಿರಾಕರಿಸುತ್ತಿದ್ದ ಸುದೀಪ್ ಕೊನೆಗೆ ಕೃಷ್ಣ ಅವರಿಗೆ ನಿರ್ಮಾಣ ಮಾಡಲು ಸಲಹೆಕೊಟ್ಟರಂತೆ. ಆರಂಭದಲ್ಲಿ ಈ ವಿಚಾರವನ್ನು ಒಪ್ಪದ ಕೃಷ್ಣ, ಖುದ್ದು ಕಿಚ್ಚ ಧೈರ್ಯ ತುಂಬಿ ಸಾಥ್ ಕೊಟ್ಟ ಮೇಲೆ ನಿರ್ದೇಶನದ ಜತೆಗೆ ನಿರ್ಮಾಣವನ್ನು ಮಾಡಲು ರೆಡಿಯಾದರಂತೆ. ಸಿನಿಮಾ ಶುರುವಾದಂದಿನಿಂದ ಇಲ್ಲಿಯವರೆಗೂ ಕೃಷ ಅವರಿಗೆ ಕಿಚ್ಚ ಜತೆಯಾಗಿ ನಿಂತಿದ್ದಾರೆ.. ತಮ್ಮ ಪೇಮೆಂಟ್ ಕೂಡ ಪಡೆಯದೇ ಮಹಾಭಾರತದಲ್ಲಿ ಅರ್ಜುನನಿಗೆ ಕೃಷ್ಣ ಸಾರಥಿಯಾಗಿದ್ದರೆ, ಕಲಿಯುಗದಲ್ಲಿ ಕೃಷ್ಣನಿಗೆ ಕಿಚ್ಚನೇ ಸಾರಥಿಯಾಗಿದ್ದಾರೆ…


ಸುದೀಪ್ ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳಲ್ಲೂ ಕೂಡಾ ಪಡೆದ ಪ್ಯಾಕೇಜಿಗಿಂತಾ ಹೆಚ್ಚು ಖರ್ಚು ಮಾಡಿ ಚಿತ್ರಗಳನ್ನು ಗೆಲ್ಲಿಸಿದವರು. ಸುದೀಪ್ ರಂಥಾ ಸ್ಟಾರ್ ಜೊತೆ ಒಂದರ ಹಿಂದೆ ಇನ್ನೊಂದು ಸಿನಿಮಾ ಮಾಡೋದು ಸುಮ್ಮನೇ ಮಾತಲ್ಲ. ಕಥೆ ಹೇಳಿದಂತೇ ಸಿನಿಮಾ ಕೂಡಾ ಮೂಡಿಬರಬೇಕು ಅಂತಾ ಬಯಸೋರು ಸುದೀಪ್. ಕೃಷ್ಣ ಕೂಡಾ ಅಸಾಧ್ಯ ಕನಸುಗಾರ. ಕನ್ನಡ ಸಿನಿಮಾಗಳ ದೃಶ್ಯ ಶ್ರೀಮಂತಿಕೆ ಹೆಚ್ಚಿಸಿದ ನಿರ್ದೇಶಕ ಕಂ ಛಾಯಾಗ್ರಾಹಕ ಕೃಷ್ಣ. ಈಗ ತಮ್ಮದೇ ನಿರ್ಮಾಣ ಮತ್ತು ನಿರ್ದೇಶನದ ಪೈಲ್ವಾನ್ ಚಿತ್ರವನ್ನು ಕೃಷ್ಣ ಅದ್ಭುತವಾಗಿ ಮೂಡಿಸಿದ್ದಾರೆ ಅನ್ನೋದಕ್ಕೆ ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಮತ್ತು ಪೋಸ್ಟರುಗಳೇ ಸಾಕ್ಷಿ ಒದಗಿಸುತ್ತಿವೆ. ಇನ್ನು ಇದೇ ವಾರ ಬಿಡುಗಡೆಯಾಗುತ್ತಿರುವ ಪೈಲ್ವಾನ್ ನನ್ನು ನೋಡಲು ಜನ ತುದಿಗಾಲಲ್ಲಿ ನಿಂತಿದ್ದಾರೆ!

ಇನ್ನಷ್ಟು ಓದಿರಿ

Scroll to Top