ಕ್ರಿಸ್ಟಲ್ ಪಾರ್ಕ್ ಪ್ರೊಡಕ್ಷನ್ಸ್ ಅಡಿಯಲ್ಲಿ ಚಂದ್ರಶೇಖರ್ ನಿರ್ಮಿಸುತ್ತಿರುವ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸಿನಿಮಾ ಬುದ್ದಿವಂತ-೨. ಇನ್ನೇನು ಶೂಟಿಂಗ್ ಆರಂಭಿಸಲಿರುವ ಈ ಚಿತ್ರಕ್ಕೆ ಮೌರ್ಯ ನಿರ್ದೇಶಕ ಎಂದು ಹೇಳಲಾಗಿತ್ತು. ಈಗ ನಿರ್ದೇಶಕರು ಬದಲಾಗಿರುವ ವಿಚಾರ ಬಹಿರಂಗವಾಗಿದೆ.
ಈಗಾಗಲೇ ಉಪೇಂದ್ರ ಅಭಿನಯದ ಸಾಕಷ್ಟು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ದುಡಿದಿದ್ದ ಜಯರಾಂ ಭದ್ರಾವತಿ ಅವರೀಗ ಬುದ್ದಿವಂತನ್ನು ನಿರ್ದೇಶಿಸಲಿದ್ದಾರೆ. ಇತ್ತೀಚೆಗಷ್ಟೇ ತೆರೆಗೆ ಬಂದಿದ್ದ ಆರ್. ಚಂದ್ರು ನಿರ್ದೇಶನದ ಐ ಲವ್ ಯು ಸಿನಿಮಾ ಸೇರಿದಂತೆ ಬ್ರಹ್ಮ ಸಿನಿಮಾಗೂ ಜಯರಾಂ ನಿರ್ದೇಶನ ವಿಭಾಗದಲ್ಲಿ ದುಡಿದಿದ್ದರು. ಜಯರಾಂ ಕೆಲಸ ನಿರ್ವಹಿಸಿದ ಸಿನಿಮಾಗಳಲ್ಲಿ ಅವರ ಬಗೆಗೆ ಒಂದೊಳ್ಳೆ ಹೆಸರಿದೆ. ಹಿಡಿದ ಕೆಲಸವನ್ನು ಶ್ರಮವಹಿಸಿ ಮಾಡುತ್ತಾರೆ, ಕಡೇತನಕ ತಂಡದಲ್ಲಿ ಸಕ್ರಿಯರಾಗಿರುತ್ತಾರೆ ಎಂಬಿತ್ಯಾದಿಯಾಗಿ ಮಾತುಗಳಿವೆ. ಬುದ್ದಿವಂತ-೨ ಅಲ್ಲದಿದ್ದರೂ ಉಪ್ಪಿಗಾಗಿ ಮತ್ತೊಂದು ಸಿನಿಮಾ ನಿರ್ದೇಶಿಸುವ ತಯಾರಿಯಲ್ಲಿದ್ದರು ಜಯರಾಂ. ಆದರೆ ಬಯಸದೇ ಬಂದ ಭಾಗ್ಯ ಎನ್ನುವಂತೆ ಬುದ್ದಿವಂತ ಕೈ ಹಿಡಿದಿದ್ದಾನೆ. ಕಮರ್ಷಿಯಲ್ ಸಿನಿಮಾವೊಂದರ ಗ್ರಾಫ್ ಅರಿತಿಸುವ ಜಯರಾಂ ಉಪೇಂದ್ರ ಅವರನ್ನು ಜನ ಹೇಗೆ ನೋಡಬಯಸುತ್ತಾರೆ ಅನ್ನೋದನ್ನ ಸಂಪೂರ್ಣ ಅರಿತಿದ್ದಾರೆ. ಇದನ್ನೆಲ್ಲಾ ಗಮನಿಸಿಯೇ ಬಹುಶಃ ಉಪ್ಪಿ ಜಯರಾಂ ಅವರ ಕೈಗೆ ಬುದ್ದಿವಂತನನ್ನು ಒಪ್ಪಿಸಿರಬಹುದು.
ಸಿನಿಮಾವನ್ನು ಸಮರ್ಥವಾಗಿ ಕಟ್ಟಿಕೊಡುವುದರೊಂದಿಗೆ ಅದನ್ನು ಹೇಗೆ ಜನರಿಗೆ ತಲುಪಿಸಬೇಕು, ಹೇಗೆಲ್ಲಾ ಪ್ರಚಾರ ಮಾಡಬೇಕು ಅನ್ನೋದು ಕೂಡಾ ಜಯರಾಂ ಹೊಸದಾಗಿ ತಿಳಿಯುವ ಅಗತ್ಯವೇನಿಲ್ಲ. ಪ್ರಚಾರದ ವಿಚಾರದಲ್ಲಿ ಯಾರೂ ಮೀರಿಸಲು ಸಾಧ್ಯವಿಲ್ಲದಂತಾ ಉಪೇಂದ್ರ ಮತ್ತು ಆರ್.ಚಂದ್ರು ಗರಡಿಯಲ್ಲಿ ಪಳಗಿರುವುದರಿಂದ ಜಯರಾಂ ತಮ್ಮ ನಿರ್ದೇಶನದ ಮೊದಲ ಸಿನಿಮಾದಿಂದಲೇ ಸಲೀಸಾಗಿ ಪಬ್ಲಿಸಿಟಿ ಗಿಟ್ಟಿಸಿಕೊಳ್ಳಬಹುದು.
ಕ್ರಿಸ್ಟಲ್ ಪಾರ್ಕ್ ನಂಥಾ ಹೆಸರುವಾಸಿ ಸಂಸ್ಥೆ, ಚಂದ್ರಶೇಖರ್’ರಂಥಾ ಕಸುಬುದಾರ ನಿರ್ಮಾಪಕ, ರಿಯಲ್ ಸ್ಟಾರ್ ಸಾಥ್, ಜೊತೆಗೆ ಕಲಿತಿರುವ ವಿಧ್ಯೆ, ಸಿನಿಮಾ ಮೇಲಿನ ಒಲವು, ಚುರುಕುತನ, ಪ್ರತಿಭೆ – ಇವೆಲ್ಲಾ ಒಂದೆಡೆ ಸೇರಿರುವುದರಿಂದ ಜಯರಾಂ ಕನ್ನಡ ಚಿತ್ರರಂಗದ ಮಟ್ಟಿಗೆ ಮತ್ತೊಬ್ಬ ಸ್ಟಾರ್ ಡೈರೆಕ್ಟರ್ ಆಗಿ ಹೊರಹೊಮ್ಮುವುದರಲ್ಲಿ ಡೌಟೇ ಇಲ್ಲ!
No Comment! Be the first one.