ತರುಣ್ ಟಾಕೀಸ್’ನ ತರುಣ್ ಶಿವಪ್ಪ ನಿರ್ಮಾಣ, ‘ಕರ್ವ’ದಂಥಾ ಭಿನ್ನ ಸಿನಿಮಾ ಮಾಡಿದ್ದ ನವನೀತ್ ನಿರ್ದೇಶನ, ರಿಯಲ್ ಸ್ಟಾರ್ ಉಪೇಂದ್ರ ನಟನೆ – ಇವಿಷ್ಟೂ ಇದ್ದಮೇಲೆ, ಇದು ದೊಡ್ಡ ಬಜೆಟ್ಟಿನ, ವಿಶೇಷ ಸಿನಿಮಾ ಆಗಿ ಮೂಡಿಬರೋದ ಖಂಡಿತಾ!

ಇನ್ನೂ ಟೈಟಲ್ ಲಾಂಚ್ ಆಗಬೇಕಿರುವ ಈ ಚಿತ್ರದ ಕಥೆಯನ್ನು ಮೊದಲಿಗೆ ನಿರ್ದೇಶಕ ನವನೀತ್ ಹೋಗಿ ಹೇಳಿದ್ದು ಉಪ್ಪಿ ಅವರ ಬಳಿ. ನವನೀತ್ ಮಾಡಿಕೊಂಡಿದ್ದ ಸಬ್ಜೆಕ್ಟನ್ನು ಕೇಳಿ ಖುಷಿಯಾದ ಉಪೇಂದ್ರ ಅವರೇ ಖುದ್ದು ನಿರ್ಮಾಪಕ ತರುಣ್ ಅವರಿಗೆ ಹೇಳಿದ್ದರಂತೆ. ನಿರ್ಮಾಪಕ ತರುಣ್ ಸಹಾ ಕತೆ ಕೇಳಿ ಸಿಕ್ಕಾಪಟ್ಟೆ ಇಷ್ಟಪಟ್ಟರಂತೆ. ಹೀಗೆ ಆರಂಭವಾದ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ನಾಡಿದ್ದು ಉಪ್ಪಿಯ ಹುಟ್ಟುಹಬ್ಬದಂದು ಅನಾವರಣಗೊಳ್ಳಲಿದೆ.

ಇದು ಸಿನಿಮಾದ ಸಬ್ಜೆಕ್ಟ್!
ಉಪೇಂದ್ರ ಅವರು ಈ ಹಿಂದೆ ನಟಿಸಿದ್ದ ಸಿನಿಮಾ ಮತ್ತು ಪಾತ್ರದ ಹೆಸರಿನ ಸೀಕ್ವೆಲ್ ಇದಾಗಿದೆ. ಈ ಚಿತ್ರ ಔಟ್ ಅಂಡ್ ಔಟ್ ಸ್ಪೋರ್ಟ್ಸ್ ಸಬ್ಜೆಕ್ಟನ್ನು ಹೊಂದಿದ್ದು ಕಾಮಿಡಿ ಪ್ರಧಾನವಾಗಿರಲಿದೆ. ಇಡೀ ಭಾರತೀಯ ಚಿತ್ರರಂಗ ಟಚ್ ಮಾಡದ ಕಥಾವಸ್ತು ಈ ಚಿತ್ರದಲ್ಲಿದೆಯಂತೆ. ಹಿಂದಿಯ ವೆಬ್ ಸಿರೀಸ್ ಒಂದರಲ್ಲಿ ಈ ಬಗೆಯ ಸಬ್ಜೆಕ್ಟು ಸಣ್ಣದಾಗಿ ಬಳಕೆಯಾಗಿರೋದು ಬಿಟ್ಟರೆ ಸೌತ್ ಇಂಡಿಯಾದ ಯಾವ ಸಿನಿಮಾದಲ್ಲೂ ಈ ವರೆಗೆ ಈ ಎಳೆಯನ್ನು ಯಾರೂ ಮುಟ್ಟಿಲ್ಲವಂತೆ. ಈ ಚಿತ್ರವನ್ನು ತೀರಾ ದೊಡ್ಡ ಬಜೆಟ್ಟಿನ ಜೊತೆಗೆ ಬಹುಭಾಷೆಯಲ್ಲಿ ತಯಾರುಮಾಡುವ ಯೋಜನೆ ನಿರ್ಮಾಪಕ ತರುಣ್ ಶಿವಪ್ಪ ಅವರದ್ದು.

ಇದು ತರುಣ್ ಶಿವಪ್ಪ ತಮ್ಮ ತರುಣ್ ಟಾಕೀಸ್ ಮೂಲಕ ನಿರ್ಮಿಸುತ್ತಿರುವ ಐದನೇ ಸಿನಿಮಾ. ಸದ್ಯ ಇದೇ ಬ್ಯಾನರಿನಲ್ಲಿ ಚಿರಂಜೀವಿ ಸರ್ಜಾ ಅಭಿನಯದ ‘ಖಾಕಿ’ ತಯಾರಾಗುತ್ತಿದ್ದು, ಈ ಸಿನಿಮಾ ಬಿಡುಗಡೆಯ ಹೊತ್ತಿಗೆ ನವನೀತ್ ನಿರ್ದೇಶನದ ಚಿತ್ರ ಆರಂಭಗೊಳ್ಳಲಿದೆ.

ಕತೆ, ಚಿತ್ರಕತೆ, ನಿರೂಪಣೆ, ಮೇಕಿಂಗ್ – ಪ್ರತಿಯೊಂದು ವಿಚಾರದಲ್ಲೂ ಹೊಸತನವಿದ್ದು, ಮನರಂಜನೆಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ರೂಪಿಸುತ್ತಿರುವ ಈ ಚಿತ್ರ ಹೀರೋ ಉಪ್ಪಿ, ನಿರ್ದೇಶಕ ನವನೀತ್’ಗೆ ಮಾತ್ರವಲ್ಲ ತರುಣ್ ಟಾಕೀಸ್ ಸಂಸ್ಥೆಗೂ ಕಿರೀಟದಂತಾಗುತ್ತದೆ ಎನ್ನುವುದು ನಿರ್ಮಾಪಕ ತರುಣ್ ಶಿವಪ್ಪ ಅಭಿಪ್ರಾಯ.

ಹಾಗೆ ನೋಡಿದರೆ, ನಿರ್ದೇಶಕ ನವನೀತ್ ಕೂಡಾ ಕ್ರೀಡಾಪಟು. ಸಿನಿಮಾಗೆ ಬರುವ ಮುಂಚೆ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವರು. ಹೀಗಾಗಿ ಕ್ರೀಡಾ ಕ್ಷೇತ್ರದ ಕುರಿತ ಇಂಚಿಂಚೂ ಮಾಹಿತಿ ಅವರಿಗೆ ಗೊತ್ತಿರುತ್ತದೆ. ಜೊತೆಗೆ ತಾವು ಕಲ್ಪಿಸಿಕೊಂಡ ದೃಶ್ಯಗಳನ್ನು ತೆರೆಮೇಲೆ ಸಮರ್ಥವಾಗಿ ಕಟ್ಟಿಕೊಡುವಲ್ಲೂ ಸಹಕಾರಿಯಾಗಿರುತ್ತದೆ. ಇನ್ನೂ ಟೈಟಲ್ ಲಾಂಚ್’ಗೂ ಮುನ್ನವೇ ಈ ಮಟ್ಟಿಗೆ ಕುತೂಹಲ ಸೃಷ್ಟಿಸಿರುವ ಈ ಚಿತ್ರ ಇನ್ನು ಶುರುವಾಗಿ ಬಿಡುಗಡೆ ಹೊತ್ತಿಗೆ ದೊಡ್ಡ ಮಟ್ಟದ ಕ್ರೇಜ಼್ ಸೃಷ್ಟಿಸೋದಂತೂ ನಿಜ!











































