ರೆಬೆಲ್ ಕನಸನ್ನು ಈಡೇರಿಸುತ್ತಾರಾ ಇವರಿಬ್ಬರೂ?

Picture of Cinibuzz

Cinibuzz

Bureau Report

ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಹೀರೋಗಳ ನಡುವೆ ಕುಚಿಕ್ಕು ಗೆಳೆಯರೆಂದೇ ಪ್ರಸಿದ್ಧರಾಗಿದ್ದವರು ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದರೆ ಈ ಸ್ನೇಹ ಕಳೆದ ನಾಲ್ಕು ವರ್ಷಗಳಿಂದ ಗ್ರಹಣ ಕವುಚಿಕೊಂಡಂತೆ ಮಂಕಾಗಿತ್ತು. ಒಂದು ವೇಳೆ ರೆಬೆಲ್ ಸ್ಟಾರ್ ಜೀವಂತವಾಗಿದ್ದಿದ್ದರೆ ಪರಸ್ಪರ ವಿರುದ್ಧ ದಿಕ್ಕುಗಳಂತಾಗಿದ್ದ ಸುದೀಪ್ ಮತ್ತು ದರ್ಶನ್ ಮತ್ತೆ ಒಂದೇ ಬಿಂದುವಿನಲ್ಲಿ ಸಂಧಿಸೋ ಕಾಲ ಕೂಡಿರುತ್ತಿತ್ತು!


ಇನ್ನೆಂದೂ ಈ ಗೆಳೆತನ ಮತ್ತೆ ಕೂಡಿಕೊಳ್ಳೋದು ಸಾಧ್ಯವೇ ಇಲ್ಲ ಎಂಬ ವಾತಾವರಣವೇ ಸದ್ಯದ ವರೆಗೂ ಚಾಲ್ತಿಯಲ್ಲಿದೆ. ಇವರಿಬ್ಬರು ಒಂದಾಗಿಯಾರೆಂಬ ಅಭಿಮಾನಿಗಳ ಭರವಸೆ ಕೂಡಾ ಕ್ಷೀಣಿಸುತ್ತಾ ಬಂದಿದೆ. ಅಂಬರೀಶ್ ಕೊನೆಯುಸಿರೆಳೆಯುವ ಆ ಸಂದರ್ಭದಲ್ಲೇ ರೆಬೆಲ್ ಸ್ಟಾರ್ ಅಂಬರೀಶ್ ಮುಂದೆ ನಿಂತು ಇವರಿಬ್ಬರನ್ನು ಸೇರಿಸುವ ಮಾತಾಡಿದ್ದರು. ‘ಹೇಗಾದ್ರೂ ಮಾಡಿ ಇವ್ರಿಬ್ರನ್ನೂ ಒಂದು ಮಾಡಬೇಕು’ ಅನ್ನೋದು ಅಂಬಿ ಹೆಬ್ಬಯಕೆಯಾಗಿತ್ತು!

ವರ್ಷಾಂತರಗಳ ಹಿಂದಿನ ವರೆಗೂ ಒಗ್ಗಟ್ಟಾಗೇ ಇದ್ದವರು ಸುದೀಪ್ ಮತ್ತು ದರ್ಶನ್. ಆದರೆ ಆ ನಂತರದಲ್ಲಿ ಇಬ್ಬರೂ ಒಟ್ಟಾಗಿ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳೋದನ್ನು ಅವಾಯ್ಡು ಮಾಡಲಾರಂಭಿಸಿದ್ದರು. ಈ ಹಂತದಲ್ಲಿಯೇ ಸ್ನೇಹ ಮುರಿದು ಬಿದ್ದ ಬಗ್ಗೆ ಕಂತೆ ಕಂತೆ ರೂಮರುಗಳು ಹರಿದಾಡಲಾರಂಭಿಸಿದ್ದವು. ಆಗಲೂ ಇವುಗಳನ್ನು ಬರೀ ರೂಮರ್ ಅಂತಲೇ ಭಾವಿಸಿದ್ದ ಅಭಿಮಾನಿಗಳಿಗೆ ತುಂಬಾ ತಡವಾಗಿಯೇ ಅದು ನಿಜ ಅಂತ ಗೊತ್ತಾಗಿತ್ತು. ಇದೆಲ್ಲದರಾಚೆಗೆ ಅಭಿಮಾನಿಗಳೆಲ್ಲ ಇವರಿಬ್ಬರು ಜೊತೆ ಸೇರಬೇಕೆಂಬ ಆಳದ ಆಸೆ ಹೊಂದಿದ್ದರಲ್ಲಾ? ಅದು ಅಂಬಿ ಇದ್ದಿದ್ದರೆ ಬಹುಶಃ ಈಡೇರುತ್ತಿತ್ತು. ಯಾಕೆಂದರೆ ಈ ಸ್ನೇಹಿತರನ್ನು ಒಂದುಗೂಡಿಸೋ ತಾಕತ್ತಿದ್ದದ್ದು ಅಂಬರೀಶ್ ಅವರಿಗೆ ಮಾತ್ರ!
ಈಗ ಕಾಲ ಮಿಂಚಿದೆ. ಅಂಬರೀಶ್ ಬದುಕಿದ್ದಾಗ ಬಯಸಿದ್ದು ಈಡೇರಲಿಲ್ಲ. ಕೊನೇ ಪಕ್ಷ ಈಗಲಾದರೂ ಈ ಇಬ್ಬರೂ ನಟರು ಒಂದಾಗಿ ನಿಂತು ರೆಬೆಲ್ ಸ್ಟಾರ್ ಕನಸನ್ನು ಈಡೇರಿಸುತ್ತಾರಾ?

ಇನ್ನಷ್ಟು ಓದಿರಿ

Scroll to Top