ಎಳೇ ವಯಸ್ಸಿನ ಗುರುಗಳು ಹುಟ್ಟಿಕೊಂಡಿದ್ದೇ, ನಮ್ಮ ಜನ ಹೋಗಿ ವಯಸ್ಸಿನ ಅಂತರವನ್ನೂ ಮರೆತು, ಕಾಲು ತೊಳೆದು ಕೈ ಮುಗಿದು ಬರುತ್ತಾರೆ.
ಮಣ್ಣಿನ ಮಗ ದೇವೇಗೌಡರಿಂದ ಹಿಡಿದು ಚಿನ್ನದ ವ್ಯಾಪಾರಿ ಸರವಣನ ತನಕ ಘಟನಾನುಘಟಿ ರಾಜಕಾರಣಿಗಳು, ಸಿನಿಮಾ ಸ್ಟಾರ್ಗಳ ಆದಿಯಾಗಿ ಸಾಕಷ್ಟು ಜನ ಈ ಗೌರೀಗದ್ದೆಯ ವಿನಯ್ ಗುರೂಜಿಯ ಪಾದಕ್ಕೆರಗಿ ಬಂದಿದ್ದಾರೆ. ಈ ಹುಡುಗ ಸ್ವಾಮಿ ಅವಧೂತನಂತೆ. ಭ್ರಹ್ಮ, ವಿಷ್ಣು, ಮಹೇಶ್ವರರ ಶಕ್ತಿಗಳನ್ನು ಒಳಗೊಂಡಿರುವ ದತ್ತಾತ್ರೇಯಸ್ವಾಮಿಯ ಅಪರಾವತಾರ ಈ ಗುರುವಿನದ್ದು ಅಂತಾ ಜನ ನಂಬುತ್ತಿದ್ದಾರೆ. ಅವರವರ ನಂಬಿಕೆ ಅವರದ್ದು!
ಯೂಟ್ಯೂಬ್ನಲ್ಲಿರುವ ಈ ವಿನಯ್ ಗುರುವಿನ ಭಾಷಣಗಳು ನಿಜಕ್ಕೂ ವ್ಯಕ್ತಿತ್ವ ವಿಕಸನದ ಮೆಟೀರಿಯಲ್ಲುಗಳಂತಿವೆ. ಅದರ ಬಗ್ಗೆ ತಕರಾರಿಲ್ಲ.
ಆದರೆ ಈ ಬಾಲಗುರುವು ಕಿಚ್ಚ ಸುದೀಪ್ ಅವರನ್ನು ಉದ್ದೇಶಿಸಿದಂತೆ ಮಾತಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ಈ ಸುದೀಪನ ಮೂವಿಗಳನ್ನು ನೋಡ್ತಾ ಹುಡುಗರಿಗೆ ಕೈ ಕಾಲುಗಳಲ್ಲಿರುವ ರೋಮಗಳೆಲ್ಲಾ ಎದ್ದು ನಿಲ್ಲುತ್ತವಂತೆ. ಮಾಣಿಕ್ಯ ಅಂತೆ, ಅವನೇ ಹೆಬ್ಬುಲಿ ಅಂತೆ… ನಿಜವಾದ ಹುಲಿ ಬಂದರೆ ಹೋಡ್ತಾರೆ ಎನ್ನುವ ರೀತಿ ವಿನಯ್ ಮಾತಾಡಿದ್ದಾರೆ.
ಇವತ್ತು ಈ ವಿನಯ್ ಗುರು ಅನ್ನಿಸಿಕೊಳ್ಳುತ್ತಿರಬಹುದು, ಪವಾಡಗಳನ್ನು ಸೃಷ್ಟಿಸಿರಬಹುದು. ಅದರ ಸತ್ಯಾಸತ್ಯತೆಗಳೇನಿದ್ದರೂ ಈತನಿಗೂ, ಆ ಪವಾಡಗಳನ್ನು ಅನುಭವಿಸಿರುವ ಈತನ ಭಕ್ತರಿಗಷ್ಟೇ ಗೊತ್ತು. ಆದರೆ ಸುದೀಪ್ರಂಥ ನಟರ ಶಕ್ತಿ ಜಗತ್ತಿಗೇ ಗೊತ್ತಿರುವಂಥದ್ದು. ಚಿತ್ರರಂಗದಲ್ಲಿ ಪಡಬಾರದ ಪಾಡುಗಳನ್ನು ಪಟ್ಟು, ಇಲ್ಲಿ ಸ್ಟಾರ್ ನಟ ಎನಿಸಿಕೊಂಡು, ಅಸಂಖ್ಯಾತ ಅಭಿಮಾನಿಗಳನ್ನು ಹೊಂದುವುದು ಸುಲಭದ ಮಾತಲ್ಲ. ಸುದೀಪ್ ಇವತ್ತು ರಾಜ್ಯವನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟ.
ತಾನು ಗುರೂಜಿ ಅನಿಸಿಕೊಂಡ ತಕ್ಷಣ ಯಾರನ್ನು ಹೇಗೆ ಬೇಕಾದರೂ ಮಾತಾಡಬಹುದು ಅಂತೇನಾದರೂ ಇದೆಯಾ? ಮನಬಂದಂತೆ ಕೈ ಕಾಲು ಒದರಿಕೊಂಡು, ನಾಲಿಗೆ ಮೇಲೆ ಹಿಡಿತವಿಲ್ಲದಂತೆ ಒದರಿದ ಮಾತ್ರಕ್ಕೆ ಸುದೀಪ್ ಆಗಲಿ ಅವರಂಥ ಯಾವುದೇ ನಟನ ಗೌರವ ಕಡಿಮೆಯಾಗಿಬಿಡೋದಿಲ್ಲ. ಬದಲಿಗೆ ಅವರ ಅಭಿಮಾನಿಗಳು ಗುರು ಅನ್ನೋದನ್ನೂ ಮರೆತು ಕೆಟ್ಟಾ ಕೊಳಕ ಮಾತಾಡಿಬಿಡುತ್ತಾರೆ.
ನಿಜವಾದ ಹುಲಿ ಬಂದರೆ ಓಡುತ್ತಾರೆ ಅಂದಿದ್ದೀಯಲ್ಲಾ ಗುರುವೇ? ಹುಲಿಯ ಮುಂದೆ ಕೂರಿಸಿದರೆ, ಅದು ನಾಯಿಯಂತೆ ಬಂದು ನಿನ್ನನ್ನು ಮೂಸಿ ನೋಡುತ್ತದಾ? ಬಾಲ ಅಲ್ಲಾಡಿಸುತ್ತಾ? ಅಂಥದ್ದೇನಾದರೂ ಪವಾಡ ಸೃಷ್ಟಿಸಿದರೆ ಆ ದಿನ ನಿನ್ನನ್ನು ಗುರೂಜಿ ಅಂತಾ ಒಪ್ಪಿಕೊಳ್ಳಬಹುದು.
ಇಷ್ಟಕ್ಕೂ ಒಬ್ಬ ನಟನ ಬಗ್ಗೆ ಹಗುರವಾಗಿ ಮಾತಾಡಿ, ಅವರ ಅಭಿಮಾನಿಗಳಿಂದ ಇಕ್ಕಿಸಿಕೊಳ್ಳುವ ಕೆಲಸ ಬೇಕಿತ್ತಾ ಗುರುವೇ ನಿನಗೆ?
No Comment! Be the first one.