ಕನ್ನಡ ಕೈ ಹಿಡಿಯಿತು – ಭರಾಟೆ ಒಂದು ಮಾಡಿತು!

Picture of Cinibuzz

Cinibuzz

Bureau Report

ನನ್ನ ತಾಯಿ ತೀರಿಕೊಂಡ ಮೇಲೆ ಅವರು ಬರೆದಿಟ್ಟಿದ್ದ ಡೈರಿ ತೆಗೆದು ಓದಿದೆ. ಅದರಲ್ಲಿ ಮೂರು ಜನ ಅಣ್ಣತಮ್ಮಂದಿರು ಇನ್ನೂ ದೊಡ್ಡ ಎತ್ತರಕ್ಕೆ ತಲುಪಬೇಕು. ರವಿಶಂಕರ್ ಹೊಂದಿರುವ ಇರುವ ಪ್ರತಿಭೆಗೆ ತಕ್ಕ ಸ್ಥಾನ ಇನ್ನೂ ಸಿಕ್ಕಿಲ್ಲ. ಮೂವರೂ ಒಟ್ಟಿಗೆ ನಟಿಸುವಂತಾದರೆ ಸಾಕು… ಎಂಬ ರೀತಿಯಲ್ಲಿ ಬರೆದಿದ್ದರು.

  • ಸಾಯಿಕುಮಾರ್

ಸಾಯಿಕುಮಾರ್, ಅಯ್ಯಪ್ಪ ಮತ್ತು ರವಿಶಂಕರ್ ಸೌತ್ ಇಂಡಿಯಾ ಸಿನಿಮಾರಂಗದಲ್ಲಿ ದೊಡ್ಡ ಹೆಸರು ಮಾಡಿದವರು. ಬೇರೆಲ್ಲ ಭಾಷೆಗಳಿಗೆ ಹೋಲಿಸಿದರೆ, ಕನ್ನಡ ಚಿತ್ರರಂಗ ಈ ಸಹೋದರರಿಗೆ ಒಂದು ಹಿಡಿ ಹೆಚ್ಚೇ ಪ್ರೀತಿ ಕೊಟ್ಟು ಸಲುಹಿದೆ. ಸಾಯಿ ಕುಮಾರ್ ಅವರನ್ನು ಹೀರೋ ಮಾಡಿದ್ದು ಕನ್ನಡ ಚಿತ್ರರಂಗ, ಅಯ್ಯಪ್ಪ ಅವರಿಗೆ ಕಮರ್ಷಿಯಲ್ ಸಿನಿಮಾಗಳನ್ನು ನಿರ್ದೇಶಿಸುವ ಅವಕಾಶ ಕೊಟ್ಟಿದ್ದೂ ನಮ್ಮವರೇ. ಇನ್ನು ರವಿಶಂಕರ್ ಎನ್ನುವ ದೈತ್ಯ ಪ್ರತಿಭಾವಂತನನ್ನು ತೆಲುಗು ಚಿತ್ರಂಗ ಬರೀ ಡಬ್ಬಿಂಗ್ ಕಲಾವಿದನನ್ನಾಗಷ್ಟೇ ಸೀಮಿತಗೊಳಿಸಿತ್ತು. ತನ್ನೊಳಗೂ ಕಲಾವಿದನಿದ್ದಾನೆ ಅನ್ನೋದು ಗೊತ್ತಿದ್ದೂ, ಬೇರೆ ಯಾರೋ ನಟಿಸಿದ ಸಾವಿರಾರು ಸಿನಿಮಾಗಳಿಗೆ ದನಿ ನೀಡುತ್ತಾ ಒಳಗೊಳಗೇ ಕೊರಗುತ್ತಿದ್ದವರು ರವಿಶಂಕರ್. ಇಂಥ ರವಿ ಶಂಕರ್ ಪ್ರತಿಭೆಯನ್ನು ಗುರುತಿಸಿ ಕರೆದು ಕೆಂಪೇಗೌಡ ಚಿತ್ರದಲ್ಲಿ ಅವಕಾಶ ಕೊಟ್ಟು ಸ್ಟಾರ್ ವಿಲನ್ ಆಗಿಸಿದ್ದು ನಮ್ಮ ಕಿಚ್ಚ ಸುದೀಪ. ಆ ಸಿನಿಮಾದಲ್ಲಿ ಆರ್ಮುಗಂ ಆಗಿ ಅವತಾರವೆತ್ತಿದ ರವಿಶಂಕರ್ ನಂತರ ಅತ್ತಿತ್ತ ಕದಲೋಕೂ ಪುರುಸೊತ್ತಿಲ್ಲದಷ್ಟು ಬ್ಯುಸಿಯಾಗಿ ಹೋದರು. ಇಂಥ ಪ್ರತಿಭಾವಂತ ಸಹೋದರರನ್ನು ಒಂದೇ ಸಿನಿಮಾದಲ್ಲಿ ಒಟ್ಟಿಗೇ ಸೇರಿಸುವ ಸಾಹಸವನ್ನು ಯಾರೂ ಮಾಡಿರಲಿಲ್ಲ. ಅದನ್ನು ಬಹದ್ದೂರ್ ಚೇತನ್ ಸಾಧ್ಯವಾಗಿಸಿದ್ದಾರೆ.

ಇದೇ ತಿಂಗಳು ತೆರೆಗೆ ಬರಲಿರುವ ಭರಾಟೆ ಸಿನಿಮಾದಲ್ಲಿ ಸಾಯಿಕುಮಾರ್, ಅಯ್ಯಪ್ಪ ಮತ್ತು ರವಿಶಂಕರ್ ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ. “ಮೂರೂ ಜನರದ್ದು ಬೇರೆ ಬೇರೆ ಷೇಡ್ ಇರುವ ಪಾತ್ರ. ನನ್ನ ಪಾಲಿಗಂತೂ ಇದು ಒಂದೊಳ್ಳೆ ಎಕ್ಸ್ ಪೀರಿಯನ್ಸ್. ಈ ವರೆಗೂ ಮೂರೂ ಜನ ಒಟ್ಟಿಗೇ ಎಲ್ಲೂ ಆಕ್ಟ್ ಮಾಡಿರಲಿಲ್ಲ. ಮೂರೂ ಜನರ ಪಾತ್ರ ತುಂಬಾ ತೂಕವಾಗಿದೆ. ಮೂವರ ಬಾಡಿ ಲಾಂಗ್ವೇಜ್ ಬೇರೆ ಬೇರೆ ಇದೆ. ಎಲ್ಲದಕ್ಕೂ ಟೈಂ ಕೊಟ್ಟು ಮಾಡುವುದು ಛಾಲೆಂಜಿಂಗ್ ಅನ್ನಿಸಿತು. ಮೂವರೂ ಸಹೋದರರು ಕೂಡಾ ನಮಗೆ ಅಷ್ಟೇ ಸಹಕರಿಸಿದರು ಎನ್ನುವ ಚೇತನ್ ಜನ ಥ್ರಿಲ್ ಆಗುವಂಥಾ ಪಾತ್ರದಲ್ಲಿ ಇವರನ್ನು ತೋರಿಸಿದ್ದಾರಂತೆ.


ತಾಯಿಯ ಆಸೆ ನೆರವೇರಿತು!
ನನ್ನ ತಾಯಿ ತೀರಿಕೊಂಡ ಮೇಲೆ ಅವರು ಬರೆದಿಟ್ಟಿದ್ದ ಡೈರಿ ತೆಗೆದು ಓದಿದೆ. ಅದರಲ್ಲಿ ಮೂರು ಜನ ಅಣ್ಣತಮ್ಮಂದಿರು ಇನ್ನೂ ದೊಡ್ಡ ಎತ್ತರಕ್ಕೆ ತಲುಪಬೇಕು. ರವಿಶಂಕರ್ ಹೊಂದಿರುವ ಇರುವ ಪ್ರತಿಭೆಗೆ ತಕ್ಕ ಸ್ಥಾನ ಇನ್ನೂ ಸಿಕ್ಕಿಲ್ಲ. ಮೂವರೂ ಒಟ್ಟಿಗೆ ನಟಿಸುವಂತಾದರೆ ಸಾಕು… ಎಂಬ ರೀತಿಯಲ್ಲಿ ಬರೆದಿದ್ದರು. ತಾಯಿಯ ಬಯಕೆ ಭರಾಟೆಯ ಮೂಲಕ ನೆರವೇರಿದೆ. ಈ ಕಾರಣಕ್ಕೆ ನಾನು ಮತ್ತು ನನ್ನ ತಮ್ಮಂದಿರು ನಿರ್ಮಾಪಕ ಸುಪ್ರೀತ್ ಮತ್ತು ಡೈರೆಕ್ಟರ್ ಚೇತನ್ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎಂದು ಖುದ್ದು ಡೈಲಾಗ್ ಕಿಂಗ್ ಸಾಯಿ ಕುಮಾರ್ ಹೇಳಿಕೊಂಡಿದ್ದಾರೆ. ಕುಂಕುಮ ಭಾಗ್ಯ ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಕುಮಾರ್ ಸ್ಯಾಂಡಲ್ವುಡ್ಗೆ ಬಂದು ಇಪ್ಪತ್ತೈದು ವರ್ಷಗಳಾಗಿರುವ ಸಮಯಕ್ಕೇ ಸಹೋದರರ ಜೊತೆಗೆ ಒಟ್ಟಿಗೆ ತೆರೆ ಹಂಚಿಕೊಳ್ಳುವ ಅಪರೂಪದ ಅವಕಾಶವನ್ನು ಭರಾಟೆ ಕೊಡಮಾಡಿದೆ.
ತೀರಾ ಚಿಕ್ಕ ವಯಸ್ಸಿನಿಂದಲೂ ನನ್ನ ಅಣ್ಣ ಸಾಯಿಕುಮಾರ್’ನನ್ನು ನೋಡಿಕೊಂಡೇ ಬೆಳೆದವನು ನಾನು. ಅಯ್ಯಪ್ಪ ಕೂಡಾ ನನ್ನ ಬೆಳವಣಿಗೆಗೆ ಸಾಕಷ್ಟು ಕಾರಣನಾಗಿದ್ದಾನೆ. ನಾವು ಮೂವರೂ ಸಹೋದರರು ಅನ್ನೋದಕ್ಕಿಂತಾ ಸ್ನೇಹಿತರಂತೆ ಬೆಳೆದು ಬಂದಿದ್ದೀವಿ. ಈಗ ತೆರೆ ಮೇಲೆ ಒಟ್ಟಿಗೇ ನಟಿಸುತ್ತಿರುವುದು ನಿಜಕ್ಕೂ ಕನಸು ನನಸಾದ ಭಾವನೆ ಮೂಡಿಸಿದೆ ಎಂದು ರವಿಶಂಕರ್ ಭರಾಟೆ ಚಿತ್ರದ ಅನುಭವವನ್ನು ವಿವರಿಸಿದ್ದಾರೆ.

ಸಾಯಿ ಸಹೋದರರು ಮಾತ್ರವಲ್ಲದೆ, ಭರಾಟೆ ಚಿತ್ರದಲ್ಲಿ ಒಟ್ಟೂ ಹದಿಮೂರು ಜನ ಖಳನಟರಿದ್ದಾರೆ. ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಅವಿನಾಶ್, ದೀಪಕ್, ರಾಜವಾಡೆ, ಉಗ್ರಂ ಮಂಜು… ಹೀಗೆ ಘಟಾನುಘಟಿ ವಿಲನ್ ಕ್ಯಾರೆಕ್ಟರುಗಳೆಲ್ಲಾ ಭರಾಟೆಯಲ್ಲಿ ಸೇರಿಕೊಂಡಿವೆ. ಒಬ್ಬಿಬ್ಬರು ವಿಲನ್ಗಳಿದ್ದಾಗಲೇ ಹೀರೋಗಳಿಗೆ ಸವಾಲೆನಿಸಿಬಿಡುತ್ತದೆ. ಇಂಥದ್ದರಲ್ಲಿ ಬರೋಬ್ಬರಿ ಹದಿಮೂರು ಜನರ ನಡುವೆ ನಿಂತು ಗುದ್ದಾಡಬೇಕೆಂದರೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಯಾವ ಮಟ್ಟಿಗೆ ತಯಾರಿ ನಡೆಸಿಕೊಂಡು ಅಭಿನಯಿಸಿರಬೇಡ? ಶ್ರೀಮುರಳಿ, ನಿರ್ದೇಶಕ ಚೇತನ್ ಸೇರಿದಂತೆ ‘ಭರಾಟೆ ತಂಡ ಪಟ್ಟಿರುವ ಶ್ರಮದ ಪರಿ ಈಗ ರಿಲೀಸಾಗಿರುವ ಟ್ರೇಲರ್ ಮತ್ತು ಹಾಡುಗಳಲ್ಲೇ ಎದ್ದೆದ್ದು ಕಾಣಿಸುತ್ತಿದೆ.

ಇದೆಲ್ಲದರ ಪ್ರತಿಫಲವೆನ್ನುವಂತೆ ನಿರ್ದೇಶಕ ಚೇತನ್ ಕುಮಾರ್ ಭರಾಟೆ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿ, ಶ್ರೀಮುರಳಿಯವರ ಗೆಲುವಿನ ಓಟಕ್ಕೆ ಈ ಚಿತ್ರ ಜೊತೆಯಾಗಬೇಕಿದೆ.

ಇನ್ನಷ್ಟು ಓದಿರಿ

Scroll to Top