ಆನೆಬಲ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದು ಜನಮನ ಸೂರೆಗೊಂಡಿತು. ನಾಟಿ ಸ್ಟೈಲ್ ಕಥಾ ಹಂದರ ಹೊಂದಿರುವ ವಿನೂತನ ಚಿತ್ರಕತೆಯ ಆನೆಬಲ ಚಿತ್ರತಂಡ ಒಂದಿಲ್ಲೊಂದು ಹೊಸತನಕ್ಕೆ ಸಾಕ್ಷಿಯಾಗಿ ಎರಡು ಕ್ವಿಂಟಾಲ್ ರಾಗಿಮುದ್ದೆಯನ್ನ ತಯಾರಿಸಿ ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ ಅವರು ಅನಾವರಣ ಮಾಡಿದರು.
ಇದಕ್ಕೂ ಮುನ್ನ ಚಿತ್ರದ ಕಲಾವಿದರು ರಾಗಿ ಭಿಕ್ಷೆ ಬೇಡಿಕೊಂಡು ಜೋಳಿಗೆ ತುಂಬಿಸಿಕೊಂಡು ಬಂಧು, ಹಿರಿಯರಿಂದಲೂ ರಾಗಿಯ ಭಿಕ್ಷೆ ಸ್ವೀಕರಿಸಿ ಅವರ ಆಶೀರ್ವಾದ ಬೇಡುವುದರ ಮೂಲಕ ನೆಲ ಪರಂಪರೆಯನ್ನ ನೆನಪಿಸಿದರು. ಸಿಂಗರಿಸಿದ ಯಡಗೆಯಲ್ಲಿ ರಾಗಿ ಇದ್ದು ಮಧ್ಯದಲ್ಲು ಉತ್ತಾರಾಣಿ ಕಡ್ಡಿ ಮಾವಿನ ಸೊಪ್ಪು ಹೂವಿಂದ ಅಲಂಕಾರಗೊಂಡಿದ್ದ ಮೆರೆದೊಣ್ಣೆಗೆ ಹಾಲು ಬೆಣ್ಣೆ ಹಾಕಿ ಮುಂಗಾರು ಮಳೆ ಖ್ಯಾತಿಯ ನಿರ್ಮಾಪಕರಾದ ಈ ಕೃಷ್ಣಪ್ಪ ಅವರು ಕಾರ್ಯಕ್ರಮವನ್ನ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭವನದಲ್ಲಿ ಕಿಕ್ಕಿರಿದು ನೆರೆದಿದ್ದ ಸಾವಿರಾರು ಜನರು ಹಳೆಯ ರಾಗಿ ಕಣವನ್ನ ನೆನಪಿಸಿಕೊಂಡು ಪುನೀತರಾದರು.
ಆಡಿಯೋ ಬಿಡುಗಡೆಯನ್ನ ರಾಗಿ ಸಂಬಂಧದ ವಿಷಯದೊಂದಿಗೆ ಆಯೋಜನೆ ಮಾಡಿ ಜಿಲ್ಲೆ ಸೇರಿದಂತೆ ನಾಡಿನ ಚಿತ್ರ ಪ್ರೇಮಿಗಳ ಗಮನ ಸೆಳೆಯಿತು. ನಿರ್ಮಾಪಕರಾದ ಎ.ವಿ.ವೇಣುಗೋಪಾಲ್ ಅಡಕಮಾರನಹಳ್ಳಿ ಅವರು ರೈತಾಪಿ ಕುಟುಂಬದಿಂದ ಬಂದಿದ್ದು ಅವರು ಚೊಚ್ಚಲ ಬಾರಿಗೆ ನಿರ್ಮಿಸಿರುವ ಚಿತ್ರ ಇದಾಗಿದೆ.
ಲೂಸಿಯ ಖ್ಯಾತಿಯ ಪೂರ್ಣ ಚಂದ್ರ ತೇಜಸ್ವಿ ಅವರು ಒಟ್ಟು ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದು, ಯೋಗರಾಜ್ ಭಟ್ ಅವರು ಮೆಲೋಡಿ ಹಾಡಿಗೆ ಗೀತ ಸಾಹಿತ್ಯ ಒದಗಿಸಿದ್ದಾರೆ. ರಾಗಿ ಮುದ್ದೆ ಹಾಡಿಗೆ ಡಾ.ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಕತೆ ಚಿತ್ರಕತೆ ಸಂಭಾಷಣೆ ಬರೆದು ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತಿರುವ ಸೂನಗಹಳ್ಳಿ ರಾಜು ಅವರು ಸ್ವತಃ ಮಳವಳ್ಳಿ ಜಾತ್ರೆಲಿ ಅನ್ನುವ ಗೀತೆ ರಚಿಸಿದ್ದಾರೆ. ಜೆ.ಟಿ.ಬೆಟ್ಟೆಗೌಡ ಅವರು ಛಾಯಾಗ್ರಹಣ ಮಾಡಿದ್ದು, ಬಿ.ಎಸ್ ಕೆಂಪರಾಜು ಅವರು ಸಂಕಲನ ಮಾಡಿದ್ದಾರೆ. ರಾಗಿಮುದ್ದೆ ಹಾಡಿಗೆ ಕಲೈ ಮಾಸ್ಟರ್ ನೃತ್ಯ ಸಂಯೋಜಿಸಿದ್ದು, ಸ್ವತಃ ನಿರ್ದೇಶಕರು ಎರಡು ಹಾಡನ್ನ ಥೀಮ್ ಓರಿಯೆಂಟ್ ಶೂಟ್ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಅನೇಕ ನೈಜ ಘಟನೆಗಳನ್ನ ಕತೆ ಹೆಣೆದು ಚಿತ್ರಕತೆ ಮಾಡಿಕೊಂಡಿರುವ ನಿರ್ದೇಶಕರು ರಾಗಿ ಮುದ್ದೆ ಒಂದು ಪಾತ್ರವಾಗಿ ಮೂಡಿ ಬಂದಿದೆ ಎಂದು ತಂಡ ತಿಳಿಸಿದೆ. ವಕೀಲ ಎಮ್.ಎಸ್ ರಘುನಂದನ್ ಸಹ ನಿರ್ಮಾಪಕರಾಗಿದ್ದು ಅಲ್ಟಿಮೇಟ್ ಶಿವು ಒಂದು ಫೈಟನ್ನ ಕಂಫೋಸ್ ಮಾಡಿದ್ದಾರೆ. ನಾಯಕ ನಟರಾಗಿ ಸಾಗರ್, ನಾಯಕಿಯಾಗಿ ರಕ್ಷಿತಾ ಅಭಿನಯಿಸಿದ್ದಾರೆ. ಮಲ್ಲರಾಜು, ಚಿರಂಜೀವಿ, ಕಾಮಿಡಿ ಕೀಲಾಡಿಯ ಮುತ್ತುರಾಜು, ಗೌತಮ್, ಹರೀಶ್ ಶೆಟ್ಟಿ, ಕೀಲಾರ ಉದಯ್, ಶಂಭೂಗೌಡ, ಗೌರಮ್ಮಜ್ಜಿ , ರೂಪ ,ಸುಮಿತ್ರಾ, ಕೊತ್ತತ್ತಿ ಮಂಜುಳಾ, ಪವಿತ್ರ , ಶ್ರೇಷ್ಠ, ದಿವಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಎ.ವಿ.ವೇಣುಗೋಪಾಲ್ ಮಳೆಯಾಶ್ರಿತ ಪ್ರದೇಶದಲ್ಲಿ ಅತೀ ಹೆಚ್ಚು ರಾಗಿ ಬೆಳೆದ ರೈತರಾದ ಬಳ್ಳಕೆರೆ ಮರಿಕಾಳೇಗೌಡ, ಬೊಪ್ಪನಹಳ್ಳಿ ರಂಗಸ್ವಾಮಿ ಮತ್ತು ಮಂಗಲ ಶಂಕರೇಗೌಡ ಅವರಿಗೆ ಪ್ರೋತ್ಸಾಹ ಡನ ನೀಡಿ ಗೌರವಿಸಿದರು.
No Comment! Be the first one.