ಪತ್ರಕರ್ತರಾಗಿ, ಈಗ ಟೀವಿ ನಿರೂಪಕರಾಗಿ ಹೆಸರು ಮಾಡಿರುವವರು. ಇದೇ ಮೊದಲ ಬಾರಿಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಈಗಷ್ಟೇ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ್ ಕಾಣುತ್ತಿರುವ ಸವರ್ಣದೀರ್ಘ ಸಂಧಿ ಸಿನಿಮಾದಲ್ಲಿ ಅಜಿತ್ ಪಾತ್ರ ನಿರ್ವಹಿಸಿದ್ದಾರೆ. ಬೇಡವೆಂದರೂ ಬಿಡದೆ ಬಣ್ಣ ಹಚ್ಚಿಸಿದವರ ಕುರಿತಾಕಿ ಸ್ವತಃ ಅಜಿತ್ ಒಂದಿಷ್ಟು ಮಾತಾಡಿದ್ದಾರೆ…
ನಿರೂಪಣೆ : ಸುಮಾ ವೆಂಕಟೇಶ್
ನನಗೆ ಸಿನಿಮಾ ನಟನಾಗಬೇಕೆನ್ನುವ ಯಾವ ಬಯಕೆಯೂ ಇರಲಿಲ್ಲ. ‘ಒಂದು ಪಾತ್ರ ಇದೆ ಅದಕ್ಕೆ ನೀವೇ ಸೂಟ್ ಆಗೋದು ಅನ್ನೋದು ಇಡೀ ತಂಡದ ಅಭಿಪ್ರಾಯವಾಗಿತ್ತು. ದಯವಿಟ್ಟು ನೀವೇ ಮಾಡ್ಬೇಕು ಅಂತ ಕೇಳಿದಾಗ ನನಗೂ ಸಿನಿಮಾಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂತ, ನಾನು ಸ್ವಲ್ಪ ಟೈಮ್ ಕೊಡಿ ಯೋಚ್ನೆ ಮಾಡಿ ಹೇಳ್ತೀನಿ ಅಂದೆ. ಆದರೆ ಅವರು ಬಿಡಲಿಲ್ಲ, ಹಠಕ್ಕೆ ಬಿದ್ದರು. ಕಡೆಗೆ ನಾನೂ ಒಪ್ಪಿದೆ.

ನನಗೆ ಈ ಟೀಮ್ನಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿ ಕೊಡ್ತು. ಇಡೀ ತಂಡ ಸಿನಿಮಾ, ಕಥೆ, ಶಾಟ್ಸ್ಗಳನ್ನು ಒಂಥರಾ ಆವಾಹಿಸಿಕೊಂಡಂತೆ ಕೆಲಸ ಮಾಡ್ತಿದ್ರು. ಮೊಟ್ಟ ಮೊದಲನೇ ದಿನಶೂಟಿಂಗ್ ಸ್ಪಾಟ್ನಲ್ಲಿ ‘ಒಂದು ಸಿನಿಮಾ ತೆಗೆಯುವಾಗ ಏನೆಲ್ಲಾ ತಯಾರಿ ಮಾಡಿಕೊಂಡಿರ್ತಾರೆ ಅನ್ನೋದನ್ನ ನೋಡಿದಾಗ ನನಗೆ ಆಶ್ಚರ್ಯವಾಯಿತು. ಇನ್ನೇನು ಶೂಟಿಂಗ್ ಶುರುವಾಗ್ತಿದೆ ಅನ್ನೋವಾಗ ಸಿದ್ಧಗಂಗಾ ಶ್ರೀಗಳು ಸೀರಿಯಸ್ ಅನ್ನೋ ವಿಚಾರ ಗೊತ್ತಾಯ್ತು. ನನಗೆ ಮೇಲಿಂದ ಮೇಲೆ ಫೋನ್, ಮೆಸೇಜ್ಗಳು ಬರೋಕೆ ಶುರುವಾಗಿತ್ತು. ನನ್ನ ಸಲುವಾಗಿ ಇಡೀ ಚಿತ್ರೀಕರಣವನ್ನು ಅವತ್ತು ಕ್ಯಾನ್ಸಲ್ ಮಾಡಬೇಕಾಗಿ ಬಂತು. ಅದಕ್ಕೆ ಈಗ್ಲೂ ಸಹ ನಾನು ಕ್ಷಮೆ ಕೋರುತ್ತೇನೆ. ಸ್ಟುಡಿಯೋ, ಕ್ಯಾಮೆರಾ, ಅಡುಗೆ ಎಷ್ಟೆಲ್ಲಾ ತಯಾರಿ ಮಾಡಿಕೊಂಡಿರ್ತಾರೆ ಒಂದು ಸಿನಿಮಾಗೆ ಎಲ್ಲವೂ ನನ್ನ ಕಾರಣಕ್ಕೆ ವ್ಯರ್ಥವಾಯಿತಲ್ಲಾ ಅನ್ನೋ ಬೇಸರವಷ್ಟೇ.

ಯೋಗರಾಜ್ ಭಟ್, ಮನೋಮೂರ್ತಿ, ಜಯಂತ್ ಕಾಯ್ಕಿಣಿ ಹೇಗಂದ್ರೆ, ಇಡೀ ದಿನ ನಾನು ನ್ಯೂಸ್ ಚಾನಲ್ನಲ್ಲಿ ಪೊಲಿಟಿಕಲ್, ಕ್ರೈಮ್ ಅಂತ ಮುಳುಗಿ ಹೋಗಿರ್ತೀನಿ. ಸಂಜೆ ಕೆಲಸ ಮುಗಿದು ಇನ್ನೇನು ಮನೆಗೆ ಹೋಗೋಕೆ ಕಾರ್ ಹತ್ತುವಾಗ ಬಾರಯ್ಯ ಇಲ್ಲೊಂದು ಬೇರೆ ಪ್ರಪಂಚ ಇದೆ ಅಂತ ಕರ್ಕೊಂಡು ಬರ್ತಾರೆ. ಅದಕ್ಕೋಸ್ಕರ ಇವರಿಗೆ ಥ್ಯಾಂಕ್ಸ್ ಹೇಳ್ಬೇಕು. ಮೊನ್ನೆ ಒಮ್ಮೆ ರಿಂಗ್ ರೋಡ್ನಲ್ಲಿ ಯೋಗರಾಜ್ ಭಟ್ಟರ ಹಾಡು ಕೇಳ್ತಾ ಡ್ರೈವ್ ಮಾಡ್ತಿದ್ದೆ. “ಹುಟ್ಟಿದ ಊರನ್ನು ಬಿಟ್ಟು ಬಂದಾ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ… ಈ ಹಾಡನ್ನ ಮೂರು ನಾಲ್ಕು ಬಾರಿ ಕೇಳಿ ಕೇಳಿ ಗೊರಗುಂಟೆ ಪಾಳ್ಯ ಕ್ರಾಸ್ಗೆ ಬಂದು ನಿಂತ್ಕೊಂಡು ಲೆಫ್ಟ್ ಹೋಗ್ಲಾ ರೈಟ್ ಹೋಗ್ಲಾ ಅಂತ ಯೋಚ್ನೆ ಮಾಡ್ತಿದ್ದೆ. ಯಾಕಂದ್ರೆ ಒಂದು ಕಡೆ ನಾನು ಈಗಿರುವ ಮನೆಗೆ ದಾರಿ ಮತ್ತೊಂದು ಕಡೆ ಹೊರಟರೆ ಸೀದಾ ನನ್ನ ಊರು!

ನಮ್ಮ ಉಳಿದೆಲ್ಲ ಜಂಜಾಟಗಳ ಮಧ್ಯೆ ಒಂದು ಭಾವನಾತ್ಮಕ ಪ್ರಪಂಚ ಒಂದಿದೆ. ನಿಜವಾಗ್ಲೂ ಅದು ಖುಷಿ ಕೊಡವಂತ ಪ್ರಪಂಚ. ಅಂತಹ ಜಗತ್ತಿನೆಡೆಗೆ ಕರ್ಕೊಂಡು ಹೋಗುವಂತವರು ಮತ್ತು ಇಡೀ ದಿನದ ಜಂಜಾಟಗಳಿಂದ ನಮ್ಮನ್ನ ಹೊರಗೆ ಎಳೆದು ತರಬಲ್ಲ ಶಕ್ತಿ ಇರುವವರು ಇವರು. ಅವರಿಗೆ ನನ್ನ ಧನ್ಯವಾದಗಳನ್ನ ಅರ್ಪಿಸುತ್ತೇನೆ. ಸಿನಿಮಾದ ಕಥೆ ನನಗೆ ತುಂಬಾ ಇಂಪ್ರೆಸ್ ಮಾಡ್ತು. ತುಂಬಾ ಡಿಫರೆಂಟ್ ಆದ ಕಥೆ. ಸಂಧಿ ಸಮಾಸಗಳ ಬಗ್ಗೆ ನಾವು ಪ್ರೈಮರಿ ಸ್ಕೂಲ್ನಲ್ಲಿ ಕೇಳಿದ್ವಿ. ಮತ್ತೆ ಅದನ್ನ ಇಲ್ಲೇ ಕೇಳಿದ್ದು. ಆ ಕಾರಣಕ್ಕಾಗಿ ತುಂಬಾ ಖುಷಿ ಕೊಡ್ತು.

ವೀರೇಂದ್ರ ಶೆಟ್ಟಿ ಅವರ ಒಂದು ಪೆಕ್ಯುಲಿಯರ್ ಕ್ಯಾರೆಕ್ಟರ್ ಅಂದರೆ ಯಾವುದೇ ಒಂದು ಕೆಲ್ಸನೇ ಆಗ್ಲಿ ಸರಿ ಬಿಡಿ ಇದನ್ನ ಇನ್ನೊಮ್ಮೆ ಮಾಡೋಣ ಅಂತ ಹೇಳೋಲ್ಲ. ಅವರು ಪರ್ಫೆಕ್ಷನಿಸ್ಟ್. ಈ ಪರ್ಫೆಕ್ಷನ್ ಇದೆಯಲ್ಲಾ ಅದು ನ್ಯೂಸ್ ಚಾನೆಲ್ಗೆ ಬಹಳ ಹೊಸತು. ನಾವು ಒಂಥರಾ ಕಾಲದ ವಿರುದ್ಧ ರೇಸ್ಗೆ ಬಿದ್ದ ಹಾಗೆ ಹೋಗ್ತಿರ್ತೀವಿ, ಈ ಕ್ಷಣ ಆಯ್ತ ಮುಂದಿನ ಕ್ಷಣ ಏನು ಅಂತ…. ಆದರೆ ಅವರು ಹಾಗಲ್ಲ, ಯಾವುದು ಯಾವ ರೀತಿ ಬರಬೇಕು ಅಂತ ಎಕ್ಸ್ಪೆಕ್ಟೇಷನ್ ಇರುತ್ತೋ ಅದು ಅದೇ ತರ ಬರೋ ತನಕ ಬಿಡೋ ಮಾತಿಲ್ಲ. ಇಡೀ ತಂಡವನ್ನ ಒಮ್ಮೊಮ್ಮೆ ಬೈತಾರೆ, ಒಮ್ಮೊಮ್ಮೆ ಓಲೈಸ್ತಾರೆ, ಒಮ್ಮೊಮ್ಮೆ ಬೆಣ್ಣೆ ಹಚ್ತಾ ಕೆಲಸ ಮಾಡ್ತಾರೆ.

ಇದು ಹೊಸದಾದ ಮತ್ತು ಅತ್ಯಂತ ಅದ್ಭುತವಾದ ಅನುಭವ. ಇಡೀ ತಂಡಕ್ಕೆ ನಾನು ಆಲ್ ದಿ ಬೆಸ್ಟ್ ಹೇಳ್ತೇನೆ. ಇದೇ ತರಹ ಒಳ್ಳೊಳ್ಳೆ ಸಬ್ಜೆಕ್ಟ್ ಕನ್ನಡಕ್ಕೆ ಬರಲಿ ಎಂದು ಆಶಿಸುತ್ತೇನೆ. ಈಗಾಗಲೇ ಸಿನಿಮಾ ರಿಲೀಸ್ ಆಗಿದೆ. ದಯವಿಟ್ಟು ಥೇಟರಿಗೆ ಹೋಗಿ ನೋಡಿ…











































