ನಟಿ ರಚಿತಾರಾಮ್ ಮನೆಯಲ್ಲಿ ಮದುವೆಯ ಸಂಭ್ರಮ. ಬರಲಿರುವ ಡಿಸೆಂಬರ್ ೬ಕ್ಕೆ ನಡೆಯಲಿರುವ ಮದುವೆ ಕೆಲಸ ಕಾರ್ಯಗಳಲ್ಲಿ ರಚಿತಾ ಫುಲ್ ಬ್ಯುಸಿಯಾಗಿದ್ದಾರೆ ಅನ್ನೋದೇ ಎಲ್ಲೆಲ್ಲೂ ಸುದ್ದಿ. ರಚಿತಾ ಅಕ್ಕ ನಿತ್ಯಾರಾಮ್ಗೆ ಕಂಕಣ ಭಾಗ್ಯ ಕೂಡಿಬಂದಿದೆ. ಆದರೆ ಇದು ಆಕೆಯ ಪಾಲಿಗೆ ಎರಡನೇ ಬಾರಿಗೆ ಅನ್ನೋದು ಸಾಕಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಹಿಂದೆಯೇ ಒಮ್ಮೆ ನಿತ್ಯಾಗೆ ಮದುವೆಯಾಗಿತ್ತು!
ಹಾಗೆ ನೋಡಿದರೆ ರಚಿತಾರಾಮ್ ಗಿಂತಲೂ ಮೊದಲು ಇಂಡಸ್ಟ್ರಿಗೆ ಕಾಲಿಟ್ಟವರು ನಿತ್ಯಾ. ಇವರ ತಂದೆ ರಾಮಣ್ಣ ಮೂಲತಃ ನೃತ್ಯ ಗುರು. ಡ್ಯಾನ್ಸ್ ಕ್ಲಾಸ್ ನಡೆಸಿಕೊಂಡಿದ್ದ ರಾಮಣ್ಣ ಶ್ರೀನಗರದ ಜಲಗೇರಮ್ಮನ ದೇವಸ್ಥಾನದ ಎದುರಲ್ಲೇ ಮದರ್ ಥೆರೇಸಾ ಸ್ಕೂಲ್ ಎನ್ನುವ ಸಣ್ಣದೊಂದು ಶಾಲೆಯನ್ನೂ ನಡೆಸುತ್ತಿದ್ದಾರೆ. ಈ ಶಾಲೆಯ ಒಡೆತನವನ್ನು ಸದ್ಯ ನಿತ್ಯಾಗೆ ಬರೆದುಕೊಟ್ಟಿದ್ದಾರಂತೆ. ಇವತ್ತು ರಚಿತಾರಾಮ್ ಏನಾದರೂ ಕನ್ನಡ ಚಿತ್ರರಂಗದ ಸ್ಟಾರ್ ನಟಿ ಅನಿಸಿಕೊಂಡಿದ್ದಾರೆ ಅಂದರೆ ಅದಕ್ಕೆ ಮೂಲ ಕಾರಣ ಆಕೆಯ ಅಕ್ಕಾ ನಿತ್ಯಾ.
ತಮಿಳಿನಲ್ಲಿ ನಂದಿನಿ ಅನ್ನೋ ಧಾರಾವಾಹಿ ಬಂದಿತ್ತು. ನಟಿ ಖುಷ್ಬೂ ಪ್ರಧಾನ ಭೂಮಿಕೆಯಲ್ಲಿದ್ದ ಆ ಧಾರಾವಾಹಿಯ ಲೀಡ್ ರೋಲಿನಲ್ಲಿ ನಟಿಸಿದ್ದಿದ್ದು ಇದೇ ನಿತ್ಯಾರಾಮ್. ಆ ಧಾರಾವಾಹಿ ತಮಿಳಿನಲ್ಲಿ ಸೂಪರ್ ಹಿಟ್ ಆಗಿತ್ತು. ಅದೇ ಧಾರಾವಾಹಿಯನ್ನು ಕನ್ನಡಕ್ಕೆ ರಿಮೇಕ್ ಮಾಡಿ ನಿರ್ಮಿಸಿದ್ದವರು ನಟ ರಮೇಶ್ ಅರವಿಂದ್. ಕನ್ನಡದಲ್ಲಿ ಕೂಡಾ ನಂದಿನಿ ಧಾರಾವಾಹಿ ಅದೇ ಮಟ್ಟಿಗೆ ಹೆಸರುವಾಸಿಯಾಗಿ ಜನ ಅಪಾರವಾಗಿ ಮೆಚ್ಚಿದ್ದರು. ಈ ಧಾರಾವಾಹಿಯಿಂದ ನಿತ್ಯ ಮತ್ತಷ್ಟು ಸೀರಿಯಲ್ಲುಗಳಿಗೆ ಬುಕ್ ಆದರು. ಅದೇ ವೇಳೆಗೆ ಜ಼ೀ ಟೀವಿಯಲ್ಲಿ ನಿರ್ಮಾಣಗೊಂಡ ಅರಸಿ ಧಾರಾವಾಹಿಯ ನಾಯಕಿಯ ಪಾತ್ರಕ್ಕೆ ಹುಡುಕಾಟ ನಡೆದಿತ್ತು. ತುರುವೇಕೆರೆ ಪ್ರಸಾದ್ ಎನ್ನುವವರು ನಿರ್ದೇಶಕ ಅರವಿಂದ್ ಕೌಶಿಕ್ ಬಳಿ ಬಂದು ‘ನಿತ್ಯಾರಾಮ್ ಅವರ ಸಹೋದರಿ ಇದ್ದಾಳೆ. ಬೇಕಿದ್ದರೆ ನೋಡಿ ಎಂದಿದ್ದರು. ಆಡಿಷನ್’ಗೆ ಕೆರೆಸಿದಾಗ ರಚಿತಾ ಸೈಕಲ್ ಹೊಡೆದಿದ್ದು ನೋಡಿ ‘ಈ ಹುಡುಗಿ ಬೇಡ ಅನ್ನೋದೇ ಬಹುತೇಕರ ಅಭಿಪ್ರಾಯವಾಗಿತ್ತು.
ಆದರೆ ಅರವಿಂದ್ “ಕೌಶಿಕ್ ಈ ಹುಡುಗೀನೇ ಸರಿ. ನನ್ನ ಪಾತ್ರಕ್ಕೆ ಒಂಚೂರು ಗ್ಲಾಮರ್ ಅಪ್ರೋಚ್ ಬೇಕು. ಹೊಸಾ ಮುಖದ ಅಗತ್ಯವಿದೆ. ಈ ಹುಡುಗಿಯಲ್ಲಿ ಅಂಥದ್ದೇನೋ ಪವರ್ ಇದೆ ಅಂದಿದ್ದರು. ಅದಕ್ಕೆ ತಕ್ಕಂತೆ ಆ ಧಾರಾವಾಹಿಯ ನಿರ್ಮಾಪಕ ಗಣಪತಿ ಭಟ್ ಕೂಡಾ ಈ ಹುಡುಗಿನೇ ಇರಲಿ ಅಂತಾ ಹೇಳಿದ್ದರು. ಅರವಿಂದ್ ಕೌಶಿಕ್ ಅವರಲ್ಲಿ ಅದೇನು ದಿವ್ಯಜ್ಞಾನವಿದೆಯೋ ಗೊತ್ತಿಲ್ಲ. ಅವರದ್ದೊಂದು ರೀತಿ ಮ್ಯಾಜಿಕಲ್ ಟಚ್. ಅರ್ಜುನ್ ಜನ್ಯಾ, ಯಶ್, ಅನೀಶ್ ತೇಜೇಶ್ವರ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಬಾಲು ನಾಗೇಂದ್ರ ಮೊದಲುಗೊಂಡು ರಚಿತಾರಾಮ್ ತನಕ ಅದೆಷ್ಟೋ ಜನ ಪ್ರತಿಭಾವಂತರು ಅರವಿಂದ್ ಕೌಶಿಕ್ ಗರಡಿಯಿಂದೆದ್ದುಬಂದವರು. ಹಾಗೆ ಶುರುವಾದ ರಚಿತಾಳ ನಟನೆ ಮುಂದುವರೆಯುತ್ತಾ ಸಾಗಿತ್ತು. ನೋಡ ನೋಡುತ್ತಿದ್ದಂತೇ ನಟನೆಯಲ್ಲಿ ಪಳಗಿದ ರಚಿತಾ ಎಲ್ಲರೂ ಅಚ್ಚರಿಗೊಳ್ಳುವ ರೇಂಜಿಗೆ ಪಾತ್ರ ನಿರ್ವಹಿಸಿದರು. ಇದರ ಪ್ರತಿಫಲವೆನ್ನುವಂತೆ ಧಾರಾವಾಹಿ ಟೆಲಿಕಾಸ್ಟ್ ಆಗುತ್ತಿದ್ದ ಟೈಮಲ್ಲೇ ರಚಿತಾಗೆ ನಾಲ್ಕೈದು ಸಿನಿಮಾ ಆಫರ್ಗಳು ಬಂದವು. ರಚಿತಾ ಅದೊಂದು ವಿಚಾರದಲ್ಲಿ ಪಕ್ಕಾ. ಅದೇನೆಂದರೆ ಒಮ್ಮೆ ಒಪ್ಪಿಕೊಂಡ ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ, ಮತ್ತೊಂದು ಕಡೆ ಜಂಪ್ ಮಾಡುವ ಜಾಯಮಾನ ಅವರದ್ದಲ್ಲ. ಹೀಗಾಗಿ ಈ ಧಾರಾವಾಹಿ ಮುಗಿದ ನಂತರವಷ್ಟೇ ನಾನು ಬೇರೆ ಪ್ರಾಜೆಕ್ಟ್ ಒಪ್ಪೋದು ಎಂದಿದ್ದರು. ಹೀಗಾಗಿ ಅರಸಿ ಮುಕ್ತಾಯಗೊಂಡಮೇಲಷ್ಟೇ ರಚಿತಾ ಬುಲ್ ಬುಲ್ ಕಡೆ ಹೊರಟುನಿಂತಿದ್ದು; ಕನ್ನಡ ಚಿತ್ರರಂಗದಲ್ಲಿ ಯಾರೂ ನಿರೀಕ್ಷೆಯೂ ಮಾಡಿರದ ಲೆವೆಲ್ಲಿಗೆ ಬೆಳೆದುನಿಂತಿದ್ದು.
ಇತ್ತ ರಚಿತಾ ಹೀರೋಯಿನ್ನಾಗಿ ಹೆಸರು ಮಾಡುವ ಹೊತ್ತಿಗೇ ಅತ್ತ ನಿತ್ಯಾ ಕೂಡಾ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದರು. ಒಂದಿಷ್ಟು ವರ್ಷಗಳ ಕಾಲ ಕಾದಿದ್ದು ಮದುವೆಯಾಗಬಹುದಿತ್ತೇನೋ. ಸೀರಿಯಲ್ ಜಗತ್ತಿನ ಸ್ಟಾರ್ ಅನ್ನಿಸಿಕೊಂಡಿದ್ದಾಗಲೇ ಅದೊಂದು ದಿನ ನಿತ್ಯಾ ಮದುವೆಯ ವಿಚಾರ ಹೊರಬಿದ್ದಿತ್ತು. ೨೦೧೪ರಲ್ಲಿ ವಿನೋದ್ ಗೌಡನೊಂದಿಗೆ ನಿತ್ಯಾಳ ಮದುವೆ ಜೋರಾಗೇ ನಡೆಯಿತು. ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಇರುವ ಶ್ರೀಹರಿ ಕಲ್ಯಾಣಮಂಟಪದಲ್ಲಿ ಮದುವೆ ನೆರವೇರಿದರೆ, ಎಂಟಿಆರ್ ಎದುರಿಗಿರುವ ಧಮಾಲ್ ನಲ್ಲಿ ಬೀಗರೂಟವೂ ಜರುಗಿತು. ಮದುವೆಯ ನಂತರವೇ ಅರು ಗೌಡ ಹೀರೋ ಆಗಿ ನಟಿಸಿದ್ದ ‘ಮುದ್ದು ಮನಸೇ ಎನ್ನುವ ಸಿನಿಮಾದಲ್ಲಿ ನಿತ್ಯಾ ನಾಯಕಿಯಾಗಿದ್ದರು. ಮದುವೆಯಾದ ಹೀರೋಯಿನ್ನಿಗೆ ಮಾರ್ಕೆಟ್ಟು ಕುದುರೋದಿಲ್ಲ ಅನ್ನೋ ತಪ್ಪು ಕಲ್ಪನೆ ಚಿತ್ರರಂಗದಲ್ಲಿದೆ. ಈ ಕಾರಣಕ್ಕೋ ಏನೋ ನಿತ್ಯಾ ಮದುವೆಯಾಗಿದ್ದಾರೆ ಅನ್ನೋ ವಿಚಾರವನ್ನು ಉದ್ದೇಶಪೂರ್ವಕವಾಗಿಯೇ ಮೀಡಿಯಾಗಳ ಮುಂದೆ ಮುಚ್ಚಿಟ್ಟರು. ಆದರೂ ಮುದ್ದು ಮನಸೇ ನಂತರ ನಿತ್ಯಾಗೆ ಸಿನಿಮಾಗಳಲ್ಲಿ ಅವಕಾಶ ಸಿಗಲೇಇಲ್ಲ. ಅಥವಾ ಗಂಡನ ಕಾರಣಕ್ಕೆ ಆಕೆಯೇ ಒಪ್ಪದೇ ಹೋಗಿರಬಹುದು!
ಇಷ್ಟೆಲ್ಲಾ ಆಗಿ ನಿತ್ಯಾರಾಮ್ ಮೊದಲ ಮದುವೆಯ ಬಂಧ ಎಲ್ಲ ತೀರಿಯಲ್ಲೂ ಸರಿ ಹೋಗಿಲ್ಲ ಅನ್ನೋ ವಿಚಾರ ಗೊತ್ತಾಗಿರೋದೇ ಆಕೆಯ ಎರಡನೇ ಮದುವೆಯ ಸುದ್ದಿ ಹೊರಬಿದ್ದಾಗಲೇ. ತೀರಾ ಮನಸ್ಸಿಗೆ ಒಪ್ಪದೇ ಬಾಳ್ವೆ ನಡೆಸೋದಕ್ಕಿಂತಾ ಒಲ್ಲೆ ಅಂತಾ ಒದ್ದು ನಡೆಯೋದು ವಾಸಿ. ಆದರೆ ನಿತ್ಯಾರ ಮುಂದಿನ ನಿರ್ಧಾರ, ಆಯ್ಕೆಗಳು ಕರೆಕ್ಟಾಗಿದ್ದರೆ ಸರಿ. ಈಗ ನಿತ್ಯಾ ಮದುವೆಯಾಗುತ್ತಿರುವ ಹುಡುಗ ಆಸ್ಟ್ರೇಲಿಯಾದಲ್ಲಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಪ್ರತಿಭಾವಂತ, ಸಭ್ಯ ಹುಡುಗಿ ನಿತ್ಯಾಳ ಬಾಳು ಬಂಗಾರವಾಗಲಿ….
No Comment! Be the first one.