ಈ ವರ್ಷದ ಹಿಟ್ ಚಿತ್ರಗಳಲ್ಲಿ ಪ್ರಮುಖವಾದ ಸಿನಿಮಾ ವಿನೋದ್ ಪ್ರಭಾಕರ್ ಅಭಿನಯದ ರಗಡ್. ಈ ಚಿತ್ರದ ನಿರ್ದೇಶಕರಾಗಿದ್ದ ಮಹೇಶ್ ಗೌಡರ ಅದೆಷ್ಟೋ ವರ್ಷಗಳ ಕನಸು, ಪರಿಶ್ರಮ ಮತ್ತು ಎರಡು ದಶಕಗಳ ಅನುಭವವೂ ಈ ಗೆಲುವಿನ ಹಿಂದಿತ್ತು. ಈಗ ಮಹೇಶ್ ಗೌಡ್ರು ಗೋಲ್ಡನ್ ಸ್ಟಾರ್ ಗಣೇಶ್ ಅವರಿಗಾಗಿ ಸಿನಿಮಾ ನಿರ್ದೇಶಿಸಲಿದ್ದಾರೆ. ಒಂದು ಸಿನಿಮಾ ಮುಗಿಸಿದ ಕೂಡಲೇ ಅದೇ ನಿರ್ಮಾಪಕರೊಂದಿಗೆ ಸಿನಿಮಾ ಮಾಡುವುದಿದೆಯಲ್ಲಾ? ಅದು ಎಲ್ಲವೂ ಸರಿಯಿರುವ ಟೀಮಿನಲ್ಲಿ ಮಾತ್ರ ಸಾಧ್ಯ. ಮಹೇಶ್ ಗೌಡ ಮತ್ತು ನಿರ್ಮಾಪಕ ಅರುಣ್ ಕುಮಾರ್ ವಿಚಾರದಲ್ಲಿ ಅದು ನಿಜವಾಗಿದೆ.

ಕೃಪಾಳು ಎಂಟರ್ಟೈನ್ಮೆಂಟ್ಸ್ ನ ರಾಮ್ ಗೋಪಾಲ್ ಹಾಗೂ ಅಮ್ಮ ಸಿನಿ ಕ್ರಿಯೇಷನ್ಸ್ ನ ಅರುಣ್ ಕುಮಾರ್ ಎ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರವನ್ನು ಮಹೇಶ್ ನಿರ್ದೇಶಿಸುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ತೀರಾ ದೊಡ್ಡ ಮಟ್ಟದ ಕಲಾವಿದರ ಬಳಗವಿದೆ. ನಿರ್ದೇಶಕ ಮಹೇಶ್ ಗೌಡ್ರು ಗಣೇಶ್ ಅವರ ಮುಂಗಾರು ಮಳೆ ಸಿನಿಮಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದವರು. ಮಹೇಶ್ ಗೌಡ ಅವರ ಉತ್ತಮ ಕೆಲಸ ಮತ್ತು ಒಳ್ಳೆಯ ಗುಣ ನೋಡಿ ನಿರ್ಮಾಪಕರು ಮತ್ತೊಂದು ಚಿತ್ರವನ್ನು ಕೊಟ್ಟಿದ್ದಾರೆ.

ಆ ಮೂಲಕ ಈಗ ಎರಡನೇ ಪ್ರಯತ್ನವಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗಾಗಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಯೋಗರಾಜ ಭಟ್ಟರ ಗಾಳಿಪಟ-2 ಮುಗಿಯುತ್ತಿದ್ದಂತೇ ಮಹೇಶ್ ಅವರ ಸಿನಿಮಾ ಸೆಟ್ಟೇರಲಿದೆ. ಈ ಚಿತ್ರದ ಶೀರ್ಷಿಕೆಯಿಂದ ಹಿಡಿದು ಸಾಕಷ್ಟು ವಿಶೇಷತೆಗಳಿದ್ದು, ಅವೆಲ್ಲದರ ಮಾಹಿತಿ ಹಂತ ಹಂತವಾಗಿ ಹೊರಬೀಳಲಿದೆ. ಈ ಚಿತ್ರ ಕೂಡಾ ಮಹೇಶ್ ಮತ್ತು ಅವರ ತಂಡದ ಕೈ ಹಿಡಿಯಲಿ ಅಂತಾ ಆಶಿಸೋಣ.











































