ಮನೆ ಮಾರಾಟವನ್ನು ನೋಡಿ ಮೆಚ್ಚಿದ ಕಿಚ್ಚ!

Picture of Cinibuzz

Cinibuzz

Bureau Report

ಕೆಲವೊಂದು ಗೆಲುವು ಎಲ್ಲರಿಗೂ ಮುಖ್ಯವಾಗಿರುತ್ತದೆ. ಎರಡು ವಾರಕ್ಕೆ ಮುನ್ನ ರಿಲೀಸಾಗಿದ್ದ ‘ಮನೆ ಮಾರಾಟಕ್ಕಿದೆ ಎನ್ನುವ ಸಿನಿಮಾದ ಅಪ್ಪಟ ಗೆಲುವು ಇಡೀ ಚಿತ್ರತಂಡಕ್ಕೆ ಸಂತಸದ ಟಾನಿಕ್ ಆಗಿದೆ. ಈ ಚಿತ್ರವನ್ನು ನೋಡಿದ ಎಲ್ಲರೂ ಸಖತ್ತಾಗಿದೆ ಎನ್ನುತ್ತಿದ್ದಾರೆ. ಈಗ ಕಿಚ್ಚ ಸುದೀಪ್ ಕೂಡಾ ತಮ್ಮ ಮನೆಯಲ್ಲೇ ಮನೆ ಮಾರಾಟಕ್ಕಿದೆ ಚಿತ್ರದ ಪ್ರದರ್ಶನ ಹಾಕಿಸಿಕೊಂಡು ನೋಡಿ ಅಪಾರವಾಗಿ ಮೆಚ್ಚಿದ್ದಾರೆ. “ಕನ್ನಡ ಚಿತ್ರರಂಗದಲ್ಲಿ ಎಣಿಕೆಗೂ ಸಿಗಲಾರದಷ್ಟು ಸಿನಿಮಾಗಳು ಬರುತ್ತಿವೆ. ಆದರೆ ಅವೆಲ್ಲದರ ನಡುವೆ ಮನೆ ಮಾರಾಟಕ್ಕಿದೆ ಥರದ ಮನರಂಜನಾ ಸಿನಿಮಾವೊಂದು ಎಲ್ಲರನ್ನಊ ಸೆಳೆದಿದೆ. ಈ ಮಟ್ಟಕ್ಕೆ ನಗುತ್ತಾ ಸಿನಿಮಾ ನೋಡಿದ್ದು ನನ್ನ ಪಾಲಿಗೂ ಅಪರೂಪ. ಇಂಥಾ ಸಿನಿಮಾ ಮಾಡಿದ ತಂಡದ ಎಲ್ಲರಿಗೂ ಒಳ್ಳೇದಾಗಲಿ ಎಂದು ಕಿಚ್ಚ ಆಶಿಸಿದ್ದಾರೆ.

ಶಿಶಿರ ಸಿನಿಮಾದ ಮೂಲಕ ನಿರ್ದೇಶಕರಾದವರು ಮಂಜು ಸ್ವರಾಜ್, ಆ ನಂತರ ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಶ್ರಾವಣಿ ಸುಬ್ರಮಣ್ಯ, ಪಟಾಕಿ ಚಿತ್ರಗಳನ್ನು ಕೂಡಾ ನಿರ್ದೇಶಿಸಿದ್ದರು. ಹನಿಮೂನ್ ಎಕ್ಸ್ ಪ್ರೆಸ್ ಚಿತ್ರದ ಮೂಲಕ ನಿರ್ಮಾಣಕ್ಕಿಳಿದು ಜೋಶ್, ಸವಿಸವಿ ನೆನಪು, ತೆನಾಲಿರಾಮ, ಎಂದೆಂದಿಗೂ, ರಿಕ್ಕಿ, ಪಟಾಕಿ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕ ಎನಿಸಿಕೊಂಡವರು ಎಸ್.ವಿ. ಬಾಬು. ಎಸ್.ವಿ. ಪ್ರೊಡಕ್ಷನ್ ಅಂದರೆ ಅಲ್ಲಿ ಶ್ರೀಮಂತಿಕೆ, ಅದ್ಭುತ ತಾಂತ್ರಿಕ ವರ್ಗ, ಕಲಾವಿದರ ಬಳಗ ಎಲ್ಲವೂ ಇರುತ್ತದೆ ಅನ್ನೋದು ಇಡೀ ಇಂಡಸ್ಟ್ರಿ ಮೀರಿ ಸಾಮಾನ್ಯ ಜನರಿಗೂ ಗೊತ್ತಾಗುವಂತೆ ಮಾಡಿದ ನಿರ್ಮಾಪಕರಿವರು!

ಈಗ ಪಟಾಕಿ ಚಿತ್ರದ ಗೆಲುವಿನ ನಂತರ ಮತ್ತದೇ ನಿರ್ದೇಶಕ ಮತ್ತು ನಿರ್ಮಾಪಕರು ಒಂದಾಗಿದ್ದಾರೆ. ಮನೆ ಮಾರಾಟಕ್ಕಿದೆ ಎನ್ನುವ ಔಟ್ ಅಂಡ್ ಔಟ್ ಕಾಮಿಡಿ ಜಾನರಿನ ಚಿತ್ರವನ್ನು ತಯಾರು ಮಾಡಿದ್ದಾರೆ. ಶೀರ್ಷಿಕೆಯ ಜೊತೆಗೆ ದೆವ್ವಗಳೇ ಎಚ್ಚರಿಕೆ ಅಂತಾ ಟ್ಯಾಗ್ ಲೈನು ಕೊಟ್ಟಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಸಿನಿಮಾ ತೆರೆಗೆ ಬಂದ ಮೇಲೆ ಎಲ್ಲ ವಯೋಮಾನದ ಪ್ರೇಕ್ಷಕರನ್ನು ಈ ಚಿತ್ರ ಸೆಳೆಯುತ್ತಿದೆ. ಪ್ರತಿಫಲವಾಗಿ ಹತ್ತಾರು ಸಿನಿಮಾಗಳು ಥಿಯೇಟರಿಗೇ ನುಗ್ಗುತ್ತಿದ್ದರೂ ಮನೆ ಮಾರಾಟಕ್ಕಿದೆ ಮಾತ್ರ ಜಗ್ಗದೇ ನಿಂತಿದೆ!

ಈ ಚಿತ್ರದಿಂದ ನಿರ್ದೇಶಕ ಮಂಜು ಸ್ವರಾಜ್, ಸಂಗೀತ ನಿರ್ದೇಶಕ ಅಭಿಮನ್, ಛಾಯಾಗ್ರಾಹಕ ಸುರೇಶ್ ಬಾಬು, ನಿರ್ಮಾಪಕ ಎಸ್.ವಿ. ಬಾಬು ಮಾತ್ರವಲ್ಲದೆ, ಕಾರುಣ್ಯಾ ರಾಮ್, ರವಿಶಂಕರ್ ಗೌಡ ಮುಂತಾದ ನಟರಿಗೆ ಕೂಡಾ ಬ್ರೇಕ್ ಸಿಕ್ಕಂತಾಗಿದೆ.

ಇನ್ನಷ್ಟು ಓದಿರಿ

Scroll to Top