ರಣಹೇಡಿ ಬಗ್ಗೆ ನಾಯಕ ನಟ ಕರ್ಣ ಕುಮಾರ್ ಹೀಗಂದ್ರು!

Picture of Cinibuzz

Cinibuzz

Bureau Report

ಇಷ್ಟು ದಿನ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಎಲ್ಲರ ಗಮನ ಸೆಳೆದವರು ನಟ ಕರ್ಣ ಕುಮಾರ್. ಈಗ ರಣಹೇಡಿ ಸಿನಿಮಾದ ಮೂಲಕ ಹೀರೋ ಕೂಡಾ ಆಗಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾದಲ್ಲೇ ಈ ನಾಡಿನ ಪ್ರಾಣದಂತಾ ರೈತನ ಪಾತ್ರದಲ್ಲಿ ಕರ್ಣಕುಮಾರ್ ನಟಿಸಿದ್ದಾರೆ. ಈ ಚಿತ್ರದ ಕುರಿತು ಅವರೊಂದಿಗೆ ನಡೆಸಿದ ಮಾತುಕತೆಯ ಸಾರಾಂಶ ಹೀಗಿದೆ…

  • ನಿರೂಪಣೆ : ಸುಮ ಜಿ.

ರಣಹೇಡಿಯಲ್ಲಿ ನಾಯಕನಾಗಿದ್ದು ಹೇಗೆ?

ರಣಹೇಡಿ ಸಿನಿಮಾದಲ್ಲಿ ಅಭಿನಯಿಸುವದಕ್ಕೆ ಅವಕಾಶ ಸಿಕ್ಕಿದ್ದು ಒಂದು ಮಿರಾಕಲ್ ಅಂತಲೇ ಹೇಳಬಹುದು. ನನಗೆ ಈ ತರಹದ ಒಂದು ಪಾತ್ರ ಮಾಡುತ್ತೇನೆ ಎಂಬ ಉದ್ದೇಶವೇ ಇರಲಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ಸಣ್ಣಪುತ್ರ ಪಾತ್ರಗಳಲ್ಲಿ, ವಿಲ್ಲನ್ ಪಾತ್ರಗಳಲ್ಲಿ ನಟಿಸಿದ್ದೇನೆ. ನಮ್ಮ ನಿರ್ದೇಶಕರು ನನ್ನನ್ನು ಕರೆದು ಒಂದೊಳ್ಳೆ ಪಾತ್ರ ಇದೆ ಇದನ್ನು ನೀನೇ ಮಾಡಬೇಕು ಅಂತ ಹೇಳಿದಾಗ ನಾನು ನಂಬಲಾಗಲಿಲ್ಲ. ತಮಾಷೆ ಮಾಡಬೇಡಿ ಅಂತ ಹೇಳಿದೆ. ಈ ಕಥೆಯ ಬಗ್ಗೆ ಕೇಳಿದಾಗ ನನಗೆ ತುಂಬಾ ಎಕ್ಸೈಟ್ ಆಯಿತು. ನಾನು ಮಾಡಬಹುದು ಎಂದು ನಂಬಿದೆ. ಸಂಸಾರ, ಮನೆ, ಮಗು, ಸಂಸಾರದ ಜಂಜಾಟಗಳು ಇದರ ಬಗ್ಗೆ ಕೇಳಿದಾಗ ಸ್ವಲ್ಪ ಕಷ್ಟವೆನಿಸಿತು. ನಿರ್ದೇಶಕರು ನನ್ನನ್ನು ಪ್ರೇರೇಪಿಸಿ ಈ ಚಿತ್ರದಲ್ಲಿ ನಡಿಸುವಂತೆ ಸೂಚಿಸಿದರು.

ಈ ಚಿತ್ರದ ಕಥಾವಸ್ತು ಬಗ್ಗೆ…

ಇಂದಿನ ರೈತಾಪಿ ವರ್ಗ ಆತ್ಮಸ್ಥೈರ್ಯವನ್ನು ಕಳೆದುಕೊಂಡು ಕುಗ್ಗಿಹೋಗಿದ್ದಾರೆ. ಇಡೀ ಜನಸಮುದಾಯಕ್ಕೆ ಊಟ ನೀಡುತ್ತಿರುವುದು ರೈತ ಸಮುದಾಯ. ಅವರ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಒಬ್ಬ ಬೇಜವಾಬ್ದಾರಿ ಸಂಸಾರಿಕ ವ್ಯಕ್ತಿ ಹೇಗೆ ಜವಾಬ್ದಾರಿಯುತನಾಗಿ ಹೇಗೆ ಸಮಸ್ಯೆಗಳನ್ನು ನಿರ್ವಹಿಸುತ್ತಾನೆ ಎಂಬುದನ್ನು ಬಹಳ ಚೆನ್ನಾಗಿ ಜನರಿಗೆ ಅರ್ಥವಾಗುವಂತೆ ಈ ಚಿತ್ರದಲ್ಲಿ ತಿಳಿಸಿದ್ದಾರೆ.

ಈ ಸಿನಿಮಾ ಅದ್ಭುತವಾದ ಹಳ್ಳಿ ಸೊಗಡಿರುವಂತಹ ಸಿನಿಮಾ. ಹಳ್ಳಿ ಎಂದಾಕ್ಷಣ ಯಾವುದೋ ಒಂದು ಹಳ್ಳಿ ಕಥೆ ಇರುತ್ತೆ ಅಂದ್ಕೊಬೇಡಿ. ಒಂದೊಳ್ಳೆ ಲವ್ ಸ್ಟೋರಿ, ಇಡೀ ಸಂಸಾರ ಕುಳಿತು ನೋಡಬಹುದಾದ ಸಾಂಸಾರಿಕ ಚಿತ್ರ. ನಮ್ಮ ರೈತರ ಬದುಕು ನೋಡಿದರೆ ಎಲ್ಲಿ ಬಂದು ನಿಲ್ಲುತ್ತೋ ಗೊತ್ತಿಲ್ಲ. ನಮ್ಮ ಜನ ಸಮುದಾಯ ರೈತರ ಬೆಂಬಲಕ್ಕೆ ನಿಲ್ಲಬೇಕಿದೆ. ಈ ಚಿತ್ರದ ಮೂಲಕ ರೈತರ ಹೋರಾಟಕ್ಕೆ, ರೈತ ಚಳುವಳಿಗೆ ನಮ್ಮ ಬೆಂಬಲವಿದೆ ಅನ್ನುವುದಾದರೆ ದಯವಿಟ್ಟು ನಮ್ಮ ಸಿನಿಮಾ ನೋಡಿ. ನಾವೂ ಸಹ ನಮ್ಮ ಸಿನಿಮಾ ಮೂಲಕ ರೈತರಪರ ಹೋರಾಟ ಮಾಡುವುದಕ್ಕೆ ಹೊರಟಿದ್ದೇವೆ. ನಮ್ಮ ಹೋರಾಟದ ಜೊತೆಗೆ ನಗರ ಪ್ರದೇಶದ ಎಲ್ಲ ಸ್ನೇಹಿತರು, ಬಂಧುಗಳು  ರಣಹೇಡಿ ಸಿನಿಮಾ ನೋಡುವುದರ ಮೂಲಕ ರೈಪರ ಹೋರಾಟಕ್ಕೆ ಬೆಂಬಲ ಸೂಚಿಸಬೇಕು.

ಈ ಚಿತ್ರ ಪ್ರೇಕ್ಷಕರಿಗೆ ಹೇಗೆ ಹತ್ತಿರವಾಗುತ್ತದೆ?

ಪ್ರತಿಯೊಂದೂ ಸೀನ್ ಸಹ ಪ್ರತಿಯೊಬ್ಬರ ಜೀವನಕ್ಕೂ ಕನೆಕ್ಟ್ ಆಗುತ್ತಾ ಹೋಗುತ್ತದೆ. ಒಬ್ಬ ಸಾಫ್ಟ್‌ವೇರ್ ಹುಡಗನ್ನ ಪ್ರೀತಿಸುವುದಕ್ಕೂ ಒಬ್ಬ ಪುಂಡನನ್ನು ಪ್ರೀತಿಸುವುದಕ್ಕೆ ಬಹಳ ವ್ಯತ್ಯಾಸವಿರುತ್ತದೆ. ಹಾಗೆ ಒಬ್ಬ ಸಾಮಾನ್ಯ ಪುಂಡ ಒಂದು ಹುಡುಗಿಯನ್ನು ಪ್ರೀತಿಸಿ ಆ ಹುಡುಗಿಯನ್ನು ನೆಗ್ಲೆಟ್ ಮಾಡುವ, ಹಳ್ಳಿಗಳಲ್ಲಿ ಯಾವ ಜಾತಿಗೂ ಅಳುಕುಂಟುಮಾಡದಂತೆ ಬಹಳ ಸೂಕ್ಷ್ಮವಾಗಿ ಚಿತ್ರೀಕರಿಸಿದ್ದಾರೆ. ಇದರೊಂದಿಗೆ ಇಡೀ ಸಿನಿಮಾದಲ್ಲಿ ಸಂಬಂಧಗಳು ಅಂದರೆ ಅಪ್ಪ-ಮಗ, ಗಂಡ-ಹೆಂಡತಿ, ಸ್ನೇಹಿತರ ಬಾಂಡೇಜ್ ಇರಬಹುದು, ಅಕ್ಕ-ಪಕ್ಕದ ಬಾಂಧವ್ಯಗಳ ಕುರಿತು ಬಹಳ ಅದ್ಭುತವಾಗಿ ತೋರಿಸಿದ್ದಾರೆ.

ಶೂಟಿಂಗ್ ಟೈಮಲ್ಲಿ ಹೇಗಿತ್ತು?

ಚಿತ್ರೀಕರಣದ ಸಂದರ್ಭದಲ್ಲಿ ಎಲ್ಲೂ ನಾವು ನಟಿಸುತ್ತಿದ್ದೇವೆ, ಇಲ್ಲಿ ಕ್ಯಾಮರಾಗಳಿವೆ ಅಂತನಿಸಿರಲಿಲ್ಲ. ಇಡೀ ಸಿನಿಮಾವನ್ನು ಎಂಜಾಯ್ ಮಾಡಿಕೊಂಡು ಮಾಡಿದ್ದೇವೆ. ಡಿಫರೆಂಟ್ ಲೊಕೇಷನ್ಸ್, ಡಿಫರೆಂಟ್ ಜನಗಳೊಂದಿಗೆ ಬೆರೆತು ಕೆಲಸ ಮಾಡಿದ್ದೇವೆ. ಒಂದು ತುಂಬಾ ಆಳವಾದ ಬಾವಿಯೊಳಗೆ, ಬೆಟ್ಟ, ನೀರು ಹರಿಯುವಂತಹ ಚಾನೆಲ್‌ಗಳೊಳಗೆ ಇಳಿದು ಕೆಲಸ ಮಾಡಿದ್ದೇವೆ. ಒಮ್ಮೆ ಒಂದು ಸಾಂಗ್ ಶೂಟ್ ಮಾಡುವಾಗ ಒಂದು ೨೦ ಅಡಿ ಎತ್ತರದ ಅಟ್ಟಣಿಗೆ ಕಟ್ಟಿಸಿದ್ದರು ನಮ್ಮ ನಿರ್ದೇಶಕರು. ಅದನ್ನು ಕಟ್ಟಿ ಎರಡು ಮೂರು ದಿನಗಳಾಗಿರಬೇಕು. ಅಲ್ಲಿ ಮೇಲೆ ಕುಳಿತಿದ್ದಾಗ ಸ್ವಲ್ಪ ಅಲುಗಾಡಿದಂತಾಗುತ್ತಿತ್ತು. ಸ್ವಲ್ಪ ಹೊತ್ತಾದ ನಂತರ ನಾನು ಕೆಳಗೆ ಬಂದು ನೋಡಿದೆ, ಅದು ಮುರಿದುಹೋಗಿತ್ತು. ಒಬ್ಬ ಆರ್ಟ್ ಬಾಯರ್ ಅದನ್ನು ಹಿಡಿದು ಕುಳಿತಿದ್ದ. ಇದು ಗೊತ್ತಾದರೆ ಮತ್ತೆ ಶೂಟಿಂಗ್ ಮುಂದೂಡಬಹುದು ಎಲ್ಲರಿಗೂ ತೊಂದರೆಯಾಗಬಹುದು ಎಂಬ ಕಾರಣಕ್ಕಾಗಿ ಆತ ಯಾರಿಗೂ ಹೇಳಿರಲಿಲ್ಲ. ಸುಮಾರು ಒಂದು ಗಂಟೆಯ ಕಾಲ ಶೂಟಿಂಗ್ ಮುಂದುವರೆಸಿದ್ದೆವು. ಶೂಟಿಂಗ್ ಮುಗಿದು ಕೆಳಗೆ ಬಂದಾಕ್ಷಣ ಆ ಸೆಟ್ ಕೊಲ್ಯಾಪ್ಸ್ ಆಯ್ತು. ಇದನ್ನ ನೋಡಿ ಎಲ್ಲರಿಗೂ ಭಯವಾಯಿತು.

ಇನ್ನಷ್ಟು ಓದಿರಿ

Scroll to Top